ಕರ್ನಾಟಕ

ಗದಗ ಹಾಸ್ಟೆಲ್ ವಿದ್ಯಾರ್ಥಿನಿಯ ಬರ್ತ್ ಡೇ ಆಚರಣೆ: ಕೇಕ್ ಕತ್ತರಿಸಿ‌‌ ಶುಭ ಕೋರಿದ ಸಚಿವ ಕೋಟ

Pinterest LinkedIn Tumblr

ಗದಗ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗದಗದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ವಸತಿ ನಿಲಯದ ವಿದ್ಯಾರ್ಥಿನಿ ಸ್ಮಿತಾ ಸಚಿವರ ಬಳಿ ಬಂದು ‘ಇಂದು ನನ್ನ ಜನ್ಮದಿನ. ಅದಕ್ಕಾಗಿ ನೀವೇ ಕೇಕ್‌ ಕತ್ತರಿಸಬೇಕು ಎಂದು ಬೇಡಿಕೆ ಇಟ್ಟಳು. ವಿದ್ಯಾರ್ಥಿನಿಯ ಪ್ರೀತಿಯ ಒತ್ತಾಯಕ್ಕೆ ಮಣಿದ ಸಚಿವರು, ಕೇಕ್‌ ಕತ್ತರಿಸಿ ಶುಭಾಶಯ ತಿಳಿಸಿದರು. ಜನ್ಮದಿನವನ್ನು ಸಚಿವರ ಜತೆಗೆ ಆಚರಿಸಿಕೊಂಡ ವಿದ್ಯಾರ್ಥಿನಿಯ ಸಂತಸಕ್ಕೆ‌ ಪಾರವೇ ಇರಲಿಲ್ಲ.

ಬಳಿಕ ಸಚಿವರು, ವಸತಿ ನಿಲಯದಲ್ಲಿ ಒದಗಿಸಲಾಗುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಇಲಾಖೆ ‘ವ್ಯಾಪ್ತಿಯ ಎಲ್ಲ ವಸತಿ ನಿಲಯಗಳಲ್ಲಿ ಗುಣಮಟ್ಟದ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲಾಗುವುದು. ಪ್ರೋತ್ಸಾಹ ಧನ ಬಿಡುಗಡೆಗೆ ಶೀಘ್ರ ಕ್ರಮ ಜರುಗಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾ ಪಂಚಾಯ್ತಿ ಸಿಇಒ ಭರತ್‌ ಎಸ್., ಎಸ್‌ಸಿಎಸ್‌ಪಿ, ಟಿಎಸ್‌ಪಿ ಕೋಶದ ನಿರ್ದೇಶಕಿ ಊರ್ಮಿಳಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಈ ಸಂದರ್ಭದಲ್ಲಿ ಇದ್ದರು.

 

Comments are closed.