ಕರಾವಳಿ

ಚುನಾವಣೆ ವೇಳೆ ಹಿಂದುತ್ವ ನೆನಪಾಯಿತಾ?, ಪಕ್ಷ ನಿಷ್ಠೆ ಇಲ್ಲದ ನಿಮಗೆ ಮೋದಿ ಫೋಟೋ ಯಾಕೆ?: ಈಶ್ವರಪ್ಪ ವಿರುದ್ಧ ಬಿಜೆಪಿ ಬೈಂದೂರು ಮಂಡಲಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಗರಂ

Pinterest LinkedIn Tumblr

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಬಿ.ವೈ. ರಾಘವೇಂದ್ರ ಅವರನ್ನು ಪಕ್ಷದ ವರಿಷ್ಠರೇ ತೀರ್ಮಾನಿಸಿ ಪ್ರಕಟಿಸಿದ್ದಾರೆ. ಪಕ್ಷದ ನಿಲುವನ್ನೇ ಒಪ್ಪಿಕೊಳ್ಳದ ನಿಮಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರು ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದಾರೆ.

ಬೈಂದೂರಿಗೆ ಬಂದು ಹಿಂದುತ್ವದ ಬಗ್ಗೆ ಮಾತನಾಡಿದ ತಕ್ಷಣವೇ ದೊಡ್ಡ ಬದಲಾವಣೆಯಾಗಲಿದೆ ಎಂಬ ಭ್ರಮೆ ಬೇಡ. ಚುನಾವಣೆ ಸಂದರ್ಭದಲ್ಲಿ ಮಾತ್ರ ನೆನಪಾಗುವ ನಿಮ್ಮ ಹಿಂದುತ್ವದ ಬಗ್ಗೆ ನಮಗೂ ತಿಳಿದಿದೆ. ಬಿ.ಎಸ್.ಯಡಿಯೂರಪ್ಪ ಅವರು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಪಕ್ಷ ಹೇಗೆ ಕಟ್ಟಿದ್ದಾರೆ ಎಂಬುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಿ. ನಿಮ್ಮನ್ನು ಶಾಸಕ, ಸಚಿವ, ಉಪಮುಖ್ಯಮಂತ್ರಿ ಮಾಡಿದ್ದು ಬಿಜೆಪಿ, ಬಿ.ಎಸ್.ವೈ. ಹೊರತು ಬೇರ್ಯಾರು ಅಲ್ಲ ಎಂಬುದೂ ನೆನಪಿರಲಿ ಎಂದು ಪ್ರಕಟನೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಈಶ್ವರಪ್ಪನವರೇ ಇದಕ್ಕೆಲ್ಲ ಉತ್ತರ ನೀಡಿ: ದೀಪಕ್ ಶೆಟ್ಟಿ
•ಮೋದಿಯವರ ಹೆಸರಿನಲ್ಲಿ ಪದೇ ಪದೇ ಬಿಜೆಪಿ ಪಕ್ಷಕ್ಕೆ ಮುಜುಗರ ಮಾಡುತ್ತಿರುವುದ್ಯಾಕೆ, ಮೋದಿಯವರೇ ನಿಮ್ಮನ್ನು ತಿರಸ್ಕಾರ ಮಾಡಿರುವಾಗ ಮೋದಿಯವರ ಭಾವ ಚಿತ್ರ ಯಾಕೆ ಬಳಸುತ್ತಿದ್ದೀರಿ?

•ಅನಂತ್ ಕುಮಾರ್, ಹೆಗಡೆ, ಪ್ರತಾಪ್ ಸಿಂಹ ಮೊದಲಾದ ನಾಯಕರು ಟಿಕೆಟ್ ತಪ್ಪಿದಾಗ ಚಕಾರ ಎತ್ತಲಿಲ್ಲ. ನಿಮಗೆ ಪಕ್ಷಕ್ಕಿಂತ ವೈಯಕ್ತಿಕ ಹಿತಾಸಕ್ತಿಯೇ ಮೇಲಾಯಿತೇ ?

•ನಿಮ್ಮನ್ನು ಶಾಸಕ, ಸಚಿವ, ಉಪಮುಖ್ಯಮಂತ್ರಿಯಾಗಿ ಮಾಡಿದ ಪಕ್ಷಕ್ಕೆ ನೀವು ತೋರುವ ನಿಷ್ಠೆ ಇದೆಯೇ?

•ಬಿಜೆಪಿ ನಿಮಗೆ ಬೇಡ ಮತ ಕೇಳಲು ಮೋದಿ ಮಾತ್ರ ಬೇಕು? ಮೋದಿಯವರು ಪ್ರಧಾನಿ ಆಗಬಾರದು ಎನ್ನುವುದು ನಿಮ್ಮ ಬಂಡಾಯವೇ?

•ನಿಮ್ಮದು ಜಾತಿ ರಾಜಕಾರಣ ಅಥವಾ ಪಕ್ಷ ವಿರೋಧಿ ಚಟುವಟಿಕೆಯೇ?

•ನಿಮಗೆ ಎಲ್ಲ ಸ್ಥಾನಮಾನ ನೀಡಿದ ಬಿಜೆಪಿಗೆ ಈ ಹಿಂದೆ ಬ್ರಿಗೆಟ್ ಹೆಸರಿನಲ್ಲಿ ಅನ್ಯಾಯ ಮಾಡಿದ್ರೀ ಈಗ ಬಂಡಾಯದ ಮೂಲಕ ತಾವು ಪಕ್ಷ ನಿಷ್ಠರಲ್ಲ ಎಂಬುದನ್ನು ತೋರುತ್ತಿದ್ದೀರಾ?

•ನಿಮ್ಮ ಮಗನಿಗೆ ಹಾವೇರಿಯಲ್ಲಿ ಟಿಕೆಟ್ ಕೇಳಿದ್ದ ನೀವು ಶಿವಮೊಗ್ಗದಲ್ಲಿ ಏಕೆ ಸ್ಪರ್ಧಿಸುತ್ತಿದ್ದೀರಿ? ಹಾವೇರಿಯಲ್ಲೇ ಶಕ್ತಿ ಪ್ರದರ್ಶನ ಮಾಡಬಹುದಿತ್ತಲ್ಲ?

•ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದಾಗ ಮರಿ ರಾಜಹುಲಿ ಎಂದಿದ್ದ ನೀವು ಆಗ ನಿಮಗೆ ಕುಟುಂಬ ರಾಜಕಾರಣ ನೆನಪಾಗಲಿಲ್ಲವೇ?

•ಅಧಿಕಾರಕ್ಕಾಗಿ ಯಡಿಯೂರಪ್ಪ ಅವರ ಮನೆ ಬಾಗಿಲಿಗೆ ಹೋಗುವಾಗ ನಿಮಗೆ ಕುಟುಂಬ ರಾಜಕಾರಣ ನೆನಪಾಗಲಿಲ್ಲವೇ?

•ಅಧಿಕಾರಕ್ಕಾಗಿ ಜಾತಿಯನ್ನು ಮುಂದೆ ತರುವುದು, ಬ್ರೀಗೆಡ್ ಹೆಸರಿನಲ್ಲಿ ಬಿಜೆಪಿಗೆ ತ್ರೇಟ್ ನೀಡುವ ನಿಮ್ಮ ಸಂಸ್ಕೃತಿ ಯಾವುದು?. ದೆಹಲಿಗೆ ಹೋದರೂ ವರಿಷ್ಠರು ನಿಮಗೆ ಮಾತನಾಡಲು ಸಿಗಲಿಲ್ಲ ಯಾಕೆ?. ಚುನಾವಣೆ ಸಂದರ್ಭದಲ್ಲಿ ನಿಮಗೆ ಹಿಂದುತ್ವ ನೆನಪಾಯಿತೇ? ಈ ಹಿಂದೆ ಕರಾವಳಿ ಹಿಂದು ಸಂಘಟನೆ ಕಾರ್ಯಕರ್ತರು ಹೇಗಿದ್ದರು ಎಂದು ಒಮ್ಮೆಯಾದರೂ ವಿಚಾರಿಸಿದ್ದೀರೇ? ಬೈಂದೂರಿಗೆ ನಿಮ್ಮ ಕೊಡುಗೆ ಏನು? ಎಂದು ದೀಪಕ್ ಕುಮಾರ್ ಶೆಟ್ಟಿ ಪ್ರಶ್ನಿಸಿದ್ದಾರೆ.

Comments are closed.