ಮಂಗಳೂರು,ಜ.30 : ಚುಟುಕು ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಮತ್ತು ತುಳು ಸಂಘ, ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ಪ್ರೊ.ಡಿ.ವೇದಾವತಿ ಇವರ ‘ಹರಿಹರನ ರಗಲೆಲು’ ತುಳು ಕೃತಿ ಅವಲೋಕನ ಹಾಗೂ ತುಳು ಕವಿಗೋಷ್ಠಿಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಯಾವುದೇ ಕೃತಿಯ ಅನುವಾದವು ಮೂಲ ಕೃತಿಗೆ ಚ್ಯುತಿ ತರುವಂತದ್ದಾಗಿರಬಾರದು.
ಅನುವಾದ ಮಾಡುವುದು ಸುಲಭ ಕಾರ್ಯವಲ್ಲ ಅದಕ್ಕೆ ಎರಡೂ ಭಾಷೆಗಳ ಹಿಡಿತವಿರಬೇಕು. ಹರಿಹರನ ರಗಳೆಗಳು ಎಂಬ ಪುಸ್ತಕವನ್ನು ಪ್ರೊ.ಡಿ ವೇದಾವತಿಯವರು ಆಳವಾದ ಅಧ್ಯಯನ ನಡೆಸಿ ತುಳು ಭಾಷೆಗೆ ಅನುವಾದಿಸಿದ್ದಾರೆ. ತುಳು ಸಾಹಿತ್ಯದ ಬೆಳವಣಿಗೆಗೆ ಇಂತಹ ಕಾರ್ಯಗಳ ಅಗತ್ಯವಿದೆ ಎಂದು ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ಡಾ.ವಸಂತಕುಮಾರ್ ಪೆರ್ಲ ಅಭಿಪ್ರಾಯಪಟ್ಟರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಯಶವಂತ ಡಿ.ಎಸ್ ಪ್ರಸ್ತಾವಿಕ ಭಾಷಣಗೈದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಪ್ರೊ.ಡಿ.ವೇದಾವತಿಯವರು ಮಾತನಾಡಿ ತುಳುನಾಡಿನಲ್ಲಿ ದಾಸ ಸಾಹಿತ್ಯಕ್ಕಿಂತ ಶೈವ ಸಾಹಿತ್ಯದ ಲಭ್ಯತೆ ವಿರಳವಾಗಿದೆ ಎಂದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಮೀನಾಕ್ಷಿ ರಾಮಚಂದ್ರ ಗಮಕ ವಾಚನಗೈದರು. ನಂತರ ಹಿರಿಯ ಕವಿಗಳಾದ ಶಿವಾನಂದ ಕರ್ಕೇರ, ಸದಾನಂದ ನಾರಾವಿ, ವಿದ್ಯಾರ್ಥಿಗಳಾದ ನಿಖಿತಾ, ಅಕ್ಷತಾ, ಲಕ್ಷ್ಮಿ ಇವರಿಂದ ಕವಿಗೋಷ್ಠಿ ಜರುಗಿತು ತುಳು ಸಂಘದ ಸಂಚಾಲಕಿ ಉಪನ್ಯಾಸಕಿ ಶ್ರೀಮತಿ ಜ್ಞಾನೇಶ್ವರಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ|| ಸುಧಾ ಕೆ. ರವರು ಉಪಸ್ಥಿತರಿದ್ದರು. ತುಳು ಸಾಹಿತ್ಯ ಪರಿಷತ್ತಿನ ಸದಸ್ಯ, ಕೆ.ಪ.ಪೂ ಕಾಲೇಜಿನ ಉಪನ್ಯಾಸಕ ರಘ ಇಡ್ಕಿದು ವಂದಿಸಿದರು. ಸಂಘದ ಕಾರ್ಯದರ್ಶಿ ಕುಮಾರಿ ರಕ್ಷಿತಾ ನಿರೂಪಿಸಿದರು.