(ವಿಶೇಷ ವರದಿ- ಯೋಗೀಶ್ ಕುಂಭಾಸಿ)
ಬೈಂದೂರು: ಕರಾವಳಿಯ ಮೀನಿಗೆ ಎಲ್ಲೆಡೆ ಹೆಚ್ಚು ಬೇಡಿಕೆ. ಇತ್ತೀಚೆಗೆ ಕೆಲವು ವರ್ಷಗಳಿಂದ ನದಿಯಲ್ಲಿ ಪಂಜರವಿಟ್ಟು ಬೆಳೆಸುವ ವಿವಿಧ ರೀತಿಯ ಮೀನುಗಳಿಗೆ ಬಾರೀ ಬೇಡಿಕೆ ಬರುತ್ತಿದೆ. ಪಂಜರ ಮೀನು ಕೃಷಿ, ಪಚ್ಚಿಲೆ ಕೃಷಿ ಜೊತೆಗೆ ಈ ಬಾರಿ ಸೀವೀಡ್ ಕೃಷಿಯು ರಾಜ್ಯದಲ್ಲಿಯೇ ಮೊದಲ ಬಾರಿಗೆ ಉಪ್ಪುಂದ ಕರ್ಕಿಕಳಿಯಲ್ಲಿ ಪ್ರಯೋಗ ಮಾಡಿದ್ದು ಯಶಸ್ವಿಯಾಗಿ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದೆ.
ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಜರ ಮೀನುಕೃಷಿಯ ತವರು. ಅಲ್ಲಿ ಆರಂಭಗೊಂಡ ಪಂಜರ ಮೀನು ಕೃಷಿ ಬಳಿಕ ಜಿಲ್ಲೆಯ ಹಲವೆಡೆ ವ್ಯಾಪಿಸಿತು. ಈ ಭಾಗದಲ್ಲಿ ಕಳೆದ ಒಂದೂವರೆ ದಶಕಗಳಿಂದ ಪಂಜರ ಮೀನು ಕೃಷಿಯಲ್ಲಿ ತೊಡಗಿಸಿಕೊಂಡು ಸೀ ಬಾಸ್, ಸಿಲ್ವರ್ ಪಾಂಪೆನೋ ಮೊದಲಾದ ತಳಿ ಮೀನುಗಳನ್ನು ಬೆಳೆಯುತ್ತಿದ್ದ ಚಂದ್ರ ಖಾರ್ವಿ ಹಾಗೂ ಗಣೇಶ್ ಎನ್ನುವರ ಕಳೆದ ಒಂದೆರಡು ವರ್ಷಗಳಿಂದ ಪಚ್ಚಿಲೆ ಬೆಳೆದು ಯಶಸ್ವಿಯಾಗಿದ್ದರು. ಹೀಗೆ ಈ ಬಾರಿ ಮೊದಲ ಪ್ರಯೋಗ ಎಂಬಂತೆ ಸೀವೀಡ್ (ಜಲಸಸ್ಯ) ಬೆಳೆದಿದ್ದು 45 ದಿನಗಳಲ್ಲಿ ಸೀವೀಡ್ ಉತ್ತಮ ಬೆಳವಣಿಗೆ ಕಂಡುಬಂದಿದ್ದು ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದಾರೆ.
ಮೀನುಗಾರರಾಗಿರುವ ಇಬ್ಬರು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಹೈದರಾಬಾದ್ (ಎನ್.ಎಫ್.ಡಿ.ಬಿ.) ಪ್ರಾಯೋಜಿತ ಕಾರ್ಯಕ್ರಮ ಇದಾಗಿದ್ದು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರ (ಸಿ.ಎಂ.ಎಫ್.ಆರ್.ಐ) ಮೂಲಕ ಮಂಗಳೂರು ಪ್ರಾದೇಶಿಕ ಕೇಂದ್ರ ಈ ಯೋಜನೆ ಅನುಷ್ಟಾನಗೊಳಿಸಿದ ಬಹುಸ್ಥರ ಸಮಗ್ರ ಜಲಕೃಷಿ ಅಳವಡಿಸಿಕೊಂಡಿದ್ದಾರೆ. ಈ ಬಾರಿ ತಾಲೂಕಿನ ಕರ್ಕಕಳಿ ಎಂಬಲ್ಲಿನ ನದಿಯಲ್ಲಿ ಪಂಜರ ಮೀನು ಕೃಷಿ ಮಾಡಿದ್ದು 5-6 ತಿಂಗಳ ಒಳಗೆ ಉತ್ತಮವಾಗಿ ಬೆಳೆಯಬಲ್ಲ, ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿರುವ ಸಿಲ್ವರ್ ಪಾಂಪೆನೊ (ಹೊಳೆ ಮಾಂಜಿ, ಹೊಳೆ ಪಾಂಪ್ರೆಟ್), ಪಚ್ಚಿಲೆ ಕೃಷಿ ಮಾಡಿದ್ದು ಸೀವೀಡ್ ಕೂಡ ಹಾಕಿದ್ದಾರೆ.
ಸೀವೀಡ್ ಕೃಷಿ ಮಾಡುವುದು ಹೇಗೆ?: ಕಪ್ಪಾಫೈಕಸ್ ಆಲ್ವರೇಝಿ ಎಂಬ ಜಲಸಸ್ಯವನ್ನು (ತಮಿಳುನಾಡಿನ ಮಂಡಪಮೌನಲ್ಲಿ) ತಂದು ಮೀನುಗಾರಿಕೆಗೆ ಉಪಯೋಗವಾಗುವ ಬಲೆಯಿಂದ ವೃತ್ತಾಕಾರದ ಟ್ಯೂಬ್ ಗಳನ್ನು ತಯಾರಿಸಿ ಅದರಲ್ಲಿ ಸೀವೀಡ್ ಹಾಕಿ 10 ಅಡಿ ಉದ್ದ ಮತ್ತು 10 ಅಡಿ ಅಗಲದ ಪ್ಲಾಸ್ಟಿಕ್ ಪೈಪ್ನಿಂದ ತಯಾರಿಸಿದ ರಾಫ್ಟ್ಗಳಲ್ಲಿ ಕಟ್ಟಿ ಪಚ್ಚಿಲೆ ಮತ್ತು ಮೀನುಕೃಷಿ ಪಂಜರದೊಂದಿಗೆ ಬಿಡಬೇಕು. ಕರ್ಕಿಕಳಿಯಲ್ಲಿ ಮಾರ್ಚ್ 2025ರ ಕೊನೆಯ ವಾರದಲ್ಲಿ ತಂದು ಈ ಪ್ರಾತ್ಯಕ್ಷಿಕೆಗೆ ಬಳಸಲಾಗಿತ್ತು. ಸುಮಾರು 45 ದಿನಗಳ ಅವಧಿಗೆ ಇಟ್ಟು ಕೃಷಿ ಕೈಗೊಳ್ಳಲಾಗಿತ್ತು. ಪ್ರತೀ ಟ್ಯೂಬ್ನಲ್ಲಿ ಇರಿಸಲಾಗಿದ್ದ 2 ಕೆ.ಜಿ. ಸೀವೀಡ್ ಸುಮಾರು 6 ರಿಂದ 7 ಕೆ.ಜಿಯಷ್ಟು ಬೆಳವಣಿಗೆಯಾಗಿದ್ದು ಮೀನುಗಾರರಿಬ್ಬರು ಮುಂದೆಯೂ ಸೀವೀಡ್ ಕೃಷಿ ಮಾಡುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆ ಕೈಗೊಳ್ಳಲಾದ ಸಿಲ್ವರ್ ಪೊಂಪ್ಯಾನೊ ಮೀನುಕೃಷಿ ಮತ್ತು ಪಚ್ಚಿಲೆ ಕೃಷಿಯು ಉತ್ತಮವಾಗಿ ಬೆಳೆದಿದೆ.
ಸೀವೀಡ್ ಉಪಯೋಗ: ಕಪ್ಪಾಫೈಕಸ್ ಆಲ್ವರೇಝಿ ಎಂಬ ಜಲಸಸ್ಯ (ಸೀವೀಡ್) ಐಸ್ಕ್ರೀಂ ಮೇಲಿನ ಜೆಲ್ಲಿ, ಔಷಧ, ಸೌಂದರ್ಯವರ್ಧಕಗಳಲ್ಲಿ ಬಳಕೆ, ಗೊಬ್ಬರ ಮಾಡಲು ಕೆಲವು ಸೀವೀಡ್ ಉಪಕಾರಿ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಲಾಡ್ ಮಾಡಿ ತಿನ್ನುವ ಪರಿಪಾಠವಿದ್ದು ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹಾಗೆಯೇ ನೀರಿನಲ್ಲಿರುವ ತಾಜ್ಯ ವಸ್ತುಗಳನ್ನು ಸೀವೀಡ್ ಹೀರುವುದರಿಂದ ನೀರಿನ ಗುಣಮಟ್ಟ ಹೆಚ್ಚುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ರಾಜ್ಯದಲ್ಲೆ ಪ್ರಥಮ: ಉಡುಪಿ ಜಿಲ್ಲೆಯ ಕರ್ಕಿಕಳಿಯಲ್ಲಿ ಬಹುಸ್ತರ ಮೀನು ಕೃಷಿ ನಡೆಸುವ ಚಿಂತನೆಯಡಿ ‘ಸಿಲ್ವರ್ ಪೊಂಪೆನೊ’ ಹಾಗೂ ‘ಪಚ್ಚಿಲೆ’ ಜೊತೆಗೆ ‘ಸೀವೀಡ್’ ಬೆಳೆಯುವ ಪರಿಣಾಮಕಾರಿ ಯೋಜನೆಗೆ ಮುಂದಾಗಿದ್ದು ಪ್ರಸಕ್ತ ಜಿಲ್ಲೆಯಲ್ಲಿ ‘ಸಮಗ್ರ ಬಹುಸ್ಥರ ಜಲಕೃಷಿ’ಯಡಿ ಮೀನು, ಪಚ್ಚಿಲೆ, ಸೀವೀಡ್ ಸಾಕಿದ್ದಾರೆ. ಸೀವೀಡ್ ಕೃಷಿ ರಾಜ್ಯದಲ್ಲೆ ಪ್ರಥಮ. ಈಗಾಗಾಲೇ ಗುಜರಾತ್ ಹಾಗೂ ತಮಿಳುನಾಡಿನಲ್ಲಿ ಸೀವೀಡ್ ಕೃಷಿ ಯಶಸ್ಸು ಕಂಡಿದೆ.
ರಾಷ್ಟ್ರೀಯ ಮೀನುಗಾರಿಕೆ ಅಭಿವೃ್ದ್ಧಿ ಮಂಡಳಿ ಪ್ರಾಯೋಜಿತ ಕಾರ್ಯಕ್ರಮ ಇದಾಗಿದೆ. ಸಮಗ್ರ ಮೀನು ಕೃಷಿಯಲ್ಲಿ ಒಂದು ಪ್ರಬೇಧದ ಜೀವಿಗಳು ಸೇವಿಸಿದ ನಂತರ ಉಳಿಯುವ ಹಾಗೂ ತ್ಯಜಿಸುವ ಆಹಾರವನ್ನು ಉಪಯೋಗಿಸಿ ಇನ್ನೊಂದು ಜೀವಿಯು ಬೆಳವಣಿಗೆ ಹೊಂದುವುದರಿಂದ ಕಡಿಮೆ ಖರ್ಚಿನಲ್ಲಿ ಮೀನುಗಾರರು ಹೆಚ್ಚು ಇಳುವರಿ ಪಡೆದು ಅಧಿಕ ಲಾಭಗಳಿಸಲು ಅನುಕೂಲವಾಗಿದೆ. ಈಗಾಗಲೇ ಕಳೆದ ವರ್ಷ ಈ ತಂತ್ರಜ್ಞಾನದ ಉಪಯೋಗದಿಂದ ಕರಾವಳಿಯ ಮೀನು ಕೃಷಿಕರ ಜೀವನೋಪಾಯಕ್ಕೆ ಉತ್ತೇಜನ ನೀಡಲು ಮೀನು ಮತ್ತು ಪಚ್ಚಿಲೆ ಕೃಷಿಯ ಸಮಗ್ರ ಕೃಷಿಯ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ತಲ್ಲೂರು, ಪಡುತೋನ್ಸೆ, ಕೋಡೇರಿ ಮತ್ತು ತಾರಾಪತಿಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿತ್ತು. ಈ ಬಾರಿ ಪಂಪೆನೋ, ಪಚ್ಚಿಲೆ ಜೊತೆಗೆ ಸೀವೀಡ್ ಕರ್ಕಿಕಳಿಯಲ್ಲಿ ಸೀವೀಡ್ ಕೃಷಿ ಯಶಸ್ವಿಯಾಗಿ ಮಾಡಲಾಗಿದೆ.– ಡಾ. ರಾಜೇಶ್ ಕೆ.ಎಂ (ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ)
ಎನ್.ಎಫ್.ಡಿ.ಬಿ. ಹಾಗೂ ಸಿ.ಎಂ.ಎಫ್.ಆರ್.ಐ, ಮೀನುಗಾರಿಕೆ ಇಲಾಖೆಯವರ ಪ್ರೋತ್ಸಾಹ, ಮುತುವರ್ಜಿಯಲ್ಲಿ 2008-09 ಸಾಲಿನಿಂದ ಪಂಜರ ಮೀನು ಕೃಷಿ ಮಾಡುತ್ತಿದ್ದು ಉಪ್ಪುಂದ ಪಂಜರ ಮೀನು ಕೃಷಿಯ ತವರೂರು. ಈ ಬಾರಿ ಪಂಪೆನೋ ಮೀನು, ಹಸಿರು ಪಚ್ಚಿಲೆ, ಸೀವೀಡ್ ಕೃಷಿ ಮಾಡಿದ್ದೇವೆ. ಪಂಪೆನೋಗೆ ಹಾಕಿದ ಆಹಾರ ಪಚ್ಚಿಲೆ ಹಾಗೂ ಸೀವೀಡ್ ಬಳಸುತ್ತದೆ. ಹೀಗಾಗಿ ಕಡಿಮೆ ವೆಚ್ಚ ಸಾಕು. ಕರ್ನಾಟಕದಲ್ಲಿ ಸೀವೀಡ್ ಪ್ರಥಮವಾಗಿ ನಾವು ಬೆಳೆಸಿದ ಹೆಗ್ಗಳಿಕೆ ಇದೆ. ಈಗ ತಮಿಳುನಾಡಿಗೆ ತೆರಳಿ ಮೀನು ಮರಿ, ಸೀವೀಡ್ಗಳನ್ನು ತರಬೇಕಾದ ಅನಿವಾರ್ಯತೆಯಿದ್ದು ಸ್ಥಳೀಯವಾಗಿ ನಮಗೆ ಸಿಕ್ಕಲ್ಲಿ ಇನ್ನಷ್ಟು ಅನುಕೂಲವಾಗಲಿದೆ.- ಚಂದ್ರ ಖಾರ್ವಿ ಕರ್ಕಿಕಳಿ, ಗಣೇಶ್ (ಪಂಜರ ಮೀನು ಕೃಷಿ ಮಾಡುವವರು)
Comments are closed.