ನವದೆಹಲಿ: ರೂಪಾಯಿ ನೋಟುಗಳ ಮೇಲೆ ಮಹಾತ್ಮಗಾಂಧಿ ಭಾವಚಿತ್ರ ಹೊರತು ಪಡಿಸಿ ಬೇರೆ ನಾಯಕರ ಭಾವಚಿತ್ರಗಳನ್ನು ಮುದ್ರಿಸುವ ಅವಕಾಶ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಪಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ 2010ರಂದು ವಿಶೇಷ ತಂಡ ರಚನೆ ಮಾಡಿತ್ತು. ಈ ತಂಡವು ಭವಿಷ್ಯದಲ್ಲಿ ರೂಪಾಯಿ ನೋಟುಗಳ ಮೇಲೆ ಇತರೆ ನಾಯಕರ ಭಾವಚಿತ್ರವನ್ನು ಮುದ್ರಿಸುವ ಕುರಿತು ಚರ್ಚೆ ನಡೆಸಿತ್ತು.
ಈ ಸಂಬಂಧ ಸಂಸತ್ತಿನಲ್ಲಿಂದು ಪ್ರಶ್ನೆ ಪ್ರತಿಧ್ವನಿಸಿತು. ಇದಕ್ಕೆ ಉತ್ತರ ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಲಿಖಿತ ಪತ್ರದ ಮೂಲಕ ಉತ್ತರ ನೀಡಿದರು.
ಆರ್ಬಿಐ ನಿಂದ ರಚಿತಗೊಂಡಿರುವ ಮಹಾತ್ಮ ಗಾಂಧಿಯನ್ನು ಹೊರತುಪಡಿಸಿ ಮತ್ತೆ ಬೇರೆ ನಾಯಕರ ಭಾವಚಿತ್ರಗಳನ್ನು ರೂಪಾಯಿ ನೋಟುಗಳ ಮೇಲೆ ಮುದ್ರಿಸುವ ನಿರ್ಧಾರ ಹೊಂದಿಲ್ಲ ಎಂದು ಜೇಟ್ಲಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ವಿವಿಧ ಬ್ಯಾಂಕುಗಳ ಎಟಿಎಂ ಮೆಶಿನ್ಗಳಿಂದ ತೆಗೆಯಲ್ಪಡುವ ರೂಪಾಯಿ ನೋಟುಗಳಲ್ಲಿ ನಕಲಿ ನೋಟುಗಳು ಸೇರ್ಪಡೆಯಾಗುವುದರ ಕುರಿತು ಇಲ್ಲಿಯವರೆಗೆ 21 ಪ್ರಕರಣಗಳು ರಿಸರ್ವ್ ಬ್ಯಾಂಕಿನಲ್ಲಿ ದಾಖಲಾಗಿದೆ. ಈ ಕುರಿತು ಸಂಬಂಧಿಸಿದ ಬ್ಯಾಂಕುಗಳಿಂದ ವರದಿ ನೀಡುವಂತೆ ಕೋರಲಾಗಿದೆ ಎಂದು ಜೇಟ್ಲಿ ಹೇಳಿದರು.