ಕರಾವಳಿ

ಶೇಖರ್ ಪೂಜಾರಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ-ಆದರ್ಶಗಳನ್ನು ಬದುಕಲು ಒಪ್ಪಿಸಿಕೊಂಡಿದ್ದರು : ಸಂತೋಷ್ ಕೆ ಪೂಜಾರಿ

Pinterest LinkedIn Tumblr

ಸಂಘಟಕ ಶೇಖರ್ ಪೂಜಾರಿ ಬ್ರಹ್ಮಾವರ ಪ್ರಥಮ ಸಂಸ್ಮರಣೆ

ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ವಿಲೇಜ್ ನ ನಿವಾಸಿ ಬಿಲ್ಲವರ ಅಸೋಸಿಯೇಶನ್ ನ ಮಲಾಡ್ ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ, ವರಮಹಾಲಕ್ಷ್ಮಿ ಪೂಜಾ ಸಮಿತಿ ಸ್ಥಾಪಕ ಸದಸ್ಯ ಶೇಖರ್ ಪೂಜಾರಿ ಬ್ರಹ್ಮಾವರ ಕಳೆದ ವರ್ಷ ಜೂನ್ 7ರಂದು ಅಸ್ತಂಗತರಾಗಿ ದ್ದರು. ಜೂನ್ 7ರಂದು ಅವರ ಪ್ರಥಮ ವರ್ಷದ ಸಂಸ್ಮರಣ ಕಾರ್ಯಕ್ರಮವು ಬಿಲ್ಲವರ ಅಸೋಸಿಯೇಷನ್ ನ ಮಲಾಡ್ ಸ್ಥಳೀಯ ಕಚೇರಿಯಲ್ಲಿ ನಡೆಯಿತು.

ಶೇಖರ್ ಪೂಜಾರಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಮಾತನಾಡಿದ ಬಿಲ್ಲವರ ಅಸೋಸಿಯೇಷನ್ ನ ಮಲಾಡ್ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷ ಸಂತೋಷ್ ಪೂಜಾರಿ ಹಲವು ವರ್ಷಗಳಿಂದ ನನ್ನೊಂದಿಗೆ ಆತ್ಮೀಯ ನಂಟನ್ನು ಬೆಳೆಸಿಕೊಂಡವರು. ಎಲ್ಲಾ ಸಮಾಜದವರನ್ನು ಪ್ರೀತಿಸಿ ಅವರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ ಬಂದವರು. ನಮ್ಮ ಮಲಾಡ ನ ಬಿಲ್ಲವರ ಅಸೋಸಿಯೇಷನ್ ಕಚೇರಿಯ ಸೇವೆ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡವರು. ಅವರು ನಮ್ಮೊಂದಿಗಿಲ್ಲ ಎನ್ನುವುದು ಸಾಧ್ಯವಾಗುತ್ತಿಲ್ಲ. ಅವರು ನಮಗೆಲ್ಲ ಧೈರ್ಯ ತುಂಬುತ್ತಿರುವ ಮಾತುಗಳು ಶಿಸ್ತಿನ ಕೆಲಸಗಳು ಸದಾ ನಮ್ಮ ಮನಸ್ಸಿನಲ್ಲಿ ನೆನಪಾಗಿ ಉಳಿದಿದೆ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವವನ್ನು ಆದರ್ಶಗಳನ್ನು ಬದುಕಿನಲ್ಲಿ ರೂಪಿಸಿಕೊಂಡವರು ಎಂದು ನುಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಲಾಡ್ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಎನ್ ಶೆಟ್ಟಿಶೇಖರ್ ಪೂಜಾರಿಯವರು, ಮಲಾಡ್ ಪರಿಸರದಲ್ಲಿ ತುಂಬಾ ಚಿರಪರಿಚಿತವಾದ ಹೆಸರು. ಪರೋಪಕಾರದ ಸ್ವಭಾವವನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಸ್ನೇಹ ಜೀವಿ. ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದು,ಪ್ರತಿಯೊಂದು ಜನಪರ ಕಾರ್ಯಗಳನ್ನು ಅನುಷ್ಠಾನ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸರಳ ಸಜ್ಜನಿಕೆಯ ವ್ಯಕ್ತಿ.

ಅದರಲ್ಲೂ ನಮ್ಮ ಮಲಾಡ್ ವರಮಹಾಲಕ್ಷ್ಮಿ ಪೂಜಾ ಸಮಿತಿಯಲ್ಲಿ,ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಅದ್ಧೂರಿಯಿಂದ ಜರುಗಿದ ವರಮಹಾಲಕ್ಷ್ಮಿ ಪೂಜಾ ಸಮಿತಿಯ ದಶ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಗೊಳಿಸುವಲ್ಲಿ ಹಗಲಿರುಳೆನ್ನದೆ ದುಡಿದವರು. ಅವರು ನಮ್ಮೊಂದಿಗಿದ್ದ ನೆನಪುಗಳು ಮಾಡಿದ ಸೇವಾ ಕಾರ್ಯಗಳು ಮಲಾಡ್ ನ ತುಳು-ಕನ್ನಡಿಗರು ಸದಾ ಸ್ಮರಿಸುವಂತಹ ಕಾರ್ಯ ಮಾಡಿದ್ದಾರೆ ಎಂದರು.

ರವಿ ಸ್ವಾಮೀಜಿಯವರು ಮಾತನಾಡುತ್ತಾ ಬದುಕಿನಲ್ಲಿ ತನ್ನದೇ ಸಿದ್ದಾಂತವನ್ನು ಮೈಗೂಡಿಸಿಕೊಂಡು, ಅದರಂತೆ ನಡೆದು ಬಂದವರು”ಸಾವಿರ ಅನುಕೂಲಗಳನ್ನು ದಿಕ್ಕಾರಿಸಿಯಾದರು,ಒಂದು ಆದರ್ಶವನ್ನು ಕಾಪಾಡಿಕೊ”ಅನ್ನುವ ಮಾತಿಗೆ ಪ್ರತಿರೂಪದಂತೆ ಇದ್ದ ಅಪರೂಪದ ವ್ಯಕ್ತಿ .ಕಷ್ಟದ ಕುಟುಂಬಗಳಿಗೆ ಸದಾ ಸ್ಪಂದಿಸುತ್ತಾ ದೇವರ ಸೇವೆಯನ್ನು ಮಾಡುತ್ತಾ ಬದುಕು ಕಟ್ಟಿಕೊಂಡವರ ಗಿದ್ದರು ಅವರು ಮಾಡಿದ ಸೇವೆಗಳು ಅಜರಾಮರ ಎಂದರು.

ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕೋಶಧಿಕಾರಿ ಜಗನ್ನಾಥ್ ಮೆಂಡನ್ ಸಾಲಿಗ್ರಾಮ ರವರು ಶೇಖರ್ ಪೂಜಾರಿಯವರ ಸೇವಾಕಾರ್ಯಗಳನ್ನು ಸ್ಮರಿಸುತ್ತ ನಮ್ಮ ಸಮಿತಿಗೆ ಹತ್ತು ವರ್ಷಗಳ ಸಂಭ್ರಮದಲ್ಲಿ ಅವರು ನೀಡಿದ ಕೊಡುಗೆ ಮಾಡಿದ ಕೆಲಸ ಕಾರ್ಯಗಳು ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿ ಉಳಿದಿದೆ . ಅವರೊಬ್ಬ ಕರ್ಮಯೋಗಿಯಾಗಿ ಸೇವೆ ಮಾಡಿದವರು. ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಅವರ ಮಲಾಡ್ ಪರಿಸರದ ಬಹಳಷ್ಟು ಕುಟುಂಬಗಳಿಗೆ ದಿನಬಳಕೆಯ ಸಾಮಗ್ರಿಗಳ ಕಿಟ್ ನೀಡಿದ್ದಾರೆ ಎಂದು ನುಡಿದರು.

ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಮಿತಿಯ ಅಧ್ಯಕ್ಷ ಉಮೇಶ್ ಅಂಚನ್ ಮಾರ್ನಾಡ್ ರವರು ಶೇಖರ್ ಪೂಜಾರಿ ಬಗ್ಗೆ ತಿಳಿಸಿದರು ಹಾಗೂ ಅವರು ನಡೆಸಿದ ಸೇವಾಕಾರ್ಯಗಳನ್ನು ನೆನಪಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷ ಜಗನ್ನಾಥ ಎನ್ ಶೆಟ್ಟಿ . ಕೋಶಧಿಕಾರಿ ಜಗನ್ನಾಥ್ ಮೆಂಡನ್ ಸಾಲಿಗ್ರಾಮ, ಸಂಚಾಲಕ ದಿನೇಶ್ ಕುಲಾಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್ ವಾಗ್ಲೆ, ಬಿಲ್ಲವರ ಅಸೋಶಿಯೇಶನ್ ಮಲಾಡ್ ಕಚೇರಿಯ , ಉಪ ಕಾರ್ಯಾಧ್ಯಕ್ಷ ಕೃಷ್ಣ ಪೂಜಾರಿ, ಕೋಶಾಧಿಕಾರಿ ಹರೀಶ್ ಪೂಜಾರಿ, ಜೊತೆ ಕಾರ್ಯದರ್ಶಿ ಅನಿಲ್ ಪೂಜಾರಿ ಹಾಗೂ ಗೋಪಾಲ್ ಪೂಜಾರಿ, ಶೇಖರ್ ಪೂಜಾರಿ( ಎಸ್ ಬಿ ಐ ), ವಿಶ್ವನಾಥ್ ಪೂಜಾರಿ, ಶೀಲಾ ಮಹಾಬಲ ಪೂಜಾರಿ, ತನುಜ ಜಿ ಪೂಜಾರಿ, ದೀಕ್ಷಿತ್ ಎಂ ಪೂಜಾರಿ, ನಿತ್ಯಾನಂದ ಎಂ ಕೋಟ್ಯಾನ್, ಮತ್ತು ಲಕ್ಷ್ಮಣರಾವ್, ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ. ಧರ್ಮದರ್ಶಿ ರವಿ ಸ್ವಾಮೀಜಿ, ಅಧ್ಯಕ್ಷ ಉಮೇಶ್ ಅಂಚನ್ ಮಾರ್ನಾಡ್ ಉಪಸ್ಥರಿದ್ದು ಶೇಖರ್ ಪೂಜಾರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಶೇಖರ ಪೂಜಾರಿ ಬ್ರಹ್ಮಾವರ ಇವರ ಬಗ್ಗೆ…

ಕರಾವಳಿ ಜಿಲ್ಲೆಯ ಬ್ರಹ್ಮಾವರದಿಂದ ಮುಂಬೈ ಮಹಾನಗರಕ್ಕೆ ಬಂದು ಕ್ಯಾಂಟೀನ್ ಉದ್ಯೋಗಿಯಾಗಿ ತದ ನಂತರ ಅದೇ ಕ್ಷೇತ್ರದಲ್ಲಿ ಉದ್ಯಮಿಯಾಗಿ ಹಗಲಿರುಳು ದಣಿವರಿಯದ ಕಾಯಕ ಯೋಗಿಯಾಗಿ ಯಶಸ್ಸನ್ನು ಉದ್ಯಮಿಯಾಗಿ ‘ *ಅನ್ನದಾತ* ‘ ಅನ್ನಿಸಿಕೊಂಡ ಶ್ರಮಜೀವಿ.

ಯಾವ ಪ್ರಚಾರದ ಹಂಗಿಲ್ಲದೆ, ತಮ್ಮನ್ನು ತಾವು ನಿರ್ಗತಿಕರ ಸೇವೆಯಲ್ಲಿ ನಿರಂತರ ಭಗವಂತನ ನಿತ್ಯಪೂಜೆ ಎಂಬಂತೆ ತೊಡಗಿಸಿಕೊಂಡಿರುವ ಶೇಖರ್ ಪೂಜಾರಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಉಪ್ಪಿನ ಕೋಟೆಯ ‘ ದೇವಿಪ್ರಸಾದ್ ನಿಲಯ’ ದಲ್ಲಿ ಜನಿಸಿದರು. ತಂದೆ ಕುಷ್ಟ ಪೂಜಾರಿ, ತಾಯಿ ಅಚ್ಚು ಪೂಜಾರ್ತಿ, ಬಡತನದಲ್ಲಿ ಹುಟ್ಟಿ ಬಂದ ಇವರು ಎಲ್ಲರಂತೆ ಜೀವನೋಪಯಕ್ಕಾಗಿ ಈ ಕರ್ಮ ಭೂಮಿಗೆ ಬರಬೇಕಾಯಿತು.

ಶಾರದಾ ವಿಜಯ ಸ್ಕೂಲ್ ಗ್ರಾಂಟ್ ರೋಡ್ ಇಲ್ಲಿ ರಾತ್ರಿ ಶಾಲೆಯ ವಿದ್ಯಾರ್ಥಿ ಆಗಿ ದಿನದಲ್ಲಿ ಹೋಟೆಲು ಅಂಗಡಿಗಳಲ್ಲಿ ದಿನಗೂಲಿ ಕಾರ್ಮಿಕನಾಗಿ, ಕನಸಿಗೆ ನನಸಿನ ಪಾಯ ಹಾಕತೊಡಗಿದರು. ಕಾಲಕ್ರಮೇಣ ತನ್ನದೇ ಸ್ವಂತ “ಶ್ರೀ ಸಾಯಿಬಾಬಾ ಕೇಟರಿಂಗ್ ” ಸ್ಥಾಪಿಸಿ ಠಾಕೂರ್ ಕಾಲೇಜ್ ಕಾಂದಿವಲಿಯಲ್ಲಿ ಕ್ಯಾಂಟೀನ್ ನನ್ನು ಯಶಸ್ವಿಯಾಗಿ ಮುನ್ನಡೆಸಿದರು.

ಸೋಲೆಂಬುವುದು ಇವರ ಬಳಿ ಸುಳಿಯಲಿಲ್ಲ. ನಿರಂತ ಪ್ರಯತ್ನ ಮಾಡುವವರು ಶಿಖರವನ್ನು ತಲುಪುತ್ತಾರೆ ” ಎಂಬ ಮಾತಿದೆ.. ಅದರಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಸಮಾಜಮುಖಿಯಾಗಿ ಕೆಲಸ ಮಾಡತೊಡಗಿದರು. *ಶ್ರೀ ದುರ್ಗಾಪಮೇಶ್ವರೀ ದೇವಸ್ಥಾನ “ತಾನಾಜಿ ನಗರದ ಮಲಾಡ್ ಅಧ್ಯಕ್ಷರಾಗಿ ಭಕ್ತಿಯಿಂದ ದೇವಿಯ ಸೇವೆ ಮಾಡಿದ್ದರು. ಬಿಲ್ಲವ ಅಸೋಸಿಯೇಶನ್ ನ ಮಲಾಡ್ ಸ್ಥಳೀಯ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಸಂಘ ದ ಎಲ್ಲ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾರೆ.

ಕಳೆದ ಸಲ ವಿಜೃಂಭಣೆಯಿಂದ ಸಮಾಪ್ತಗೊಂಡ ಮಲಾಡ್ ಶ್ರೀವರಮಹಾಲಕ್ಷ್ಮಿ ಪೂಜಾ ಸಮಿತಿಯ ದಶ ಮಹೋತ್ಸವ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷರಾಗಿ ಉತ್ಸವದ ಅಭೂತ ಪೂರ್ವ ಯಶಸ್ಸಿಗೆ ಕಾರಣರಾದವರಲ್ಲಿ ಇವರು ಸಹ ಒಬ್ಬರು. ಮಲಾಡ್ ಕಾಂದಿವಲಿ ಪರಿಸರದಲ್ಲಿ ” ಚಿಣ್ಣರ ಬಿಂಬ*”ಸಂಸ್ಥೆಯನ್ನು ಮೊಟ್ಟ ಮೊದಲು ಪರಿಚಯಿಸಿದ ಹೆಗ್ಗಳಿಕೆ ಇವರದ್ದು.

ಇದಲ್ಲದೆ ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ ಶ್ರೀಯುತರು..!ಶೇಖರ ಪೂಜಾರಿಯವರು ಬದುಕಿನಲ್ಲಿ ಸಂಕಟವನ್ನು, ಸಂಕಷ್ಟವನ್ನು ಹಾಗೂ ಉನ್ನತಿಯನ್ನು ಸಮಾನವಾಗಿ ಕಂಡುಂಡು ಬೆಳೆದವರು. ಬೇರೆಯವರ ಕಷ್ಟವನ್ನು ಬೇಗ ಅರ್ಥ ಮಾಡಿಕೊಳ್ಳುವವರು.

ಕೊರೋನಾ ಎನ್ನುವ ಮಹಾಮಾರಿ ಮುಂಬೈ ಮಹಾನಗರವನ್ನು ಮಲಗಿಸಿತು. ಜನಜೀವನ ಸಂಪೂರ್ಣ ತತ್ತರಿಸಿ ಹೋಯಿತು. ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಡಕುಟುಂಬ ವರ್ಗಕ್ಕೆ ಎದುರಾಯಿತು. ಆಗ ಇಂತಹವರ ನೆರವಿಗೆ ಅನೇಕ ಹೃದಯವಂತ ಮನಸ್ಸುಗಳು ಮುಂದಾದವು. ಅದರಲ್ಲಿ ಶೇಖರ್ ಪೂಜಾರಿಯವರು ಸಹ ಒಬ್ಬರು ಹಸಿದವರಿಗೆ ಆಹಾರ ನೀಡುವ ಮಾತೃ ಹೃದಯಿ ಯಾದರು.

ಕ್ಯಾಂಟೀನ್ ನಲ್ಲಿ ದುಡಿಯುವ ಶೇಖರ್ ಪೂಜಾರಿಯವರ ಕೈಗಳು ಅದೆಷ್ಟೋ ಹಸಿದವರ ಪಾಲಿಗೆ ಅಭಯ ಹಸ್ತವಾದವು. ಮನುಷ್ಯತ್ವ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ನಯಾ ಪೈಸೆಯ ಆಸೆ ಆಮಿಷ ಇಲ್ಲದೆ ನೂರಾರು ಬಡವರ ಪಾಲಿಗೆ ಕಾಮಧೇನು ದರು.” *ದಯೆಯೇ ಧರ್ಮದ ಮೂಲ* ” ಅನ್ನುದನ್ನು ತೋರಿಸಿಕೊಟ್ಟರು.!

ವರದಿ : ಈಶ್ವರ ಎಂ. ಐಲ್ /   ಚಿತ್ರ : ದಿನೇಶ್ ಕುಲಾಲ್

Comments are closed.