ಕರಾವಳಿ

ಉಡುಪಿ, ದ.ಕ ಜಿಲ್ಲಾ ಕೊರಗರ ಸಂಘಟನೆಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬು ಪಾಂಗಳರಿಗೆ ಅಭಿನಂದನೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಸಾಹಿತ್ಯ, ಸಂಗೀತ, ಕಲೆ ವಿಚಾರದಲ್ಲಿ ಹಿಂದಿನಿಂದಲೂ ಬಲಿಷ್ಟ ಸಮಾಜ ಪ್ರಶಸ್ತಿಗಳನ್ನು ಪಡೆಯುತ್ತಿರುವುದು ಸಾಮಾನ್ಯ ಸಂಗತಿ. ಆದರೆ ದಕ್ಕದಿರುವ ಸಮುದಾಯಕ್ಕೆ ಪ್ರಶಸ್ತಿಗಳು ದಕ್ಕಿದಾಗ ಸಂಭ್ರಮ ಇರುತ್ತದೆ. ತುಳಿತಕ್ಕೊಳಗಾದ ಕೊರಗ ಸಮುದಾಯ ಇತ್ತೀಚೆಗೆ ಕೆಲವು ವರ್ಷಗಳಿಂದ ತನ್ನದೇ ಪ್ರತಿಭೆಗಳ ಮೂಲಕ ಪ್ರಶಸ್ತಿಗಳಿಗೆ ಭಾಜನರಾಗುತ್ತಿದ್ದು ಈ ವೇಳೆ ಸಂಭ್ರಮದ ಜೊತೆಗೆ ವಿವೇಕ ಹಾಗೂ ಎಚ್ಚರವೂ ಅಗತ್ಯ ಎಂದು ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಜಯಪ್ರಕಾಶ್ ಶೆಟ್ಟಿ ಹೇಳಿದರು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೊರಗರ ಸಂಘಟನೆ ವತಿಯಿಂದ ಭಾನುವಾರ ಕುಂಭಾಶಿ ಮಕ್ಕಳ ಮನೆಯಲ್ಲಿ ನಡೆದ 2022ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬು ಪಾಂಗಳ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಿಷ್ಕಲ್ಮಷ ಮನಸ್ಸಿನ ಕೊರಗ ಸಮುದಾಯವನ್ನು ಹಿಂದಿನಿಂದಲೂ ಯಾರೂ ಗುರುತಿಸದಿದ್ದರೂ ಅವರು ಕೊರಗಿಲ್ಲ. ಸಂಗೀತ ಪರಂಪರೆ ಕಾಪಾಡಿಕೊಂಡು ಬಂದ ಕೊರಗರ ಕೊಳಲಿನ ದನಿಯಲ್ಲಿ ಅವರ ನೋವು, ದುಃಖ, ಸಂಕಟ ಸಂಗೀತದ ಮೂಲಕವಾಗಿ ಹೊರಬರುತ್ತಿದೆ. ತಳ ಸಮುದಾಯ ಅಕ್ಷರದತ್ತ ತೆರೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು ಉದ್ಯೋಗ ಕ್ಷೇತ್ರ ಬತ್ತಿಹೋಗುವ ವಾಸ್ತವ ವಿಚಾರ ಮರೆಯಬಾರದು. ಶಾಲೆಗಳ ಗೋಡೆಗಳಿಗೆ ಚಿತ್ರ, ಬಣ್ಣ ‌ಬಳಿಯುವ ಮೊದಲಿಗೆ ಸರಕಾರಿ ಶಾಲೆಗಳಿಗೆ ಮೂಲಸೌಕರ್ಯ ನೀಡಬೇಕಿದೆ. ಶಿಕ್ಷಣದಿಂದ ಮುನ್ನೆಲೆಗೆ ಬರುತ್ತಿರುವ ಕಾಲಘಟ್ಟದಲ್ಲಿ ಸಮುದಾಯವನ್ನು ಜತನದಿಂದ ಮುನ್ನೆಡಸಬೇಕಾದ ಜವಬ್ದಾರಿ ಯುವಪೀಳಿಗೆಗಿದೆ. ಈ ತಲೆಮಾರಿನ ಮಾದರಿ ಪುರುಷರ ಅನುಕರಣೆಯೂ ಅಗತ್ಯವಾಗಿದೆ. ಅಲ್ಲದೆ ಆಸ್ತಿಕ, ಅನಾಸ್ತಿಕತೆ ನಡುವೆ ದೈವ, ಭಾಷೆ, ಆಹಾರದ ಬಗ್ಗೆ ತಿಳುವಳಿಕೆ ಮುಖ್ಯ. ಯಾರೋ ಹೇಳುವ ಆಚರಣೆ ಸರಿಯಲ್ಲ ಎಂದರು.

ಮಹತ್ಮಾ ಜ್ಯೋತಿ ಬಾಪುಲೆ ಕೊರಗರ ಯುವ ಕಲಾ ವೇದಿಕೆ ಬೈಂದೂರಿನ ಅಧ್ಯಕ್ಷ ಲಕ್ಷ್ಮಣ್ ಬೈಂದೂರು ಪ್ರಸ್ತಾವನೆಗೈದು ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದ ಸಮಾಜದಲ್ಲಿ ವಿಸ್ಮಯ ಸೃಷ್ಟಿಸಿದ ಬಾಬು ಪಾಂಗಳ ಅವರಿಗೆ ಪ್ರಶಸ್ತಿ ಲಭಿಸಿರುವುದು ಹೆಮ್ಮೆ ವಿಚಾರ. ಇದು ಸಮುದಾಯದ ಯುವ ಪೀಳಿಗೆಗೆ ಮಾದರಿ. ತನ್ನ ಮನಸ್ಸಿನ ಭಾವನೆಗಳನ್ನು ಲೇಖನಿ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಪ್ರಪಂಚಕ್ಕೆ ತೋರಿಸುತ್ತಿರುವುದು ಗಮನಾರ್ಹ ಸಂಗತಿ ಎಂದರು.

ಬಾಬು ಪಾಂಗಳ ಅವರನ್ನು ಕೊರಗ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಆನೆಗುಡ್ಡೆ ಸ್ವಾಗತ ಗೋಪುರದಿಂದ ಡೋಲು, ಕೊಳಲು ವಾದನದೊಂದಿಗೆ ಮೆರವಣಿಗೆ ಮೂಲಕ ಅವರನ್ನು ಸ್ವಾಗತಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಾಬು ಪಾಂಗಳ ಮಾತನಾಡಿ, ಶತಮಾನಗಳಿಂದ ಶೋಷಣೆಗೊಳಗಾಗುತ್ತಾ ಬಂದ ನನ್ನ ಸಮುದಾಯದ ತಳಸ್ತರದ ಜನರಿಗೆ ಈ ಪ್ರಶಸ್ತಿ ಸಲ್ಲುತ್ತದೆ. ನನಗೆ ಪ್ರಶಸ್ತಿ ಬಂದಾಗ ಇಡೀ ಸಮುದಾಯ ಖುಷಿಪಟ್ಟಿದ್ದು ಬೆನ್ನುತಟ್ಟಿ ಪ್ರಶಂಸಿಸಿದ್ದಾರೆ. ಸಾಧನೆ ಮೂಲಕವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸುವ ಪ್ರಯತ್ನವಾಗಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕೊರಗರ ಸಂಘದ ಅಧ್ಯಕ್ಷ ಸುಂದರ ಬೆಳ್ವಾಯಿ, ಉಡುಪಿ ಜಿಲ್ಲಾ ಕೊರಗರ ಸಂಘದ ಅಧ್ಯಕ್ಷೆ ಗೌರಿ ಕೆಂಜೂರು, ಕುಂಭಾಸಿ ಮಕ್ಕಳ ಮನೆಯ ಮುಖ್ಯಸ್ಥರಾದ ಗಣೇಶ್ ಕುಂದಾಪುರ ಇದ್ದರು.

ಹುಭಾಷಿಕಾ ಕೊರಗರ ಯುವ ಕಲಾ ವೇದಿಕೆಯ ಅಧ್ಯಕ್ಷ ಗಣೇಶ್ ಬಾರ್ಕೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಶ್ವಿನಿ ಬಾರ್ಕೂರು ಸ್ವಾಗತಿಸಿದರು. ರಮೇಶ ಮಂಚಕಲ್ಲು ಆಶಯ ಗೀತೆ ಹಾಡಿದರು. ರಮೇಶ್ ಗುಂಡಾವು ನಿರೂಪಿಸಿ, ಶೇಖರ್ ಮರವಂತೆ ವಂದಿಸಿದರು.

 

 

Comments are closed.