ಕರಾವಳಿ

ಕುದ್ರೋಳಿ ಶ್ರೀ ಕ್ಷೇತ್ರ : ಅ.7ರಿಂದ ಮಂಗಳೂರು ದಸರಾ ಉತ್ಸವ -ಸಾಂಸ್ಕೃತಿಕ ವೈಭವ -ಕಾರ್ಯಕ್ರಮಗಳ ವಿವರ

Pinterest LinkedIn Tumblr

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ವರ್ಷದ ಮಂಗಳೂರು ದಸರಾ ಮಹೋತ್ಸವ ಅ. 7 ರಿಂದ 16 ರ ವರೆಗೆ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಂತೆ ‘ನಮ್ಮ ದಸರಾ- ನಮ್ಮ ಸುರಕ್ಷೆ’ ಘೋಷ ವಾಕ್ಯದಡಿ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಕುದ್ರೋಳಿ ಕ್ಷೇತ್ರದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಸರಾವನ್ನು ಸರಕಾರದ ಮಾರ್ಗಸೂಚಿ ಪ್ರಕಾರ ನಡೆಸುವಂತೆ ಜಿಲ್ಲಾಧಿಕಾರಿಗಳು ಕ್ಷೇತ್ರಾಡಳಿತ ಮಂಡಳಿಯ ಸದಸ್ಯರಿಗೆ ಸಲಹೆ ನೀಡಿದ್ದು, ಅದರಂತೆ ಈ ಬಾರಿಯ ಎಲ್ಲ ಉತ್ಸವಗಳು ನಡೆಯಲಿದೆ. ಶಾರದಾ ಮೂರ್ತಿಯ ವಿಸರ್ಜನೆಯಂದು ದಸರಾ ಮೆರವಣಿಗೆ ಇರುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳು ಯಥಾವತ್ತಾಗಿ ನೆರವೇರಲಿದೆ ಎಂದರು.

 ವರ್ಚುವಲ್ ಸಾಂಸ್ಕೃತಿಕ ವೈಭವ: 

ಮಂಗಳೂರು ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವರ್ಚುವಲ್ ಮಾದರಿಯಲ್ಲಿ ನಡೆಸಲಾಗುತ್ತಿದ್ದು, ಸ್ಥಳೀಯ ಟಿವಿ ಚಾನೆಲ್‌ಗಳ ಮೂಲಕ ನೇರ ಪ್ರಸಾರವಾಗಲಿದೆ ಎಂದು ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ಕೆ. ಮಹೇಶ್ಚಂದ್ರ, ಎಂ. ಶೇಖರ್ ಪೂಜಾರಿ, ಜಗದೀಪ್ ಡಿ. ಸುವರ್ಣ, ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ. ಬಿ.ಜಿ. ಸುವರ್ಣ, ಸದಸ್ಯರಾದ ರಾಧಾಕೃಷ್ಣ, ಜತಿನ್ ಅತ್ತಾವರ, ಲೀಲಾಕ್ಷ ಕರ್ಕೇರ, ಚಂದನ್‌ದಾಸ್, ಗೌರವಿ ಪಿ.ಕೆ., ಕಿಶೋರ್ ದಂಡಕೇರಿ ಮತ್ತಿತರರು ಉಪಸ್ಥಿತರಿದ್ದರು.

 ದಸರಾ ಮಹೋತ್ಸವ ಕಾರ್ಯಕ್ರಮ: 

ಅ.7ರಂದು ಮಹಾನವಮಿ ಉತ್ಸವ ಆರಂಭ. ಬೆಳಗ್ಗೆ 9 ಕ್ಕೆ ಗುರುಪ್ರಾರ್ಥನೆ 11.30ಕ್ಕೆ ಕಲಶ ಪ್ರತಿಷ್ಠೆ ಹಾಗೂ 11.40ಕ್ಕೆ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ. 12.30 ಕ್ಕೆ ಪುಷ್ಪಾಲಂಕಾರ ಮಹಾ ಪೂಜೆ, ಸಂಜೆ 7 ಕ್ಕೆ ಭಜನೆ, ರಾತ್ರಿ 8.30 ರಿಂದ ಶ್ರೀದೇವಿ ಪುಷ್ಪಾಲಂಕಾರ ಮಹಾ ಪೂಜೆ ಮತ್ತು ಉತ್ಸವ ನಡೆಯಲಿದೆ.

ನಿತ್ಯ ವಿಶೇಷ ಪೂಜೆಗಳು: ಅ. 8 ರಂದು ಬೆಳಗ್ಗೆ 10 ಕ್ಕೆ ದುರ್ಗಾ ಹೋಮ, ಅ. 9 ರಂದು ಆರ್ಯ ದುರ್ಗಾ ಹೋಮ, ಅ. 10 ರಂದು ಭಗವತೀ ದುರ್ಗಾ ಹೋಮ, ಅ. 11 ರಂದು ಕುಮಾರಿ ದುರ್ಗಾ ಹೋಮ, ಅ.12 ರಂದು ಮಹಿಷ ಮರ್ದಿನಿ ದುರ್ಗಾ ಹೋಮ, ಅ. 13ರಂದು ಚಂಡಿಕಾ ಹೋಮ, ಅ. 14 ರಂದು ಸರಸ್ವತಿ ದುರ್ಗಾ ಹೋಮ, 11.30ಕ್ಕೆ ಶತ ಸೀಯಾಳಾಭಿಷೇಕ ನಡೆಯಲಿದೆ.

ಶಾರದಾ ವಿಸರ್ಜನೆ:

ಅ. 15 ರಂದು ವಾಗೀಶ್ವರಿ ದುರ್ಗಾ ಹೋಮ, 12.30 ಕ್ಕೆ ಶಿವ ಪೂಜೆ, 7 ರಿಂದ ಶ್ರೀದೇವಿ ಪುಷ್ಪಾಲಂಕಾರ, ಮಹಾ ಪೂಜೆ, ಉತ್ಸವ, ರಾತ್ರಿ 8 ಕ್ಕೆ ಪುಷ್ಕರಿಣಿಯಲ್ಲಿ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ ಬಳಿಕ ಶಾರದಾ ವಿಸರ್ಜನೆ, ಅವಭೃತ ಸ್ನಾನ. ಅ. 16 ರಂದು ರಾತ್ರಿ 7 ಕ್ಕೆ ಭಜನೆ, 7.30 ರಿಂದ ಗುರು ಪೂಜೆ ನಡೆಯಲಿದೆ.

ದೇವಳ ದರ್ಶನಕ್ಕೆ ನಿಬಂಧನೆಗಳು :

ಕ್ಷೇತ್ರಕ್ಕೆ ಆಗಮಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್ ಇಲ್ಲದವರಿಗೆ ಪ್ರವೇಶ ನಿಷೇಧಿಸಲಾಗುತ್ತದೆ. ದೇವಸ್ಥಾನದ ಪ್ರಾಂಗಣ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳ ಪಡ ಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು. ದೇಗುಲದ ವಠಾರ ಮತ್ತು ಒಳಗೆ, ದರ್ಬಾರು ಮಂಟಪದಲ್ಲಿ ಮೊಬೈಲ್ ಬಳಕೆ, ಫೋಟೊ, ಸೆಲ್ಫಿ ನಿಷೇಧಿಸಲಾಗಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮನಪಾದಿಂದ ಬೀದಿ ಅಲಂಕಾರ :

ಮಂಗಳೂರು ದಸರಾ ಮಹೋತ್ಸವ ಸಂದರ್ಭ ರಾಜಬೀದಿ ಅಲಂಕಾರದ ಸಂಪೂರ್ಣ ಜವಾಬ್ದಾರಿಯನ್ನು ಮಂಗಳೂರು ಮಹಾನಗರಪಾಲಿಕೆ ವಹಿಸಿಕೊಂಡಿರುವುದು ನಿಜಕ್ಕೂ ದಸರಾ ಉತ್ಸವಕ್ಕೆ ಮತ್ತೊಂದು ಹಿರಿಮೆಯಾಗಿದೆ.

ಇದಕ್ಕೆ ಕಾರಣಕರ್ತರಾದ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಮನಪಾ ಕಮಿಷನರ್ ಅಕ್ಷಯ್ ಶ್ರೀಧರ್ ಮತ್ತು ಜಿಲ್ಲೆಯ ಎಲ್ಲ ಶಾಸಕರು, ಎಲ್ಲ ಮನಪಾ ಕಾರ್ಪೊರೇಟರ್‌ಗಳಿಗೆ ಕೃತಜ್ಞತೆಗಳು ಎಂದು ಅಭಿವೃದ್ಧಿ ಸಮಿತಿಯ ಸದಸ್ಯ ಹರಿಕೃಷ್ಣ ತಿಳಿಸಿದರು.

Comments are closed.