ಕರಾವಳಿ

ಕುಂದಾಪುರ ವಿವಿದೆಡೆ ಚಿರತೆಗಳ ಓಡಾಟ; ಬಲಿಯಾಗುತ್ತಿದೆ ಸಾಕುಪ್ರಾಣಿಗಳು-ಜನರಲ್ಲಿ ಹೆಚ್ಚಿದ ಆತಂಕ..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ತಾಲೂಕಿನ ಹಲವೆಡೆ ಚಿರತೆ ಓಡಾಟ ಹೆಚ್ಚಿದೆ. ಜನವಸತಿಯಿರುವ ಪ್ರದೇಶಕ್ಕೆ ಹೊಂಚುಹಾಕಿ ಬರುವ ಚಿರತೆ ಸಾಕು ಪ್ರಾಣಿಗಳನ್ನು ಎಳೆದೊಯ್ಯುತ್ತಿರುವುದು ಮಾತ್ರವಲ್ಲದೆ ಜನರ ಎದುರೇ ತಿರುಗಾಡುವ ವಿಡಿಯೋ ಹಾಗೂ ಫೋಟೋಗಳು ನಿತ್ಯ ವೈರಲ್ ಆಗುತ್ತಿದೆ.

ನಾಡಿನೆಡೆಗೆ ಚಿರತೆ..!
ಇತ್ತೀಚಿನ ಕೆಲ ವರ್ಷಗಳಲ್ಲಿ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿರುವುದು ಜಿಲ್ಲಾದ್ಯಂತ ವರದಿಯಾಗುತ್ತಿದೆ. ಇದರಲ್ಲಿ ಚಿರತೆಯು ಆಹಾರವರಸಿ ಜನವಸತಿ ಪ್ರದೇಶದತ್ತ ಬರುವುದು, ಮೂಕ ಪ್ರಾಣಿಗಳನ್ನು ಕೊಂಡೊಯ್ಯುವುದು, ಬಾವಿ-ಕೆರೆಗೆ ಬಿದ್ದು ತಮ್ಮ ಜೀವದೊಂದಿಗೆ ಸೆಣೆಸಾಡುವ ಜೊತೆಗೆ ಜನರಿಗೆ ಕಾಣಿಸಿಕೊಂಡು ಆತಂಕ ಹುಟ್ಟಿಸುತ್ತಿದೆ. ಮನೆಯ ನಾಯಿ, ಜಾನುವಾರು ಸಹಿತ ಸಾಕು ಪ್ರಾಣಿಗಳು ಹಲವಾರು ಅಲ್ಲಲ್ಲಿ ಚಿರತೆ ದಾಳಿಗೆ ಬಲಿಯಾಗಿದೆ. ಸಂಜೆ ಹಾಗೂ ರಾತ್ರಿ ಹೊತ್ತು ಕೆಲಸ ಮುಗಿಸಿ ಹೋಗುವ ಅದೆಷ್ಟೋ ಮಂದಿಗೆ ಚಿರತೆ ಪ್ರತ್ಯಕ್ಷವಾಗುತ್ತಿದೆ. ಚಿರತೆ ಓಡಾಟದಿಂದ ನಾಯಿಗಳು ಕೂಗಿ ರಾತ್ರಿಯಿಡೀ ನಿದ್ದೆ ಬಿಟ್ಟವರು ಹಲವರು. ಮತ್ತೆ ಕೆಲವೆಡೆ ಜನರು ಸಂಜೆಯಾಗುವ ಮೊದಲೆ ಮನೆ ಸೇರುತ್ತಾರೆ.

ಮಾಲಾಡಿಯಲ್ಲಿ ನಿರಂತರ ಚಿರತೆ ಕಾಟ..!
ತಾಲೂಕಿನ ತೆಕ್ಕಟ್ಟೆ ಸಮೀಪದ ಮಾಲಾಡಿ ತೋಪಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆಯು ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ. ಹಗಲು-ರಾತ್ರಿಯೆನ್ನದೆ ಆಗ್ಗಾಗೆ ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಸೃಷ್ಟಿಸುತ್ತಿದೆ. ಕಳೆದ ಒಂದು ವಾರದಿಂದ ಹಲವು ಸಾಕು ನಾಯಿಗಳು ಚಿರತೆ ದಾಳಿಗೆ ಬಲಿಯಾಗಿದೆ. ಈ ತೋಟದಲ್ಲಿ 2018 ಆಗಸ್ಟ್ ತಿಂಗಳಲ್ಲಿ ಮೊದಲ್ಗೊಂಡು 2022 ಅ.2 ತನಕ ಆರು ಚಿರತೆಗಳು ಸೆರೆಯಾಗಿದ್ದು‌‌ ಈ ಭಾಗದಲ್ಲಿ ಜನವಸತಿ, ಶಾಲೆ, ಅಂಗನವಾಡಿ, ದೇವಸ್ಥಾನವಿದ್ದು ದಿನೇದಿನೇ ಚಿರತೆ ಇಲ್ಲಿ ಪ್ರತ್ಯಕ್ಷವಾಗುತ್ತಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ. ಈ ಬಗ್ಗೆ ಸ್ಪಂದಿಸಿದ ಇಲಾಖೆ ಜ.20ರಂದು ಚಿರತೆ ಸೆರೆಗಾಗಿ ಬೋನಿಟ್ಟಿದೆ.

ಕಳೆದ 4-5 ವರ್ಷಗಳಿಂದ ನಿರಂತರವಾಗಿ ಚಿರತೆ ಕಾಟವಿದೆ. ರಾತ್ರಿ-ಹಗಲೆನ್ನದೆ ಪ್ರತ್ಯಕ್ಷವಾಗುವ ಚಿರತೆ ಜನರ ನಿದ್ದೆಗೆಡಿಸಿದೆ. ನಾಯಿ ಸಹಿತ ಸಾಕು ಪ್ರಾಣಿಗಳು ಚಿರತೆಗೆ ಬಲಿಯಾಗಿದೆ. ಅರಣ್ಯ ಇಲಾಖೆ ಚಿರತೆ ಸೆರೆಗೆ ಸ್ಪಂದಿಸುತ್ತಿದೆ. ಆದರೂ ಕೂಡ ಚಿರತೆ ಉಪಟಳ ತಪ್ಪಿಲ್ಲ. ಮಾಲಾಡಿ ತೋಪಿನಲ್ಲಿಯೇ 5 ವರ್ಷದಲ್ಲಿ 6 ಚಿರತೆ ಸೆರೆ ಹಿಡಿಯಲಾಗಿದೆ. 2022 ರಲ್ಲಿ ಎರಡು ಚಿರತೆ ಬೋನಿಗೆ ಬಿದ್ದಿದೆ. ಗುರುವಾರ ರಾತ್ರಿ ತನಕವೂ ಚಿರತೆ ಕಾಟ ಹಾಗೆಯೇ ಇದೆ.
– ಸತೀಶ್ ದೇವಾಡಿಗ, ಮಾಲಾಡಿ

ಕುಂದಾಪುರ ವಲಯ ಅರಣ್ಯ ವ್ಯಾಪ್ತಿಯ ನಾಡ, ಆಲೂರು, ಗುಲ್ವಾಡಿ, ವಕ್ವಾಡಿ, ಕಾಳಾವರ, ಕೊರ್ಗಿ, ಕೆದೂರು, ಅಸೋಡು, ಅಂಪಾರು ಸಹಿತ ತಾಲೂಕಿನ ಹಲವಾರು ಕಡೆ ಚಿರತೆ ಓಡಾಟದ ಬಗ್ಗೆ ದೂರು ಹೆಚ್ಚಿದೆ. ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಕೆತ್ತಿಮಕ್ಕಿ ಎಂಬಲ್ಲಿ ವಾರಗಳ ಹಿಂದೆ ಅರಣ್ಯ ಇಲಾಖೆಯಿಟ್ಟ ಬೋನಿನಲ್ಲಿ ಗುರುವಾರ ಚಿರತೆ ಸೆರೆಯಾಗಿದೆ. ಉಳಿದಂತೆ 3 ತಿಂಗಳ ವ್ಯಾಪ್ತಿಯಲ್ಲಿ ತೆಕ್ಕಟ್ಟೆಯ ಮಾಲಾಡಿ, ಹಾಗೂ ಕುಂದಬಾರಂದಾಡಿ ಎಂಬಲ್ಲಿ ಚಿರತೆಯನ್ನು ಸೆರೆಹಿಡಿಯಲಾಗಿದೆ. ಸೆರೆಯಾದ ಚಿರತೆಗಳನ್ನು ರಕ್ಷಿತಾರಣ್ಯಕ್ಕೆ ಬಿಡುವ ಕಾರ್ಯ ಅರಣ್ಯ ಇಲಾಖೆ ಮಾಡುತ್ತಿದೆ. ಮಾಲಾಡಿಯಲ್ಲಿ ಮತ್ತೆ ಚಿರತೆ ಓಡಾಟದ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದು ಬೋನು ಇಡಲಾಗಿದೆ.
ಕಿರಣ್ ಬಾಬು (ಕುಂದಾಪುರ ವಲಯ ಅರಣ್ಯಾಧಿಕಾರಿ)

 

Comments are closed.