ಕರಾವಳಿ

ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಿಗೆ ಒಲಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ

Pinterest LinkedIn Tumblr

ದ.ಕ. ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ

ಮಂಗಳೂರು: ಬಿಜೆಪಿಯ ಸಾಮಾನ್ಯ ಕಾರ್ಯಕರ್ತ, ಬಿಲ್ಲವ ಸಮಾಜದ ಸತೀಶ್‌ ಕುಂಪಲ ಅವರಿಗೆ ದ.ಕ. ಜಿಲ್ಲೆಯ ಬಿಜೆಪಿ ಅಧ್ಯಕ್ಷ ಹುದ್ದೆ ದೊರೆತಿದೆ.

1987ರಿಂದ ಬಿಜೆಪಿ ಬೂತ್‌ ಚಟುವಟಿಕೆ ಆರಂಭಿಸಿ ಸತೀಶ್‌ 1989ರಲ್ಲಿ ಬಿಜೆಪಿ ಕುಂಪಲ ಬೂತ್‌ ಪ್ರಧಾನ ಕಾರ್ಯದರ್ಶಿಯಾಗಿ, 1994ರಲ್ಲಿ ಸೋಮೇಶ್ವರ ಗ್ರಾ.ಪಂ.ಕಾರ್ಯದರ್ಶಿಯಾಗಿ, 1999ರಲ್ಲಿ ಉಳ್ಳಾಲ ವಿಧಾನಸಭಾ ಕ್ಷೇತ್ರ ಬಿಜೆಪಿ ಕಾರ್ಯದರ್ಶಿ, 2003ರಲ್ಲಿ ಪ್ರಧಾನ ಕಾರ್ಯದರ್ಶಿಯಾದ ಅವರು 2007, 2013 ಹಾಗೂ ಪ್ರಸ್ತುತ ಬಿಜೆಪಿ ದ.ಕ. ಜಿಲ್ಲಾ ಕಾರ್ಯದರ್ಶಿಯಾಗಿದ್ದಾರೆ.

ಎರಡು ಬಾರಿ ಸೋಮೇಶ್ವರ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾದ ಅವರು ಕೊಣಾಜೆ ಹಾಗೂ ಕೋಟೆ ಕಾರ್‌ನಿಂದ ಜಿ.ಪಂ. ಸದಸ್ಯ ರಾಗಿದ್ದರು. 2013ರಿಂದ 2015ರವರೆಗೆ ದ.ಕ. ಜಿ.ಪಂ. ಉಪಾಧ್ಯಕ್ಷರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯು.ಟಿ. ಖಾದರ್‌ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದರು.ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಸ್ಥಾಪಕ ಅಧ್ಯಕ್ಷ ಸಹಿತ ವಿವಿಧ ಸಂಘ -ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್‌
ಕುಂದಾಪುರ: ಬಿಜೆಪಿ ಉಡುಪಿ ಜಿಲ್ಲೆ ಅಧ್ಯಕ್ಷರಾಗಿ ಬಿ. ಕಿಶೋರ್‌ ಕುಮಾರ್‌ ಕುಂದಾಪುರ ನೇಮಕವಾಗಿದ್ದಾರೆ.

ಅವರು ಕುಂದಾಪುರ ಮಂಡಲ ಬಿಜೆಪಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ರಾಜ್ಯ ಮೀನುಗಾರಿಕೆ ಪ್ರಕೋಷ್ಠದ ಸಂಚಾಲಕರಾಗಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸಂದರ್ಭ ಭಟ್ಕಳ ಸಹಿತ ವಿವಿಧ ಕ್ಷೇತ್ರಗಳ ಉಸ್ತುವಾರಿಯಾಗಿ, ಬೈಂದೂರು ವಿಧಾನಸಭೆ ಕ್ಷೇತ್ರ ಪ್ರಭಾರಿ ಸಹಿತ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದ್ದರು.

2013ರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿದಾಗ ಬಿಜೆಪಿ ಅಭ್ಯರ್ಥಿಯಾಗಿ ಕುಂದಾಪುರದಿಂದ ಸ್ಪರ್ಧಿಸಿದ್ದರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಕುಂದಾಪುರ ಅಥವಾ
ಬೈಂದೂರು ಕ್ಷೇತ್ರದ ಅಭ್ಯರ್ಥಿಯಾಗಿ ಕಿಶೋರ್‌ ಕುಮಾರ್‌ ಹೆಸರು ಮುನ್ನಲೆಯಲ್ಲಿತ್ತು.

ಉದ್ಯಮಿಯಾಗಿರುವ ಕಿಶೋರ್‌ ಕುಮಾರ್‌ ರಾಜಕೀಯದ ಹೊರತಾಗಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ಹಾಗೂ ಪ್ರಮುಖ ಹೋರಾಟಗಳ ಮುಂಚೂಣಿ ವಹಿಸಿದವರು. ಕುಂದಾಪುರ ರೋಟರಾಕ್ಟ್ ಕ್ಲಬ್‌, ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್‌ ಸಂಸ್ಥೆಯ ಮೂಲಕ ಸಾಂಸ್ಕೃತಿಕ ರಂಗದಲ್ಲಿಯೂ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರ ನೇತೃತ್ವದಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆಸುತ್ತಿರುವ ‘ಇನಿದನಿ’ ಕಾರ್ಯಕ್ರಮ ಜನಮನ್ನಣೆಗೆ ಪಾತ್ರವಾಗಿದೆ.

ಕುಂದಾಪುರದ ಪ್ರಸಿದ್ಧ ನಾಗಣ್ಣ ನಶ್ಯ ಮಾಲಕರಾಗಿರುವ ಅವರು ಕುಂದಾಪುರ ಎಪಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಬಿಜೆಪಿ ಮೀನುಗಾರಿಕೆ ಪ್ರಕೋಷ್ಠದ ಸಂಚಾಲಕರಾಗಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷರಾಗಿದ್ದರು. ಪ್ರಸ್ತುತ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿದ್ದು ಇದೀಗಾ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Comments are closed.