ಮಂಗಳೂರು: ಲಾಕ್ಡೌನ್ ಬಳಿಕ ಇದೀಗ ಪುತ್ರ ಅಭಿನಯಿಸಿರುವ ‘ತಡಪ್’ ಹಿಂದಿ ಚಲನಚಿತ್ರ ಡಿ.3ರಂದು ಬಿಡುಗಡೆಗೊಳ್ಳುತ್ತಿದೆ. ಜನ ನನಗೆ ಇಂಡಸ್ಟ್ರಿಯಲ್ಲಿ ನೀಡಿದ ಪ್ರೋತ್ಸಾಹವನ್ನೇ ಪುತ್ರನಿಗೂ ಪ್ರೇಕ್ಷಕರು ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದರು.
ಡಿ.೩ರಂದು ಪುತ್ರ ಅಹಾನ್ ಶೆಟ್ಟಿ ಅವರ ‘ತಡಪ್’ ಹಿಂದಿ ಚಲನಚಿತ್ರ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದೆ ದೊಡ್ಡ ಸವಾಲಾಗಿದೆ. ಕೋವಿಡ್ ಸ್ವಲ್ಪ ಮಟ್ಟಿಗೆ ಇಳಿಮುಖ ಕಂಡಿದ್ದರಿಂದ ಸಿನಿಮಾ ಕ್ಷೇತ್ರ ನಿಧಾನವಾಗಿ ಚೇತರಿಕೆ ಹಾದಿಯಲ್ಲಿ ಇದೆ. ಕೋವಿಡ್ನಿಂದಾಗಿ ದೊಡ್ಡ ಪ್ರಮಾಣದ ನಷ್ಟ ಸಿನಿಮಾ ಕ್ಷೇತ್ರಕ್ಕೆ ಆಗಿದ್ದು, ಈ ಆತಂಕ ಇನ್ನೂ ಕೂಡ ಮುಗಿದಿಲ್ಲ.
ಕೋವಿಡ್ ಕಾರಣದಿಂದ ತಡಪ್ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದ್ದ ಸಂದರ್ಭ ಒಟಿಟಿ ಮೂಲಕ ಬಿಡುಗಡೆ ಮಾಡಬೇಕು ಎಂದು ಅನೇಕ ಆಫರ್ಗಳು ಬಂದಿದ್ದವು. ಆದರೆ ನಾವು ದೊಡ್ಡ ಸ್ಕ್ರೀನ್ನಲ್ಲೇ ಪುತ್ರನ ಸಿನಿಮಾ ಬಿಡುಗಡೆ ಮಾಡಬೇಕು ಎಂಬ ಆಶಯದಿಂದ ಇಷ್ಟು ಸಮಯ ಕಾದು ಇದೀಗ ಮುಹೂರ್ತ ಫಿಕ್ಸ್ ಮಾಡಿದ್ದೇವೆ. ವಿಶ್ವದ ವಿವಿಧ ಚಿತ್ರ ಮಂದಿರಗಳಲ್ಲಿ ಏಕಕಾಲದಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ ಎಂದರು.
ಒಬ್ಬ ತುಳುವನಾಗಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ತುಳು ಸಂಸ್ಕೃತಿಯೇ ಅಂತದ್ದು. ನಮ್ಮನ್ನು ಎಲ್ಲಿ ಬೇಕಾದರೂ ಬೆಳೆಸುತ್ತದೆ. ನಮ್ಮ ಹಿರಿಯರು ಕೂಡಾ ಅದೇ ಹಾದಿಯಲ್ಲಿ ಬೆಳೆದು ಬಂದವರು. ನನ್ನ ಪುತ್ರನನ್ನು ಕೂಡಾ ಹಾಗೆಯೇ ಬೆಳೆಸಿದ್ದೇನೆ. ಆದರೆ ಆತನಿಗೆ ತುಳು ಭಾಷೆ ಬರುವುದಿಲ್ಲ. ಕಾರಣ ಆತನ ಅಮ್ಮನಿಗೆ ತುಳು ಗೊತ್ತಿಲ್ಲ. ಮನೆಯಲ್ಲಿ ನಾವು ತುಳು ಮಾತನಾಡದ ಕಾರಣಕ್ಕೆ ಪುತ್ರ ತುಳು ಕಲಿಯಲಾಗಿಲ್ಲ. ಆದರೆ ನಮ್ಮ ಸಂಸ್ಕೃತಿಯನ್ನು ಆತ ಚೆನ್ನಾಗಿ ಮೆಚ್ಚಿಕೊಂಡಿದ್ದಾನೆ. ಅದೇ ಕಾರಣಕ್ಕಾಗಿ ಸಿನಿಮಾ ಬಿಡುಗಡೆ ಮುಂಚೆ ತುಳುನಾಡಿದ ಆರಾಧ್ಯ ದೈವ, ದೇವರುಗಳ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇವೆ ಎಂದು ಅವರು ಹೇಳಿದರು.
ಸುನಿಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ, ಸಿನಿಮಾ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು, ದೇವಾನಂದ ಶೆಟ್ಟಿ, ವಿಜಯಕುಮಾರ್ ಕೊಡಿಯಾಲ್ಬೈಲ್ ಉಪಸ್ಥಿತರಿದ್ದರು.
Comments are closed.