ಕರಾವಳಿ

‘ಹರ ಹರ..ಮಹಾದೇವ…’: ವಿಜೃಂಭಣೆಯ ‘ಕೊಡಿ ಹಬ್ಬ’ಕ್ಕೆ ಸಾಕ್ಷಿಯಾದ ಸಹಸ್ರಾರು ಭಕ್ತರು

Pinterest LinkedIn Tumblr

ಕುಂದಾಪುರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಕೊಡಿ ಹಬ್ಬ ವಿಜೃಂಭಣೆಯಿಂದ ಗುರುವಾರ ಜರುಗಿತು. ಕೊಟೇಶ್ವರದ ಅಧಿದೇವ ಶ್ರೀಕೋಟಿಲಿಂಗೇಶ್ವರನ ವಾರ್ಷಿಕ ಬ್ರಹ್ಮರಥೋತ್ಸವವೇ ‘ಕೊಡಿಹಬ್ಬ’. ಈ ಉತ್ಸವದ ಹಿಂದೆ ವಿಶೇಷ ನಂಬಿಕೆ ಇದೆ. ವೃಶ್ಚಿಕ ಮಾಸದ ಪೂರ್ಣಿಮೆಯಂದು ನಡೆಯುವ ಕೊಡಿ ಹಬ್ಬದ ಸಂಭ್ರಮದ ಕ್ಷಣಗಳ ಝಲಕ್ ಇಲ್ಲಿದೆ.

ಹರ..ಹರ…ಮಹಾದೇವ….
ಬೆಳಿಗ್ಗೆ 12.15 ಕ್ಕೆ ದೇವಸ್ಥಾನದಿಂದ ವೈಭವದ ಮೆರವಣಿಗೆಯಲ್ಲಿ ಬಂದ ಬಿದಿರಿನ ಕೊಡಿ, ತಾಂಡವೇಶ್ವರ ದೇವರು, ತ್ರಿಶೂಲ, ಗೋಳೆ ದೇವರು ಹಾಗೂ ಕೋಟಿಲಿಂಗೇಶ್ವರ ಉತ್ಸವಮೂರ್ತಿಗಳನ್ನು ಬ್ರಹ್ಮ ರಥದ ಬಳಿ ಜಯಕಾರಗಳೊಂದಿಗೆ ಸ್ವಾಗತಿಸಲಾಯಿತು. ರಥ ಪ್ರದಕ್ಷಿಣೆಯ ನಂತರ ಬಿದಿರಿನ ಕೊಡಿಯನ್ನು ಮೊದಲು ರಥದ ಮೇಲಕ್ಕೆ ಕೊಂಡೊಯ್ಯುವ ಮೂಲಕ ರಥಾರೋಹಣಕ್ಕೆ ಚಾಲನೆ ನೀಡಲಾಯಿತು. ನಂತರ ತಾಂಡವೇಶ್ವರ ದೇವರು, ತ್ರಿಶೂಲ ಹಾಗೂ ಗೋಳೆ ದೇವರುಗಳನ್ನು ರಥದ ಮೇಲಕ್ಕೆ ಏರಿಸಲಾಯಿತು.

ದೇವರ ಮೂರ್ತಿಗಳು ರಥವನ್ನು ಏರಿದ ಬಳಿಕ ಕೋಟಿಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಲಾಯಿತು. ನಂತರ ನೆರೆದ ಭಕ್ತರು ಹರಹರ ಮಹಾದೇವ ಎನ್ನುವ ಜಯಘೋಷ ಮಾಡುತ್ತಿದ್ದಂತೆ ನರ್ತನದ ಮೂಲಕ ದೇವರೊಂದಿಗೆ ರಥದ ಮೇಲೇರಿದರು. ಉತ್ಸವ ಮೂರ್ತಿಯ ರಥಾರೋಹಣವಾದ ಬಳಿಕ ಮಂಗಳಾರತಿ, ಕಟ್ಟುಕಟ್ಟಳೆ ಹಣ್ಣುಕಾಯಿ ಮಾಡಿ, ರಥದ ಮುಂದೆ ಬಲಿಕಾಯಿ ಒಡೆಯುವ ಸೇವೆಗಳನ್ನು ಸಲ್ಲಿಸಲಾಯಿತು. ಬಳಿಕ ರಥ ಬೀದಿಯಲ್ಲಿ ರಥವನ್ನುಎಳೆಯುವ ಮೂಲಕ ರಥೋತ್ಸವ ನಡೆಯಿತು. ದೇವಸ್ಥಾನ ತಂತ್ರಿ ಪ್ರಸನ್ನ ಕುಮಾರ ಐತಾಳ್ ನೇತ್ರತ್ವದಲ್ಲಿ ಧಾರ್ಮಿಕ ವಿಧಿ ನೆರವೇರಿಸಲಾಯಿತು.

   

ಕುಡಿ ಚಿಗುರುವ ಕೊಡಿ ಹಬ್ಬ..!
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಪ್ತಕ್ಷೇತ್ರಗಳಲ್ಲಿ ಒಂದಾಗಿರುವ ಇತಿಹಾಸ ಪ್ರಸಿದ್ಧ ಕುಂದಾಪುರ ತಾಲೂಕಿನ ಕೋಟೇಶ್ವರದ ಮಹತೋಬಾರ ಕೋಟಿಲಿಂಗೇಶ್ವರ ದೇವಸ್ಥಾನ ಹಲವಾರು ಶತಮಾನಗಳಷ್ಟು ಪುರಾತನವಾದ ದೇವಳಗಳಲ್ಲಿ ಒಂದಾಗಿದೆ. ಇಲ್ಲಿ ನಡೆಯುವ ಕೊಡಿ ಹಬ್ಬದ ಉತ್ಸವದ ಹಿಂದೆ ಪರಂಪರಾನುಗತ ನಂಬಿಕೆ ಇದೆ. ವ್ಯವಹಾರಸ್ಥರಿಗೆ ಹೊಸಲೆಕ್ಕಾಚಾರ ಪ್ರಾರಂಭವಾಗಿ ಅಭಿವೃದ್ಧಿಯ ಕುಡಿಯೊಡೆಯುತ್ತದೆ, ಅವಿವಾಹಿತರಿಗೆ ಬಾಳಜೋಡಿ ಸಿಗುತ್ತದೆ, ನವ ವಿವಾಹಿತರಿಗೆ ಕರುಳ ಕುಡಿ ಚಿಗುರಿ ಸಂತಸ ಚಿಮ್ಮುತ್ತದೆ, ಕೃಷಿಕರಿಗೆ ಫಸಲು ತುಂಬಿ ಸಮೃದ್ಧಿಯ ಕುಡಿ ಮೊಳೆಯುತ್ತದೆ ಎಂಬ ನಂಬಿಕೆಯೇ ಜಿಲ್ಲೆಯ ಈ ಅತಿದೊಡ್ಡ ರಥೋತ್ಸವಕ್ಕೆ ‘ಕೊಡಿಹಬ್ಬ’ ಎಂದು ಹೆಸರು ಬರಲು ಕಾರಣವಾಯಿತು. ಒಟ್ಟಿನಲ್ಲಿ ಎಲ್ಲೆಡೆ ಸಂತಸ, ಸಮೃದ್ಧಿಯ ಕುಡಿಯೊಡೆಯುವಿಕೆಯ ನಂಬಿಕೆ ಇದೆ.

ರಾಜ್ಯದ ಪ್ರಮುಖ ಬ್ರಹತ್ ರಥ…
ಇನ್ನು ರಥೋತ್ಸವದ ಮೊದಲು ಮಧ್ಯಾಹ್ನದ ಸುಮಾರಿಗೆ ದೇವಳದ ಎದುರಿಗಿನ ಬ್ರಹ್ಮರಥದ ಮೇಲೆ ಗರುಡ ಪಕ್ಷಿ ಮೂರುಸುತ್ತು ಸುತ್ತುತ್ತದೆ, ಇದು ಜಾತ್ರೆಯ ಆರಂಭಕ್ಕೆ ಶುಭ ಸೂಚನೆ ಎಂಬ ನಿಟ್ಟಿನಲ್ಲಿ ರಥೋತ್ಸವ ಆರಂಭಗೊಳ್ಳುತ್ತದೆ. ರಾಜ್ಯದ ಪ್ರಮುಖ ದೊಡ್ದ ಗಾತ್ರದ ರಥಗಳಲ್ಲಿ ಕೋಟೇಶ್ವರದ ಈ ರಥವೂ ಒಂದು. ಈ ಬ್ರಹತ್ ಗಾತ್ರದ ಬ್ರಹ್ಮ ರಥದಲ್ಲಿ ವಿವಿಧ ಶಿಲ್ಪ ಕಲೆಯ ಕೆತ್ತನೆಗಳು ರಚಿಸಲ್ಪಟ್ಟಿದೆ.

ಸಹಸ್ರಾರು ಭಕ್ತರು…
ಹಬ್ಬದ ದಿನವಾದ ಗುರುವಾರ ಮುಂಜಾನೆ ಸೂರ್ಯ ಉದಯಕ್ಕೆ ಮುಂಚೆ ಇತಿಹಾಸ ಪ್ರಸಿದ್ದ ಕೋಟಿ ತೀರ್ಥ ಸರೋವರದಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ಶುಚಿರ್ಭೂತರಾಗಿ, ಸರೋವರದ ಸುತ್ತ ಅಪೇಕ್ಷಿತರು ಹಾಸಿದ ಬಿಳಿ ಬಟ್ಟೆಯ ಮೇಲೆ ಪಡಿ ಅಕ್ಕಿ ಚೆಲ್ಲುವ ಪಾರಂಪರಿಕ ‘ಸುತ್ತಕ್ಕಿ ಸೇವೆ’ಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಸಂಪ್ರದಾಯಬದ್ದ ಪೂಜೆ ಸಲ್ಲಿಸಿದರು. ಕೊಡಿ ಹಬ್ಬ ಅಂದರೆ ಕುಡಿ ಅರಳಿಸುವ ಪ್ರತೀತಿ. ನವ ದಂಪತಿ ಹಬ್ಬದಲ್ಲಿ ಕಬ್ಬು ಖರೀದಿಸುವುದು ವಾಡಿಕೆ. ಜಿಲ್ಲೆಯ ನಾನಾ ಕಡೆಯ ನವ ದಂಪತಿ ಶ್ರೀಕೋಟಿಲಿಂಗೇಶ್ವರನ ದರ್ಶನ ಪಡೆದು ಕಬ್ಬು ಖರೀದಿಸುವ ದೃಶ್ಯ ಕಂಡು ಬಂತು.

ಅಚ್ಚುಕಟ್ಟು ವ್ಯವಸ್ಥೆ…
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಗಣೇಶ್ ರಾವ್, ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ‌ಗೋಪಾಲಕೃಷ್ಣ ಶೆಟ್ಟಿ, ಸದಸ್ಯರಾದ ವಿ.ರಾಜೀವ್‌ ಶೆಟ್ಟಿ, ಶಂಕರ ಚಾತ್ರಬೆಟ್ಟು, ಅಶೋಕ ಪೂಜಾರಿ, ಭಾರತಿ ಆನಂದ ದೇವಾಡಿಗ, ಸುಶೀಲ ಶೇಟ್‌, ಜ್ಯೋತಿ ಎಸ್‌ ನಾಯ್ಕ್‌, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ್ ಕೋಣಿ ಹಾಗೂ ಪದಾಧಿಕಾರಿಗಳು, ಸ್ವಯಂಸೇವಕರ ಮುಂದಾಳತ್ವದಲ್ಲಿ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಥಳೀಯ ಪ್ರಮುಖರಾದ ಎಂ.ಸುಧೀರಕುಮಾರ ಶೆಟ್ಟಿ, ದಿನೇಶ್‌ ಕಾಮತ್‌, ಕೆ.ಪ್ರೇಮಾನಂದ ಶೆಟ್ಟಿ ಕಟ್ಕೇರೆ, ಮಲ್ಯಾಡಿ ಶಿವರಾಮ ಶೆಟ್ಟಿ, ಪ್ರಭಾಕರ ಶೆಟ್ಟಿ ವಕ್ವಾಡಿ, ಗಣಪತಿ ಟಿ. ಶ್ರೀಯಾನ್, ಸುರೇಂದ್ರ ಮಾರ್ಕೋಡು, ಅಶೋಕ್ ಕಾಗೇರಿ, ಮೊದಲಾದವರು ಇದ್ದರು.

ಬಿಗು ಬಂದೋಬಸ್ತ್…
ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್‌ ಮಂಜಪ್ಪ ಡಿ.ಆರ್‌., ಕುಂದಾಪುರ ನಗರ ಠಾಣೆ ಉಪನಿರೀಕ್ಷಕ ಹರೀಶ್ ಆರ್‌ ನಾಯ್ಕ್‌, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ರಾಜ್‌ಕುಮಾರ, ವಿವಿಧ ಠಾಣೆಯ ಠಾಣಾಧಿಕಾರಿಗಳಾದ ಶ್ರೀಧರ ನಾಯ್ಕ್‌, ನಿತ್ಯಾನಂದ, ವಾಸಪ್ಪ ನಾಯಕ್‌ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದು ಕುಂದಾಪುರ ಪ್ರಭಾರ ಡಿವೈಎಸ್ಪಿ ಟಿ ಜೈಶಂಕರ್, ಬ್ರಹ್ಮಾವರ ಸಿಪಿಐ ಸೇರಿ ನಾಲ್ವರು ಸಿಪಿಐ, ಹತ್ತು ಮಂದಿ ಪಿಎಸ್ಐ, ಓರ್ವ ಪ್ರೊಬೇಶನರಿ ಪಿಎಸ್ಐ ಸೇರಿ ೨೨೮ ಮಂದಿ ಪೊಲೀಸರು ಬಂದೋಬಸ್ತ್ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದಾರೆ.

ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿಯ ರಥಾರೋಹಣದ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಒಟ್ಟಿನಲ್ಲಿ ಕೊಡಿ ಹಬ್ಬದ ವೈಭವದ ರಥೋತ್ಸವಕ್ಕೆ ಊರ ಹಾಗೂ ಪರವೂರಿನಿಂದ ಬಂದ ಸಾವಿರಾರು ಮಂದಿ ಸಾಕ್ಷಿಯಾದರು.

ಫ್ಲಾಸ್ಟಿಕ್ ಮುಕ್ತಕ್ಕೆ ನೀರಸ ಪ್ರತಿಕ್ರಿಯೆ!
ಈ ಬಾರಿ ಕೊಡಿ ಹಬ್ಬವನ್ನು ಫ್ಲಾಸ್ಟಿಕ್ ಮುಕ್ತವನ್ನಾಗಿ ಆಚರಿಸಲು ದೇವಸ್ಥಾನ ವ್ಯವಸ್ಥಾಪನ ಸಮಿತಿ, ಸಂಬಂದಪಟ್ಟ ಗ್ರಾಮಪಂಚಾಯತ್ ತೀರ್ಮಾನಿಸಿತ್ತು. ಅದಕ್ಕೆ ಕ್ಲೀನ್ ಕುಂದಾಪುರ ಫ್ರಾಜೆಕ್ಟ್ ಸದಸ್ಯರು ಕೈಜೋಡಿಸುವ ಸಲುವಾಗಿ ಪತ್ರಿಕಾಗೋಷ್ಟಿಯೂ ನಡೆದಿತ್ತು. ಆದರೆ ದೇವಸ್ಥಾನ ಆಡಳಿತ ವ್ಯವಸ್ಥೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸದಸ್ಯರು ‘ಫ್ಲಾಸ್ಟಿಕ್ ಮುಕ್ತ ಕೊಡಿ ಹಬ್ಬ’ ಆಚರಣೆ ಸಲುವಾಗಿ ಶತಾಯಗತಾಯ ಹಗಲಿರುಳು ಕೆಲಸ ಮಾಡಿದ್ದು ದೇವಸ್ಥಾನ ಭಾಗದಲ್ಲಿ ಫ್ಲಾಸ್ಟಿಕ್ ಮುಕ್ತ ವ್ಯವಸ್ಥೆ ಬಹುತೇಕ ಯಶಸ್ವಿಯಾಗಿತ್ತು. ಆದರೆ ಗ್ರಾಮಪಂಚಾಯತ್ ಮತ್ತು ಅಧಿಕಾರಿಗಳ ಬೇಜವಬ್ದಾರಿ ಪರಿಣಾಮ ಇಡೀ ಹಬ್ಬದಲ್ಲಿ ಫ್ಲಾಸ್ಟಿಕ್ ಬಳಕೆ ಸಾಮಾನ್ಯವಾಗಿತ್ತು. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕೇವಲ ಪತ್ರಿಕಾ ಹೇಳಿಕೆಗಷ್ಟೇ ಸೀಮಿತವೇ ಎಂಬ ಮಾತುಗಳು ಜನರಿಂದ ಕೇಳಿಬಂದವು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.