ಕರಾವಳಿ

ಹಳ್ಳಾಡಿಯಲ್ಲಿ ಅನ್ಯ ಧರ್ಮದವರಿಂದ ಮತಾಂತರ ಆರೋಪ: ಕೋಟ ಠಾಣೆಗೆ ಹಿಂಜಾವೇ ಮುತ್ತಿಗೆ

Pinterest LinkedIn Tumblr

ಕುಂದಾಪುರ: ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಾಡಿ-ಹರ್ಕಾಡಿಯಲ್ಲಿ ಹಿಂದೂಗಳನ್ನು ಅನ್ಯಕೋಮಿಗೆ ಮತಾಂತರಗೊಳಿಸಲಾಗುತ್ತಿದ್ದು ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕೋಟ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಹಳ್ಳಾಡಿ ಸಮೀಪ ಹಿಂದೂ ಧರ್ಮದಿಂದ ಅನ್ಯಕೋಮಿಗೆ ಮತಾಂತರವಾದ ಕುಟುಂಬವೊಂದು ಸ್ಥಳೀಯ ಭೋವಿ ಸಮಾಜದವರನ್ನು ಗುರಿಯಾಗಿಸಿಕೊಂಡು ಆಮಿಷ ತೋರಿಸಿ ಹಲವಾರು ಮಂದಿಯನ್ನು ಮತಾಂತರಗೊಳಿಸಿದೆ ಎನ್ನಲಾಗಿದ್ದು, ಭಾನುವಾರ ಕೂಡ ಇದೇ ರೀತಿ ಹಳ್ಳಾಡಿ-ಹರ್ಕಾಡಿಯ ಮನೆಯೊಂದಕ್ಕೆ ಹಲವರನ್ನು ಪ್ರಾರ್ಥನೆಗೆ ಆಹ್ವಾನಿಸಿದ್ದು, ವಿಷಯ ತಿಳಿದ ಜಾಗರಣ ವೇದಿಕೆ ಸದಸ್ಯರು ತತ್‌ಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ನಾಲ್ಕೈದು ಮಂದಿಯನ್ನು ವಶಕ್ಕೆ ಪಡೆದರು.

ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಠಾಣೆಯ ಆವರಣಕ್ಕೆ ಆಗಮಿಸಿ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಕೋಟ ಠಾಣಾಧಿಕಾರಿ ಸಂತೋಷ್ ಬಿ.ಪಿ.ಯವರು ಜಾಗರಣ ವೇದಿಕೆ ಮುಖಂಡರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು. ಅನಂತರ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಜ್ಯೋತಿ, ಪ್ರಕಾಶ್, ಮನೋಹರ್, ರವಿ ಎನ್ನುವವರ ವಿರುದ್ಧ ಸ್ಥಳೀಯರು ದೂರು ದಾಖಲಿಸಿದ್ದಾರೆ.

 

Comments are closed.