ಕರಾವಳಿ

ಕೇರಳದಲ್ಲಿ ಚಿನ್ನ ಕದ್ದು ಬಿಹಾರಕ್ಕೆ ಸಾಗಾಟ ಮಾಡುತ್ತಿದ್ದ ಅಂತರ್ ರಾಜ್ಯ ಕಳ್ಳನ ಬಂಧನ: ಸುಮಾರು 1 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ

Pinterest LinkedIn Tumblr

ಕುಂದಾಪುರ: ಕೇರಳದಲ್ಲಿ ಕದ್ದ ಚಿನ್ನಾಭರಣಗಳನ್ನು ಬಿಹಾರಕ್ಕೆ ಸಾಗಿಸುತ್ತಿದ್ದ ಅಂತರ್ ರಾಜ್ಯ ಕಳ್ಳನ್ನು ಖಚಿತ ಮಾಹಿತಿ ಮೇರೆಗೆ ಕೋಟ ಪೊಲೀಸರ ಕ್ಷಿಪ್ರ ಕಾರ್ಯಚರಣೆಯಿಂದ ಕಾರನ್ನು ವಶಕ್ಕೆ ಪಡೆದು ಆರೋಪಿಯಿಂದ ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ಘಟನೆ ಕೋಟ ಮೂರ್ಕೈ ಸಮೀಪ ಶನಿವಾರ ಸಂಜೆ ನಡೆದಿದೆ.

ಖತರ್ನಾಕ್ ಕಳ್ಳ ಬಿಹಾರ ರಾಜ್ಯದ ಸೀತಾಮರಿ ಜಿಲ್ಲೆಯ ನಿವಾಸಿ ಮೊಹಮ್ಮದ್‌ ಇರ್ಫಾನ್‌ (35) ಬಂಧಿತ ಆರೋಪಿ.

ಕೇರಳದ ಮಲಯಾಳ ಚಿತ್ರ ನಿರ್ಮಾಪಕ ಜೋಶಿ ಅವರ ಕೊಚ್ಚಿ ಪನಂಪಲ್ಲಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಶನಿವಾರ ಮುಂಜಾನೆ ಅಡುಗೆ ಕೋಣೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳ ಕಪಾಟನ್ನು ಒಡೆದು 10 ವಜ್ರದ ಉಂಗುರ, 12 ವಜ್ರದ ಕಿವಿಯೋಲೆ, 2 ಚಿನ್ನದ ಉಂಗುರ, 10 ಚಿನ್ನದ ನೆಕ್ಲೆಸ್‌, 10 ಚಿನ್ನದ ಬಳೆ, 10 ಕೈಗಡಿಯಾರ ಸಹಿತ 1 ಕೋಟಿ ರೂ. ಮೌಲ್ಯದ 1.2 ಕೆಜಿ ಆಭರಣಗಳನ್ನು ಕಳವುಗೈದು ಪರಾರಿಯಾಗಿದ್ದ.

ಕದ್ದ ಚಿನ್ನವನ್ನು ಆರೋಪಿಯು ಬಿಹಾರಕ್ಕೆ ಸಾಗಿಸುವ ಯತ್ನದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಕೋಟ ಪೊಲೀಸರು ಕಾರನ್ನು ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಉನ್ನತ ಪೊಲೀಸ್‌ ಅಧಿಕಾರಿಗಳು ಆರೋಪಿಯ ವಿಚಾರಣೆ ನಡೆಸಿದ್ದು, ಕೇರಳ ಪೊಲೀಸರು ಜಿಲ್ಲೆಗೆ ಆಗಮಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಮನೆಯಲ್ಲಿ ಯಾರೂ ಇರದ ಕಾರಣ ಕಳವಾಗಿರುವ ಕುರಿತು ಅವರಿಗೆ ಮಾಹಿತಿ ಇರಲಿಲ್ಲ, ಹಾಗಾಗಿ ಪೊಲೀಸರಿಗೂ ದೂರು ಬಂದಿರಲಿಲ್ಲ. ಆದರೆ ಶಂಕಿತ ವಾಹನವೊಂದು ರಾಜ್ಯದಲ್ಲಿ ಸಂಚರಿಸಿದ್ದಲ್ಲದೆ ಕರ್ನಾಟಕದತ್ತ ಸಾಗಿದೆ ಎಂಬ ಮಾಹಿತಿ ಅರಿತ ಕೇರಳ ಪೊಲೀಸರು ಆ ಬಗ್ಗೆ ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಕೋಟ ಠಾಣೆಯ ಎಸ್‌ಐ ತೇಜಸ್ವಿ, ಅಪರಾಧ ವಿಭಾಗದ ಎಸ್‌ಐ ಸುಧಾ ಪ್ರಭು ಮತ್ತು ಸಿಬಂದಿಗಳಾದ ಗೋಪಾಲ ಪೂಜಾರಿ, ಪ್ರಸನ್ನ, ವಿಜಯೇಂದ್ರ ಮೊದಲಾದವರು ಸಾಸ್ತಾನ ಟೋಲ್‌ ಪ್ಲಾಜಾದಲ್ಲಿ ಶಂಕಿತ ಕಾರನ್ನು ತಡೆಯಲು ಯತ್ನಿಸಿದರು. ಆದರೆ ಚಾಲಕನು ಕಾರನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು ಹಿಂಬಾಲಿಸಿದ ಪೊಲೀಸರು ಕೋಟ ಮೂರುಕೈ ಸಮೀಪದಲ್ಲಿ ತಮ್ಮ ವಾಹನವನ್ನು ಅಡ್ಡ ನಿಲ್ಲಿಸಿ ಕಾರನ್ನು ತಡೆದರು.

ಕಾರನ್ನು ಪರಿಶೀಲಿಸಿದಾಗ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದ್ದು ವಿಚಾರಿಸಿದಾಗ ಆರೋಪಿಯು ಕೇರಳದಲ್ಲಿ ಕಳವು ಕೃತ್ಯ ಎಸಗಿ ಬಿಹಾರಕ್ಕೆ ಪರಾರಿಯಾಗುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

Comments are closed.