ಕರಾವಳಿ

ಪತ್ರಕರ್ತರು ಮತ್ತು ಅವರ ಕುಟುಂಬದ ಸದಸ್ಯರಿಗೆ ಹೃದ್ರೋಗ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮ

Pinterest LinkedIn Tumblr

ಗ್ರಾಮ ಪಂಚಾಯಿತಿಗಳ ಪ್ರತಿ 50 ಕಿ.ಮೀ.ಗೆ ಇಸಿಜಿ ಸೌಲಭ್ಯ ಅಗತ್ಯ : ಡಾ.ಪದ್ಮನಾಭ ಕಾಮತ್

ಮಂಗಳೂರು: ಕುಗ್ರಾಮಗಳು ಸೇರಿದಂತೆ ಗ್ರಾಮ ಪಂಚಾಯಿತಿಗಳ ಪ್ರತಿ 50 ಕಿ.ಮೀ. ವ್ಯಾಪ್ತಿಯಲ್ಲಿ ಇಸಿಜಿ ಸೌಲಭ್ಯ ಲಭ್ಯವಾದರೆ ಹೃದಯಾಘಾತದಿಂದ ಉಂಟಾಗುವ ಪ್ರಾಣಾಪಾಯ ತಡೆಯಲು ಸಾಧ್ಯವಾಗಲಿದೆ ಎಂದು ಮಂಗಳೂರು ಕೆಎಂಸಿಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಮಂಗಳೂರು ಪ್ರೆಸ್‌ಕ್ಲಬ್, ದ.ಕ. ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ಭವನ ಟ್ರಸ್ಟ್ ಆಶ್ರಯದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬದ ಸದಸ್ಯರಿಗೆ ಆಯೋಜಿಸಿದ್ದ ಹೃದ್ರೋಗ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೃದಯ ತೊಂದರೆ ಕಾಣಿಸಿಕೊಂಡಾಗ ತಪಾಸಣೆ ಅಗತ್ಯ. ನಗರ ಪ್ರದೇಶಗಳಲ್ಲಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ತಕ್ಷಣ ತಪಾಸಣೆ, ಚಿಕಿತ್ಸೆಗೆ ಸಾಧ್ಯವಾಗುತ್ತದೆ. ಆದರೆ, ಕುಗ್ರಾಮಗಳಲ್ಲಿ ಹೃದಯ ರೋಗ ಸಂಬಂಧಿತ ರೋಗಿಗೆ ಸೂಕ್ತ ಸಮಯದಲ್ಲಿ ತಪಾಸಣೆ, ಚಿಕಿತ್ಸೆ ಒದಗಿಸುವುದು ಅತೀ ಅಗತ್ಯವಾಗಿರುತ್ತದೆ. ಹೃದಯಾಘಾತವನ್ನು ಖಾತ್ರಿ ಮಾಡಲು ತುಂಬ ಸರಳ ವಿಧಾನ ಇಸಿಜಿ ಆಗಿರುವುದರಿಂದ ಈ ಸೌಲಭ್ಯ ಹತ್ತಿರದಲ್ಲೇ ದೊರಕಿದರೆ ರೋಗಿಯನ್ನು ಅಪಾಯದಿಂದ ಕಾಪಾಡಲು ಸಾಧ್ಯವಾಗಲಿದೆ. ಹೃದಯಾಘಾತದ ಒಂದು ಗಂಟೆಯ ಅವಅತೀ ಅಮೂಲ್ಯವಾಗಿರುವುದರಿಂದ 50 ಕಿ.ಮೀ. ವ್ಯಾಪ್ತಿಯಲ್ಲಿ ಇಸಿಜಿ ವ್ಯವಸ್ಥೆ ಲಭ್ಯವಿದ್ದಲ್ಲಿ ಹೃದಯದ ತೊಂದರೆಯನ್ನು ಖಾತರಿಪಡಿಸಲು ಸಾಧ್ಯವಾಗುತ್ತದೆ. ಬಳಿಕ ಪ್ರಾಥಮಿಕ ಚಿಕಿತ್ಸೆ ಒದಗಿಸಬಹುದು ಎಂದು ಅವರು ಹೇಳಿದರು.

ಗ್ರಾಮ, ಕುಗ್ರಾಮಗಳಿಂದ ಹೃದಯ ತೊಂದರೆ ಕಾಣಿಸಿಕೊಂಡಾಗ ಆಸ್ಪತ್ರೆಗಳಿಗೆ ಬರುವುದು ಕಷ್ಟ. ಬಹುತೇಕವಾಗಿ ನಿರ್ಲಕ್ಷ್ಯ ವಹಿಸುತ್ತಾರೆ. ಇಂತಹ ಸಂದರ್ಭ ಹತ್ತಿರದಲ್ಲೇ ಇಸಿಜಿಯಂತಹ ಸೌಲಭ್ಯಗಳು ಲಭ್ಯವಾದಾಗ ಸಾಕಷ್ಟು ಸಮಸ್ಯೆ ನಿಯಂತ್ರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಈಗಾಗಲೇ ಗ್ರಾಮ ಪಂಚಾಯಿತಿ ಅಂಗನವಾಡಿ ಪ್ರಾಜೆಕ್ಟ್ (ಜಿಎಪಿ) ಹೆಸರಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಾತ್ರವಲ್ಲದೆ ಉಪ ಕೇಂದ್ರಗಳಲ್ಲಿಯೂ ಇಸಿಜಿ ವ್ಯವಸ್ಥೆ ಮಾಡಲಾಗುತ್ತಿದೆ. ಇದು ದೂರದೃಷ್ಟಿಯುಳ್ಳ ಯೋಜನೆಯಾಗಿದ್ದು, ದೇಶದಾದ್ಯಂತ ಈ ಯೋಜನೆ ವ್ಯಾಪಿಸುವಂತೆ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ದ.ಕ. ಜಿಲ್ಲೆ ಮಾದರಿಯಾಗಬೇಕು ಎಂದು ಅವರು ಹೇಳಿದರು.

ಬಂಟ್ವಾಳ ಮತ್ತು ಸುಳ್ಯ ಪ್ರೆಸ್‌ಕ್ಲಬ್‌ಗೆ ಇಸಿಜಿ ಯಂತ್ರಗಳನ್ನು ವಿತರಿಸಲಾಯಿತು.ಮಂಗಳೂರು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಆನಂದ ವೇಣುಗೋಪಾಲ್, ಮುಖ್ಯ ವ್ಯವಸ್ಥಾಪಕ ಸುರೇಂದ್ರ ಪ್ರಸಾದ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು.

ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಸ್ವಾಗತಿಸಿದರು. ಉಪಾಧ್ಯಕ್ಷ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ವಂದಿಸಿದರು. ಕಾರ್ಯದರ್ಶಿ ಆತ್ಮಭೂಷಣ ಭಟ್ ಪರಿಚಯಿಸಿದರು.

Comments are closed.