ಕರಾವಳಿ

ಯಡಮೊಗೆ ಉದಯ್ ಗಾಣಿಗ ಕೊಲೆ ಪ್ರಕರಣದ ಆರೋಪಿ‌ ಬಾಲಚಂದ್ರ ಭಟ್ ಜಾಮೀನು‌ ಅರ್ಜಿ ತಿರಸ್ಕರಿಸಿದ ಸೆಷನ್ಸ್ ಕೋರ್ಟ್

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಸಾಮಾಜಿಕ ಕಾರ್ಯಕರ್ತ ಯಡಮೊಗೆ ಉದಯ್ ಗಾಣಿಗ ಕೊಲೆ ಪ್ರಕರಣದಲ್ಲಿ ಬಂಧಿತ ಐವರು ಆರೋಪಿಗಳ ಪೈಕಿ ತನ್ನ ವಕೀಲರ ಮೂಲಕ ಸೆಶನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್ ಜಾಮೀನು ಅರ್ಜಿ ವಜಾಗೊಳಿಸಿ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಎಂ. ಜೋಷಿ ಆದೇಶಿಸಿದ್ದಾರೆ.

(ಆರೋಪಿ ಬಾಲಚಂದ್ರ ಭಟ್)

ಕೊಲೆ ಸಂಚು ರೂಪಿಸಿದ ಆರೋಪದಡಿಯಲ್ಲಿ ಬಾಲಚಂದ್ರ ಭಟ್ ಬಂಧನವಾಗಿತ್ತು. ಈತ ತನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಆರೋಪಿಗೆ ಜಾಮೀನು ನೀಡಿದಲ್ಲಿ ಸಾಕ್ಷ್ಯ ನಾಶ ಸಂಭವವಿದೆ. ಮಾತ್ರವಲ್ಲ ಆರೋಪಿಗೆ ಮತ್ತು ಮೃತ ವ್ಯಕ್ತಿಗೆ ವಿಚಾರವೊಂದರಲ್ಲಿ‌ ಮನಸ್ತಾಪ ಇರುವುದು ಪ್ರಾಥಮಿಕ ತನಿಖಾ ಹಂತದಲ್ಲಿ ತಿಳಿದುಬಂದಿದೆ. ತನಿಖೆ ಇನ್ನು ನಡೆಯುತ್ತಿರುವ ಕಾರಣ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಶನ್‌ ಪರ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್‌ಚಂದ್ರ ಶೆಟ್ಟಿ ನ್ಯಾಯಾಲಯದಲ್ಲಿ ವಾದಿಸಿದ್ದರು.

(ಕೊಲೆಯಾದ ಉದಯ್, ಅಪಘಾತ ನಡೆದ ಸ್ಥಳ)

ಘಟನೆ ಹಿನ್ನೆಲೆ…
ಜೂ.5 ಶನಿವಾರ ರಾತ್ರಿ ವೇಳೆ ಯಡಮೊಗೆ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಹಾಗೂ ಆತನ‌ ತಂಡ ಉದಯ್ ಗಾಣಿಗ ಅವರ ಮೈಮೇಲೆ ಕಾರು ಹತ್ತಿಸಿ ಆ ಬಳಿಕ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಬಗ್ಗೆ ಉದಯ್ ಗಾಣಿಗ ಪತ್ನಿ‌ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಾಣೇಶ್ ಯಡಿಯಾಳನನ್ನು ಮಾರನೇ ದಿನ (ಜೂ.6ಭಾನುವಾರ) ನಸುಕಿನ ಜಾವ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಪ್ರಕರಣದ ಎರಡನೇ ಆರೋಪಿ ರಾಜೇಶ್ ಭಟ್ ಹಾಗೂ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್ ಬಂಧನವಾಗಿತ್ತು. ಮುಂದುವರಿದು ಆರೋಪಿ ಮನೋಜ್ ಕುಮಾರ್ ಹಾಗೂ ಯಡಮೊಗೆ ಪಂಚಾಯತ್ ಸದಸ್ಯ ಸದಾಶಿವ ನಾಯ್ಕ್ ಎನ್ನುವರನ್ನು ಬಂಧಿಸಲಾಗಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿಯಾಗಿರುವ ಯುವಕ ತಲೆಮರೆಸಿಕೊಂಡಿದ್ದಾನೆ.

(ವರದಿ- ಯೋಗೀಶ್ ಕುಂಭಾಸಿ)

 

 

 

Comments are closed.