ಕರಾವಳಿ

ಜಿಲ್ಲಾ ಕೆಡಿಪಿ ಸಭೆಯಲ್ಲಿ ಶಾಸಕ‌ ಸುನಿಲ್ ಕುಮಾರ್ ನಡವಳಿಕೆ ಖಂಡನಾರ್ಹ: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ

Pinterest LinkedIn Tumblr

ಉಡುಪಿ: ನ.24 ರಂದು ನಡೆದ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರವರು ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರರವರಿಗೆ ಕಾನೂನುಬದ್ದವಾಗಿ ಕರ್ತವ್ಯನಿರ್ವಹಿಸಿದಕ್ಕೆ ಜಿಲ್ಲೆಯ ಅಧಿಕಾರಿಗಳ ಮತ್ತು ಜನಪ್ರತಿನಿದಿಗಳ ಎದುರು ಆತ್ಮ ಸ್ಥೈರ್ಯ ಕುಸಿಯುವಂತೆ ತರಾಟೆಗೆ ತೆಗೆದುಕೊಂಡಿರುವುದನ್ನು ಮತ್ತು ಈ ಕುರಿತು ಸಭೆಯಲ್ಲಿ ಅಧಿಕಾರಿಗೆ ಮಾತನಾಡಲು ಬಿಡದೆ ಇರುವುದನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.

ಬಿಜೆಪಿ ಆಡಳಿತದ 3 ವರ್ಷದ ಅವಧಿಯಲ್ಲಿ ಸುನೀಲ್ ಕುಮಾರವರು ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲಿ ತನಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿರುವುದನ್ನು ಜಿಲ್ಲೆಯ ಜನತೆ ಮರೆತಿಲ್ಲ. ಸುನೀಲ್ ಕುಮಾರ್ ಸಚಿವರಾಗಿದ್ದಾಗ ಪೋಲಿಸ್ ಠಾಣೆಗಳು ಮಟ್ಕಾ ಬಿಡ್ಡರ್, ಕ್ಲಬ್ ಮಾಲಿಕರ ಮತ್ತು ಸಮಾಜಘಾತಕ ಶಕ್ತಿಗಳ ಹತೋಟಿಯಲ್ಲಿದ್ದು ಸಜ್ಜನರು ಮತ್ತು ಬಡವರಿಗೆ ನ್ಯಾಯ ಸಿಗುತ್ತಿರಲಿಲ್ಲ ಎಂದವರು ಆರೋಪಿಸಿದ್ದಾರೆ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಖುದ್ದು ದಕ್ಷ ಪೋಲಿಸ್ ಅಧಿಕಾರಿಯನ್ನು ಜಿಲ್ಲೆಗೆ ನೇಮಿಸುವ ಮೂಲಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದ್ದುಬಸ್ತಿನಲ್ಲಿಡಲು ಮತ್ತು ಪೋಲಿಸ್ ಇಲಾಖೆಯಲ್ಲಿ ಸಾಮಾಜಿಕ ನ್ಯಾಯ ಸಿಗುವಂತಾಗಲು ಕಾರಣಿ ಭೂತರಾದರು.

ಸಿಮೆಂಟ್ ಹಗರಣ, ಗಣಿ ಹಗರಣ, ಪರಶುರಾಮ ಹಗರಣ, ಕಾರ್ಕಳ ಉತ್ಸವ ಹಗರಣ ಮತ್ತು ಅನೇಕ ಹಗರಣಗಳ ಮೂಲಕ ಉಡುಪಿ ಜಿಲ್ಲೆಯ 25 ವರ್ಷದ ಇತಿಹಾಸದಲ್ಲಿ ಅತ್ಯಂತ ಭ್ರಷ್ಟ ಶಾಸಕ ಹಾಗೂ ಸಚಿವ ಎನಿಸಿಕೊಂಡ ಸುನೀಲ್ ಕುಮಾರರವರು ಓರ್ವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯನ್ನು ಕೆಡಿಪಿ ಸಭೆಯಲ್ಲಿ ಮಾತನಾಡಲು ಮತ್ತು ಸಮಜಾಯಿಷಿಕೆ ನೀಡಲು ಬಿಡದೇ ಇರುವುದು ತೀವ್ರ ಖಂಡನೀಯ ವಿಚಾರ ಎಂದು ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.