ಮಂಗಳೂರು: ಚಳಿಗಾಲದ ಸಂಜೆಯೆಂದರೆ ಸಾಕು ಮನಸ್ಸಿನಲ್ಲಿ ಮೂಡುವುದು ದಪ್ಪಗಿನ ಹೊದಿಕೆಯಡಿ ಮುದುರಿ ಕುಳಿತುಕೊಂಡು ಮೃದುವಾದ ಬ್ರೆಡ್ ಮತ್ತು ಬಿಸಿ ಬಿಸಿಯಾದ ಖಾರದ ಪದಾರ್ಥ. ಆದರೆ ಚಳಿಗಾಲವೆಂದರೆ ಇಷ್ಟೇ ಅಲ್ಲ. ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ ಆರೋಗ್ಯ ಕಾಪಾಡುವ ಕೆಲವೊಂದು ಮಸಾಲೆ ಪದಾರ್ಥ ಚಳಿಗಾಲಕ್ಕೆ ಅನಿವಾರ್ಯ ಹಾಗೂ ಅವಶ್ಯಕ.
ಈ ಬಾರಿಯ ಚಳಿಗಾಲದಲ್ಲಿ ನಿಮ್ಮ ಆರೋಗ್ಯ ರಕ್ಷಣೆಗೆ ಯಾವ ಮಸಾಲಾ ಪದಾರ್ಥಗಳು ಚೆನ್ನ ಎಂಬುದರ ಮಾಹಿತಿ ಇಲ್ಲಿದೆ.
ಶುಂಠಿ : ಬಹುತೇಕ ಎಲ್ಲಾ ಅಡುಗೆಯಲ್ಲೂ ಶುಂಠಿಯನ್ನು ಎಲ್ಲರೂ ಬಳಸುತ್ತಾರೆ. ಜೀರ್ಣಕ್ರಿಯೆ ಚೆನ್ನಾಗಿ ಮಾಡುವುದರ ಜೊತೆಗೆ ಹೊಟ್ಟೆ ನೋವಿನ ಬಾಧೆಯನ್ನು ಇದು ತಪ್ಪಿಸುತ್ತದೆ. ಶೀತ ಮತ್ತು ಕೆಮ್ಮೆ ನಿವಾರಣೆಗೂ ಬಿಸಿಯಾದ ಶುಂಠಿ ಚಹಾ ಅತ್ಯುತ್ತಮ ಔಷಧ.
ದಾಲ್ಚಿನ್ನಿ : ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಬಲ ಸಾಮರ್ಥ್ಯ ದಾಲ್ಚಿನ್ನಿಗಿದೆ. ಸಿಹಿ-ಕಹಿ ಮಿಶ್ರಿತ ರುಚಿಯ ದಾಲ್ಚಿನ್ನಿ ಹಾಕಿರುವ ಕೇಕ್ ಅಥವಾ ಬೇಕರಿ ತಿನಿಸು ಚಳಿಗಾಲವನ್ನು ನೀವು ಎಂಜಾಯ್ ಮಾಡುವಂತೆ ಮಾಡುತ್ತದೆ.
ಬೆಳ್ಳುಳ್ಳಿ : ಇದಕ್ಕೆ ಮಸಾಲೆ ಪದಾರ್ಥಗಳ ರಾಜ ಎಂದೇ ಹೆಸರು. ಯಾವುದೇ ಸಾಂಬಾರು ಪದಾರ್ಥವಿರಲಿ ಬೆಳ್ಳುಳ್ಳಿ ಇಲ್ಲದೆ ಅದು ಪೂರ್ಣವಾಗುವುದಿಲ್ಲ. ಬೆಳ್ಳುಳ್ಳಿಯನ್ನು ಜಜ್ಜಿ, ಹುರಿದು ಇಲ್ಲವೇ ಸುಟ್ಟು ಅಡುಗೆ ತಿನಿಸಿಗೆ ಹಾಕಿದರೆ ಅದರ ರುಚಿಯೇ ಪ್ರತ್ಯೇಕ. ದೇಹವನ್ನು ಸೂಕ್ಷ್ಮಾಣು ಜೀವಿಗಳಿಂದ ರಕ್ಷಿಸುವ ರೋಗ ನಿರೋಧಕ ಶಕ್ತಿ ಇದಕ್ಕಿದೆ.
ಜೀರಿಗೆ : ಜೀರಿಗೆ ಕೂಡ ಎಲ್ಲಾ ಅಡುಗೆಯಲ್ಲಿ ಬಳಕೆಯಾಗುವ ಮತ್ತೊಂದು ಸಾಂಬಾರ ಪದಾರ್ಥ. ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಜೀರಿಗೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಉಸಿರಾಟದ ತೊಂದರೆಗೆ ಕೂಡ ಜೀರಿಗೆ ರಾಮಬಾಣ.
ಜಾಯಿಕಾಯಿ : ಜಾಯಿಕಾಯಿ ಮತ್ತೊಂದು ಜನಪ್ರಿಯ ಮಸಾಲೆ ಪದಾರ್ಥ. ಯಾವುದೇ ತಿನಿಸಿನ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಚೆನ್ನಾಗಿ ನಿದ್ರೆ ಬರಲು ಇದು ನೆರವು ನೀಡುತ್ತದೆ. ನೋವು ನಿವಾರಕವಾಗಿಯೂ ಕೆಲಸ ಮಾಡುವ ಇದು ಜೀರ್ಣಕ್ರಿಯೆಯನ್ನು ಕೂಡ ಹೆಚ್ಚಿಸುತ್ತದೆ.
ಚಳಿಗಾಲದಲ್ಲಿ ಕಂಡು ಬರುವ ಸಾಮಾನ್ಯ ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಕಾಣಬೇಕಾಗಿಲ್ಲ. ಅದರ ಬದಲಾಗಿ ಮೇಲೆ ಹೇಳಿದ ಸಾಂಬಾರ ಪದಾರ್ಥಗಳನ್ನು ಅಡುಗೆಯಲ್ಲಿ ಬಳಸಿ, ವೈದ್ಯರಿಂದ ದೂರ ಇರಿ
Comments are closed.