ಕರಾವಳಿ

ರೌಡಿಗಳು, ಕ್ರಿಮಿನಲ್, ಗೂಂಡಾ ಎಂದೆಲ್ಲಾ ಕರೆದರೆ ನಮಗೆ ತೊಂದರೆಯಿಲ್ಲ: ಶರಣ್ ಪಂಪ್ ವೆಲ್(Video)

Pinterest LinkedIn Tumblr

ಕುಂದಾಪುರ: ಸಮಾಜಕ್ಕೆ ತೊಂದರೆಯಾದಾಗ ವಿಶ್ವ ಹಿಂದೂ ಪರಿಷತ್ ಘಟಕವಾದ ಭಜರಂಗದಳ ಕಾರ್ಯಕರ್ತರು ಸಮಾಜಮುಖಿ ಚಿಂತನೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಸಂಘಟನೆ ಕಾರ್ಯಕರ್ತರನ್ನು ರೌಡಿಗಳು, ಕ್ರಿಮಿನಲ್, ಗೂಂಡಾಗಳು ಎಂದು ಬೇರೆಬೇರೆ ಹೆಸರಿನಿಂದ ಕರೆಯುತ್ತಾರೆ. ಆದರೆ ಸಮಾಜಕ್ಕೆ ತೊಂದರೆ, ಕಷ್ಟ ಬಂದಾಗ ನಾವು ಸ್ಪಂದನೆ ಮಾಡುತ್ತೇವೆ. ನಮ್ಮನ್ನು ಯಾವ ಹೆಸರಿನಲ್ಲಿ ಕರೆದರೂ ತೊಂದರೆಯಿಲ್ಲ ನಾವು ಸಮಾಜದ್ರೋಹ ಕೆಲಸ ಮಾಡಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗಿಯ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್ ಹಾಗೂ‌ ಭಜರಂಗದಳ ಕಂಡ್ಲೂರು ಘಟಕ, ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ‌ಕಂಡ್ಲೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬ್ರಹತ್ ರಕ್ತದಾನ ಶಿಬಿರವನ್ನು ‌ಉದ್ಘಾಟಿಸಿ ಮಾತನಾಡಿದರು.

ದೇಶ ಪ್ರೇಮ, ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವ ಉತ್ತಮ ಚಿಂತನೆಯನ್ನು ಕಾರ್ಯಕರ್ತರಲ್ಲಿ ಬೆಳೆಸುತ್ತೇವೆ‌. ನಾವು ಯಾವುದೇ ಧರ್ಮದ ವಿರೋಧಿಗಳು ಅಲ್ಲ. ಆದರೆ ಸಮಾಜಕ್ಕೆ ತೊಂದರೆಯಾದಾಗ ನಮ್ಮ ಹೋರಾಟ ನಿರಂತರವಾಗಿ ಇರಲಿದೆ. ವಿಶ್ವ ಹಿಂದೂ ಪರಿಷತ್, ಭಜರಂಗದಳ ಸಮಾಜಮುಖಿ ಕೆಲಸ ಮಾತ್ರ ಮಾಡುತ್ತಿದೆ. ಹಿಂದುಗಳಿಗೆ ತೊಂದರೆ ಕೊಡುವವರು, ಗೋವು ಕಳ್ಳತನ ಹಾಗೂ ಹತ್ಯೆ, ಲವ್ ಜಿಹಾದ್ ಅಂತಹ ಕೃತ್ಯವೆಸಗುವರನ್ನು ನಾವು ವಿರೋಧಿಸುತ್ತೇವೆ. ದೇಶಕ್ಕೆ ತೊಂದರೆ ಕೊಟ್ಟರೆ ಸುಮ್ಮನೆ ಕೂರುವುದಿಲ್ಲ ಎಂದು ಪಂಪ್ವೆಲ್ ಎಚ್ಚರಿಸಿದರು. ನಮ್ಮ ದೇಶಕ್ಕೆ ಸಂಕಷ್ಟ ಕೊಡುತ್ತಿರುವ ಚೀನಾದವರ ಉತ್ಪನ್ನಗಳನ್ನು ನಿಷೇದಿಸುವ ಮೂಲಕ ದೇಶ ಪ್ರೇಮ ಮೆರೆಯೋಣ. ಸ್ವದೇಶಿ ಚಿಂತನೊಯೊಂದಿಗೆ ಸ್ವಾವಲಂಬಿ ಭಾರತದ ಪರಿಕಲ್ಪನೆಯಲ್ಲಿ ಬದುಕೋಣ ಎಂದು ಅವರು ಕರೆಕೊಟ್ಟರು.

ಕೋವಿಡ್ ವಾರಿಯರ್ಸ್ ಆಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. ಸರ್ವೇ ಜನಾಹ ಸುಖಿನೋ ಭವಂತು ಎಂಬ ಧ್ಯೇಯದಡಿಯಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸಮಾಜದಲ್ಲಿನ ಉತ್ತಮ ಕಾರ್ಯಕ್ಕೆ ಶ್ರಮಿಸುತ್ತಿದ್ದಾರೆ. ಯಾವುದೇ ಸಮಯದಲ್ಲಿ ರಕ್ತ ಅಗತ್ಯ ಬಿದ್ದರೆ ಅಂತಹ ವೇಳೆ ಭಜರಂಗದಳ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿದ ಉದಾಹರಣೆಗಳಿದೆ. 2 ತಿಂಗಳ ಅವಧಿಯಲ್ಲಿ ಮಂಗಳೂರು ವಿಭಾಗದಲ್ಲಿ 8 ಸಾವಿರಕ್ಕೂ ಅಧಿಕ ಯುನಿಟ್ ರಕ್ತದಾನವನ್ನು ಮಾಡಲಾಗಿದೆ ಎಂದರು.

ಇದೆ ಸಂದರ್ಭ ಕೋವಿಡ್ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಲತಾ ನಾಯಕ್, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಸಂಚಾಲಕ ಸುನೀಲ್ ಕೆ.ಆರ್, ಭಜರಂಗದಳದ ತಾಲೂಕು ಸಂಚಾಲಕ ಸುಧೀರ್ ಮೆರ್ಡಿ, ಪತ್ರಕರ್ತ ವಸಂತ ಗಿಳಿಯಾರು, ಕುಂದಾಪುರ ರೆಡ್ ಕ್ರಾಸ್ ಸೊಸೈಟಿ ಚೆರ್ ಮನ್ ಜಯಕರ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ ಮೊದಲಾದವರಿದ್ದರು.

ಸಾಮ್ರಾಟ್ ಶೆಟ್ಟಿ ಹಳ್ನಾಡು ಸ್ವಾಗತಿಸಿ, ಪ್ರಕಾಶ್ಚಂದ್ರ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಪತ್ ಕಾರ್ಯಕ್ರಮ ನಿರೂಪಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.