ಕರಾವಳಿ

ಬಾರದ ಮಳೆಯ ಭಾರಕ್ಕೆ ಸೋರುತಿಹುದು ಕುಂದಾಪುರ ಮಿನಿ ವಿಧಾನಸೌಧ! (Video)

Pinterest LinkedIn Tumblr

ಕುಂದಾಪುರ: ತಾಲೂಕಿನ ಮುಖ್ಯ ಸರಕಾರಿ ಕಚೇರಿಯಾದ ಮಿನಿ ವಿಧಾನಸೌಧವು ಉದ್ಘಾಟನೆ ಪೂರ್ವದಿಂದಲೂ ಕಳಪೆ ಕಾಮಗಾರಿಯ ಸಮಸ್ಯೆಯನ್ನು ಹೊದ್ದು ಮಲಗಿದೆ. ಕಳೆದ ವರ್ಷ ಮೊದಲ ಮಹಡಿ ಪ್ರವೇಶ ದ್ವಾರದ ಬಳಿ ಸ್ಲ್ಯಾಬ್ ನ ಸಿಮೆಂಟ್ ಗಾರೆ ಕುಸಿದ ಘಟನೆ ನಡೆದಿದ್ದು ಈ ಬಾರಿಯೂ ಕೂಡ ಮಳೆಗಾಲದ ಆರಂಭದಲ್ಲೇ ಮಿನಿ ವಿಧಾನಸೌಧ ಸೋರುತ್ತಿದೆ.

ಕುಂದಾಪುರ ಮಿನಿ ವಿಧಾನ ಸೌಧ ಕಾಮಗಾರಿ ಕಳಪೆ ಬಗ್ಗೆ ಮೊದಲಿನಿಂದಲೂ ಕೂಡ ಮಾಧ್ಯಮಗಳು ವಿಸ್ಮೃತ ಪ್ರಕಟಿಸಿತ್ತು. ಆದರೂ ವಿಧಾನ ಸೌಧ ಕಾಮಗಾರಿ ಗುಣಮಟ್ಟದ ಬಗ್ಗೆ ತನಿಖೆ ನಡೆಸದೆ ಅಂದಿನ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಹಾಗೂ ಅಂದಿನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆ ಮೂಲಕ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು.

ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ 20-20 ಸರ್ಕಾರ ಇದ್ದಾಗ ಅಂದಿನ ಸಚಿವ ಡಾ.ವಿ.ಎಸ್. ಆಚಾರ್ಯ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಯತ್ನದ ಫಲವಾಗಿ 5 ಕೋಟಿ ವೆಚ್ಚದಲ್ಲಿ ಮಿನಿ ವಿಧಾನ ಸೌಧಕ್ಕೆ ಮುಹೂರ್ತ ಮುಹೂರ್ತ ಕೂಡಿ ಬಂದಿತ್ತು. ಶಂಕು ಸ್ಥಾಪನೆಯಿಂದ ಹಿಡಿದು ಉದ್ಘಾಟನೆ ತನಕ ಮಿನಿ ವಿಧಾನ ಸೌಧ ಕಳಪೆ ಕಾಮಗಾರಿಯಿಂದ ಸುದ್ದಿಯಾದರೂ ಯಾರೊಬ್ಬರೂ ಕಾಮಗಾರಿ ಗುಣಮಟ್ಟದ ಬಗ್ಗೆ ಧ್ವನಿಯೆತ್ತುತ್ತಿಲ್ಲ. ಒಂದೆಡೆಯಲ್ಲಿ ಯಾವತ್ತು ಸ್ಲಾಬ್ ಕಾಂಕ್ರಿಟ್ ಕಳಚಿಕೊಳ್ಳುತ್ತದೋ ಎನ್ನುವ ಭಯ ಒಂದೆಡೆಯಾದರೆ ಜೋರು ಮಳೆ ಬಂದರೆ ಕಚೇರಿಯೊಳಕ್ಕೆ ಕೊಡೆ ಹಿಡಿಯಬೇಕಾದ ದೌರ್ಭಾಗ್ಯದಲ್ಲಿ ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಜನರಿದ್ದಾರೆ.

ಈ ಬಗ್ಗೆ ಸಂಬಂದಪಟ್ಟವರು ಸೂಕ್ತ ತಾಂತ್ರಿಕ ಕಾರಣ ತಿಳಿದು ಸಮಸ್ಯೆ ಬಗೆಹರಿಸಬೇಕು ಮತ್ತು ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನ್ಯಾಯವಾದಿ ಗೋಪಾಲಕೃಷ್ಣ ಶೆಟ್ಟಿ ಶಿರಿಯಾರ ಆಗ್ರಹಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.