ಕರಾವಳಿ

ನಾಳೆ ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ : ಅಮಾವಾಸ್ಯೆ ಹಾಗೂ “ರವಿ”ವಾರವೇ ಬಂದಿರುವ ಗ್ರಹಣದ ಬಗ್ಗೆ ಇಲ್ಲಿದೆ ಎಲ್ಲಾ ಮಾಹಿತಿ

Pinterest LinkedIn Tumblr

ಗ್ರಹಣಕಾಲದಲ್ಲಿ ಪಾಲಿಸ ಬೇಕಾದ ಆಚರಣೆಗಳು,ಭೋಜನ ವಿಚಾರ,ಶ್ಲೋಕ,ಪರಿಹಾರ, ಶಾಂತಿ ವಿಚಾರ… ಇಲ್ಲಿದೆ ಸಂಪೂರ್ಣ ವಿವರ

ಮಂಗಳೂರು, ಜೂನ್.20: ಶ್ರೀ ಶಾರ್ವರಿ ನಾಮ ಸಂವತ್ಸರದ ಜ್ಯೇಷ್ಠ ಕೃಷ್ಣ ಅಮಾವಾಸ್ಯೆ 21-06 -2020 ರವಿವಾರ, ಮೃಗಶಿರ ಹಾಗೂ ಆರಿದ್ರಾ ನಕ್ಷತ್ರದಲ್ಲಿ ಮಿಥುನ ರಾಶಿಯಲ್ಲಿ, ಸಿಂಹ  ಮತ್ತು ಕನ್ಯಾ ಲಗ್ನಗಳಲ್ಲಿ ರಾಹುಗ್ರಸ್ತ ಸೂರ್ಯಗ್ರಹಣ ಸಂಭವಿಸುತ್ತದೆ.

ಗ್ರಹಣ ಸಮಯ :  21/06/2020 ರವಿವಾರ ಸೂರ್ಯೋದಯ ನಂತರ  03 ಗಂಟೆ ‌19 ನಿಮಿಷಗಳ ಕಾಲ….
ಗ್ರಹಣ ಸ್ಪರ್ಶ ಕಾಲ : ಬೆಳಿಗ್ಗೆ 10-13 am
ಗ್ರಹಣ ಮಧ್ಯ ಕಾಲ : ಬೆಳಿಗ್ಗೆ 11-52 am
ಗ್ರಹಣ ಮೋಕ್ಷ ಕಾಲ : ಮಧ್ಯಾಹ್ನ 01-32 pm
ಗ್ರಹಣವು ಭಾರತ ದೇಶಕ್ಕೆ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ.
ಜ್ಯೇಷ್ಠ ಮಾಸದ ಕೃಷ್ಣ ಅಮಾವಾಸ್ಯೆ ಯಂದು ರಾಹುಗ್ರಸ್ತ ಚೂಡಾಮಣಿ ಸೂರ್ಯ ಗ್ರಹಣ ಸಂಭವಿಸಲಿದ್ದು, ಸ್ಪರ್ಶ ಕಾಲ 21/06/2020 ಬೆಳಿಗ್ಗೆ 10-13 ರಿಂದ ಪ್ರಾರಂಭವಾಗಿ ಬೆಳಿಗ್ಗೆ 01-32 ಕ್ಕೆ ಮೋಕ್ಷ ಕಾಲವಾಗಿರುತ್ತದೆ.

1. ಭೋಜನ ವಿಚಾರ :
ತಾ || 20-06-2020 ಶನಿವಾರ ಈ ರಾತ್ರಿ ರಾತ್ರಿ 09-35 ಗಂಟೆಯವರೆಗೂ ಆಹಾರ ಸೇವಿಸಬಹುದು.

2. ತರ್ಪಣ ವಿಚಾರ :
ತಾ || 21-06-2020 ರವಿವಾರ ಸೂರ್ಯೋದಯಾದಿ ಗ್ರಹಣ ಸ್ಪರ್ಶ ಕಾಲದಿಂದ ಮಧ್ಯಕಾಲದೊಳಗೆ ಅಂದರೆ ಹಗಲು 10-13 ರಿಂದ 11-52 ಗಂಟೆಯವರೆಗೆ ತರ್ಪಣ ಮಾಡುವುದು.

3. ಶ್ರಾದ್ಧ ವಿಚಾರ :21-06-2020 ರವಿವಾರ ಗ್ರಹಣವು ಅಪರಾಹ್ನ 01:32 ಗಂಟೆಯವರೆಗೆ ನಡೆಯುವುದರಿಂದ, ಆಷಾಢ ಶುಕ್ಲ ಪ್ರಥಮ ಶ್ರಾದ್ಧವನ್ನು ಗ್ರಹಣ ಮೋಕ್ಷ ಕಾಲದ ನಂತರ ನಡೆಸುವುದು.

4.ಶಾಂತಿ ವಿಚಾರ :
ಮೃಗಶಿರ ಮತ್ತು  ಆರಿದ್ರಾ ನಕ್ಷತ್ರದವರೂ, ಮಿಥುನ  ರಾಶಿಯವರೂ ಸಿಂಹ ಹಾಗೂ ಕನ್ಯಾ ಲಗ್ನಗಳಲ್ಲಿ ಜನಿಸಿದವರೂ ಇಲ್ಲಿ ಕೊಟ್ಟಿರುವ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದು ಗ್ರಹಣ ಮುಗಿಯುವ ವರೆಗೂ ತಮ್ಮಲ್ಲಿಟ್ಟುಕೊಂಡು, ಗ್ರಹಣ ಮೋಕ್ಷಾ ನಂತರ ಯಥಾಶಕ್ತಿ ದಕ್ಷಿಣೆ ಸಮೇತ ದಾನ ಮಾಡತಕ್ಕದ್ದು.

ಶ್ಲೋಕ :
ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 || ‌

 ಗ್ರಹಣಕಾಲದಲ್ಲಿ ಪಾಲಿಸ ಬೇಕಾದ ಆಚರಣೆಗಳು : 
ಗ್ರಹಣದ ಆಚರಣೆ ಶಾಸ್ತ್ರದ ವಚನ, ಎಂದರೆ ಭಗವಂತನ ಆದೇಶ. ಪರಮಾತ್ಮ ನಮ್ಮ ಬದುಕಿಗೆ ಹಾಕಿದ ಸಂವಿಧಾನ ಅದು. ಅವಶ್ಯವಾಗಿ ಆಚರಣೆ ಮಾಡಲೇಬೇಕು. ಗ್ರಹಣ ಕಾಲವನ್ನು ಸೂತಕ ಸಮಯ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಆ ಸಮಯ ಬಹಳ ಅಶುಭ ಕಾಲವಾಗಿರುತ್ತದೆ.

1. ಗ್ರಹಣದ ಆರಂಭ ಅಂತ್ಯಗಳಲ್ಲಿ ಸ್ನಾನವನ್ನು ಮಾಡಲೇಬೇಕು.

2. ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ. ‌ ‌

3.ಸೂರ್ಯ ಗ್ರಹಣದ ಸೂತಕವು ಗ್ರಹಣ ಆರಂಭದ ಹನ್ನೆರಡು ಗಂಟೆಗಳ ಮೊದಲು ಆರಂಭವಾಗುತ್ತದೆ. ಗ್ರಹಣ ಮೋಕ್ಷ ಕಾಲದ ನಂತರ ಮಾಡುವ ಸ್ನಾನದ ನಂತರ ಸೂತಕ ಮುಕ್ತಾಯವಾಗುತ್ತದೆ.

4. ಗ್ರಹಣ ಕಾಲದಲ್ಲಿ ಯಾವುದೇ ದ್ರವ ಅಹಾರವಾಗಲಿ ಅಥವಾ ಘನ ಆಹಾರವಾಗಲಿ ಸ್ವೀಕರಿಸಬಾರದು. ‌ ‌ ‌

5. ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು. ‌ ‌ ‌ ‌

6. ದೇವಾಲಯ ಅಥವಾ ಸ್ಥಳಗಳಿಗೆ ಪ್ರವೇಶ ಹಾಗೂ ದೇವರ ಮೂರ್ತಿಗಳ ಸ್ಪರ್ಶವನ್ನು ಮಾಡಬಾರದು. ‌ ‌ ‌ ‌ ‌ ‌

7. ಶೌಚಾಲಯದ ಬಳಕೆಯನ್ನು ಮಾಡಬಾರದು. ‌ ‌ ‌ ‌ ‌

8. ಗ್ರಹಣ ಕಾಲದಲ್ಲಿ ಲೈಂಗಿಕ ಸಂಪರ್ಕ ಯಾವುದೇ ಕಾರಣಕ್ಕೂ ಮಾಡಬಾರದು ಹಾಗೂ ಅಲಂಕಾರ ಮಾಡಿಕೊಳ್ಳಬಾರದು. ‌ ‌ ‌

9. “ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುಸೂತಕೇ” ಎಲ್ಲಾ ವರ್ಣದವರೂ ಗ್ರಹಣ ಕಾಲದಲ್ಲಿ ಮೈಲಿಗೆಯನ್ನು ಆಚರಿಸಬೇಕು.

10. ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಗೋಮೂತ್ರವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸಬೇಕು. ‌ ‌ ‌

11. ಜನನ ಶೌಚವಿರುವವರು, ಮೃತ ಶೌಚವಿರುವವರು ಮತ್ತು ರಜಸ್ವಲೆಯಾದವರೂ ಸಹ ಗ್ರಹಣದ ಸ್ಪರ್ಶಸ್ನಾನ, ಮುಕ್ತಿಸ್ನಾನಗಳನ್ನು ಮಾಡಲೇಬೇಕು. ಆದರೆ, ಅವರು ಜಪ ಪಾರಾಯಣಗಳನ್ನು ಮಾಡಬಾರದು.

12. ಗ್ರಹಣದ ಎರಡೂ ಸ್ನಾನಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.

13‌. ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಸರ್ವೋತ್ತಮ.

14. ಗ್ರಹಣಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು ಎಂದು ಯಮನ ಆದೇಶವಿದೆ. ತೀರ ಅಶಕ್ತ ರಾದವರು ಮಾತ್ರ ಬಿಸಿನೀರಿನಿಂದ ಸ್ನಾನವನ್ನು ಮಾಡಬೇಕು.

15. ಯಾರ ಮನೆಯಲ್ಲಿ ಬಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು. ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆ ಅಂತಹವರು ನೀರಿನ ಪಾತ್ರೆಗಳ (ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇತರೆ) ಮೇಲೆ ದರ್ಭೆಯನ್ನು ಹಾಕಿರಬೇಕು.

16. ಗ್ರಹಣ ಆರಂಭದಿಂದ ಅಂತ್ಯದ ಕಾಲದವರೆಗೂ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು. ಹೋಮ, ಶ್ರಾದ್ಧ, ಪಾರಾಯಣ, ದಾನಗಳನ್ನು ಮಾಡಬೇಕು. ‌ ‌ ‌ ‌ ‌

ಸೂಚನೆ: ಆ ದಿನ ಗ್ರಹಣ ಮೋಕ್ಷ ಕಾಲದವರೆಗೂ ಯಾರೂ ಆಹಾರವನ್ನು ಸ್ವೀಕರಿಸಬಾರದು. ‌‌ ‌ ‌ ‌ ‌

ರಾಶಿಗಳಿಗೆ ಗ್ರಹಣ ಫಲ ಶುಭ ಫಲ : ಸಿಂಹ, ಕನ್ಯಾ, ಮಕರ, ಮೇಷ,  ಮಿಶ್ರ ಫಲ,ತುಲಾ, ಧನಸ್ಸು, ಕುಂಭ, ವೃಷಭ  ಅಶುಭ ಫಲ,ಮಿಥುನ, ಕಟಕ, ವೃಶ್ಚಿಕ, ‌ಮೀನ ‌ ‌ ‌ ‌

ಪರಿಹಾರ :  ಮೃಗಶಿರ ಮತ್ತು ಆರಿದ್ರಾ ನಕ್ಷತ್ರ ಸಂಜಾತರು ಹಾಗೂ ಮಿಥುನ ರಾಶಿಯಲ್ಲಿ ಜನಿಸಿದವರು ಹಾಗೂ  ಸಿಂಹ ಮತ್ತು  ಕನ್ಯಾ ಲಗ್ನದಲ್ಲಿ ಜನಿಸಿದವರು ಅವಶ್ಯವಾಗಿ ಗ್ರಹಣ ಶಾಂತಿಯನ್ನು ಮಾಡಿಸಿಕೊಳ್ಳಲೇಬೇಕು. ‌ ‌

ದಾನ : ಕೆಂಪು ವರ್ಣದ ವಸ್ತ್ರದೊಂದಿಗೆ ಗೋಧಿ ಹಾಗೂ  ಕಪ್ಪು ಅಥವಾ ಧೂಮ್ರ (ಬೂದು) ವರ್ಣ ದ ವಸ್ತ್ರದೊಂದಿಗೆ ಉದ್ದಿನಕಾಳು ಇವುಗಳನ್ನು ದಕ್ಷಿಣೆ ಸಮೇತವಾಗಿ ದಾನ ಮಾಡಬೇಕು.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು 

ಮಾಹಿತಿ ಕೃಪೆ : ವಾಟ್ಸಪ್

Comments are closed.