ಕುಂದಾಪುರ: ಸಾಲಬಾಧೆಯಿಂದ ನೊಂದು ತಂದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರನ್ನು ರಕ್ಷಿಸಲು ಬಾವಿಗೆ ಜಿಗಿದ ಮಗ ಕೂಡ ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಗುರುವಾರ ಬೆಳಗ್ಗೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮೀನು ಮಾರುಕಟ್ಟೆ ಸಮೀಪ ನಡೆದಿದೆ. ಈ ಮಧ್ಯೆ ಗಂಡ-ಮಗ ಬಾವಿಗೆ ಹಾರಿದ್ದನ್ನು ಗಮನಿಸಿ ಅವರನ್ನು ರಕ್ಷಿಸಲು ಬಾವಿಗೆ ಹಾರಿದ ಪತ್ನಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೃತರನ್ನು ಮಾಧವ ದೇವಾಡಿಗ (55), ಅವರ ಪುತ್ರ ಪ್ರಸಾದ್ ದೇವಾಡಿಗ (22) ಎಂದು ಗುರುತಿಸಲಾಗಿದೆ. ಪ್ರಸಾದ್ ರ ತಾಯಿ ತಾರಾ ದೇವಾಡಿಗರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಮೂಲತಃ ಕುಂದಾಪುರದವರಾದ ಮಾಧವ ದೇವಾಡಿಗ ಕುಟುಂಬ ತೆಕ್ಕಟ್ಟೆ ಮೀನು ಮಾರುಕಟ್ಟೆ ಸಮೀಪ ಸುಮಾರು ಏಳು ವರ್ಷದಿಂದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ತಂದೆ ಮತ್ತು ಮಗ ಕುಂದಾಪುರದ ಖಾಸಗಿ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಖಾಸಗಿ ಸಂಸ್ಥೆಯಲ್ಲಿ ಅಡುಗೆ ಕೆಲಸದ ಸಹಾಯಕಿಯಾಗಿದ್ದರು ಎಂದು ತಿಳಿದು ಬಂದಿದೆ.
ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಪಕ್ಕದ ಮನೆಯ ಮಹಿಳೆ ರಂಗೋಲಿ ಹಾಕಲೆಂದು ಮನೆಯಿಂದ ಹೊರಗಡೆ ಬಂದಾಗ ಮನೆಯ ಎದುರುಗಡೆ ಮನೆಯ ಬಾವಿಯಲ್ಲಿ ಕಿರುಚಾಟದ ಶಬ್ದ ಕೇಳಿಬಂತೆಬನ್ನಲಾಗಿದೆ. ಈ ವೇಳೆ ಅವರು ಬಾವಿಯಲ್ಲಿ ಇಣುಕಿ ನೋಡಿದಾಗ ತಾರಾ ದೇವಾಡಿಗ ಬಾವಿಯಲ್ಲಿ ಒದ್ದಾಡುತ್ತಿರುವುದನ್ನು ಕಂಡಿದ್ದಾರೆ. ತಕ್ಷಣ ಅವರು ಬೊಬ್ಬೆ ಹಾಕಿ ಅಕ್ಕ ಪಕ್ಕದವರನ್ನು ಕರೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಬಾವಿಗಿಳಿದು ತಾರಾ ಅವರನ್ನು ಬಾವಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಮಾಧವ ಮತ್ತು ಅವರ ಪುತ್ರ ಪ್ರಸಾದ್ ನೀರಲ್ಲಿ ಮುಳುಗಿ ಮೃತಪಟ್ಟಿದ್ದರು ಮೃತದೇಹಗಳನ್ನು ಬಾವಿಯಿಂದ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಕುಂದಾಪುರಕ್ಕೆ ಸಾಗಿಸಲಾಯಿತು.
ಉಡುಪಿ ಡಿವೈಎಸ್ಪಿ ಡಿ.ಟಿ ಪ್ರಭು, ಬ್ರಹ್ಮಾವರ ವೃತ್ತನಿರೀಕ್ಷಕ ಕೆ. ಗೋಪಿಕೃಷ್ಣ, ಕೋಟ ಠಾಣೆ ಪಿಎಸ್ಸೆ ರಾಘವೇಂದ್ರ ಸಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಾಲಬಾಧೆ ಮಾಧವ ದೇವಾಡಿಗ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.