ಕರಾವಳಿ

BREAKING NEWS : ಲಾಕ್‌ಡೌನ್ ಮತ್ತೆ ಒಂದು ವಾರ ವಿಸ್ತರಣೆ – ಸಿಎಂ ಘೋಷಣೆ

Pinterest LinkedIn Tumblr

ಬೆಂಗಳೂರು, ಜೂನ್.03 : ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಅನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಲಾಕ್‌ಡೌನ್ ವಿಸ್ತರಣೆ ಕುರಿತು ಸಿಎಂ ಯಡಿಯೂರಪ್ಪ ಅವರು ಇಂದು ಸಂಜೆ ಮಹತ್ವದ ತೀರ್ಮಾನ ಪ್ರಕಟಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಸೋಂಕನ್ನು ಸಂಪೂರ್ಣ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಕ್ತವೆಂದು ಪರಿಗಣಿಸಿ ಈ ಹಿಂದೆ ಜೂನ್ 7ರವರೆಗೆ ಜಾರಿಗೊಳಿಸಲಾಗಿತ್ತು. ಪ್ರಸ್ತುತ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದರೂ ಕೂಡ, ವೈರಾಣು ಹರಡುವಿಕೆ ಮುಂದುವರೆದಿದೆ.

ಆರೋಗ್ಯ ಪರಿಣಿತರ ಸಲಹೆಯ ಮೇರೆಗೆ ಮುಂದುವರೆಸೋದು ಸೂಕ್ತ ಎಂದು ಪರಿಗಣಿಸಿ 14-06-2021ರವರೆಗೆ ಒಂದು ವಾರ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (ಕಡತ ಚಿತ್ರ)

ಜೂನ್ 7ರವರೆಗೆ ಜಾರಿಯಲ್ಲಿರುವಂತ ಲಾಕ್ ಡೌನ್, ಮತ್ತೆ ವಿಸ್ತರಣೆ ಬಗ್ಗೆ ಬಹುತೇಕ ಸಚಿವರು, ತಜ್ಞರು ಸಿಎಂ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಸಿಎಂ ಯಡಿಯೂರಪ್ಪ ಅವರು ಮಹತ್ವದ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ಬಳಿಕ ಸುದ್ಧಿಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು, ಜೂನ್.7ರ ನಂತರ ಮತ್ತೆ 1 ವಾರ ಲಾಕ್ ಡೌನ್ ವಿಸ್ತರಣೆ ಮಾಡುವ ಕುರಿತು ನಿರ್ಧರಿಸಲಾಗಿದೆ ಎಂದಿದ್ದಾರೆ.

ಇದೇ ವೇಳೆ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವಂತ ಇತರೆ ಕೆಲ ವರ್ಗದವರಿಗೂ ಕೊರೊನಾ 2ನೇ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ರೂ. 500 ಕೋಟಿ ವಿಶೇಷ ಎರಡನೇ ಪ್ಯಾಕೇಜ್ ಇಂದು ಘೋಷಣೆ ಮಾಡಲಾಗುತ್ತಿದೆ. 7-06-2021ರಿಂದ ಶೇ.30ರಷ್ಟು ಕೋವಿಡ್ ವರ್ತನೆ ಪಾಲಿಸಿ ತೆರೆಯಲು ಅನುಮತಿಸಲಾಗಿದೆ.

ಕೋವಿಡ್ ಪ್ಯಾಕೇಜ್ -2 : ಪವರ್ ಲೂಮ್ ನೇಕಾರರಿಗೆ ಇಬ್ಬರು ಕೆಲಸಗಾರರಿಗೆ ಮೀರದಂತೆ ಮೂರು ಸಾವಿರ ಪರಿಹಾರ ನೀಡಲಾಗುತ್ತದೆ.

ಚಲನ ಚಿತ್ರ, ದೂರದರ್ಶನ, ಮಾಧ್ಯಮಕ್ಕೆ 3 ಸಾವಿರ ನೀಡಲಾಗುತ್ತದೆ. ಮೀನುಗಾರರಿಗೆ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೊಂದಾಯಿಸಿದಂತ ಮೀನುಗಾರರಿಗೆ ತಲಾ 3 ಸಾವಿರ ನೀಡಲಾಗುತ್ತದೆ.  ದೋಣಿ ಮಾಲೀಕರಿಗೆ ಮೂರು ಸಾವಿರ ಕೂಡ ನೀಡಲಾಗುತ್ತದೆ ಎಂದು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮುಜುರಾಯಿ ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳಿಗೆ ಸಿ ವರ್ಗದ ದೇವಸ್ಥಾನದಲ್ಲಿ ಕೆಲಸ ಮಾಡುವಂತ ಸಿಬ್ಬಂದಿಗಳಿಗೆ ತಲಾ ಮೂರು ಸಾವಿರ ನೀಡಲು ನಿರ್ಧಾರ ಮಾಡಲಾಗಿದೆ. ಮಸೀದಿಯಲ್ಲಿನ ಪೇಜಿಸಿಮೋಗಳಿಗೂ ತಲಾ ಮೂರು ಸಾವಿರ ಕೊಡಲು ನಿರ್ಧಾರ ಮಾಡಲಾಗಿದೆ.

ಆಶಾ ಕಾರ್ಯಕರ್ತರು ಕೂಡ ಕೊರೋನಾ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಮೂರು ಸಾವಿರ ನೀಡಲಾಗುತ್ತದೆ. ಇದರಿಂದ 42574 ಕಾರ್ಯಕರ್ತೆಯರಿಗೆ ಸಹಾಯ ಆಗಲಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ ನೀಡಲಾಗುತ್ತದೆ.

ಎಲ್ಲಾ ಶಾಲೆಗಳು ಮುಚ್ಚಿದ್ದರೂ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಅನುಧಾನ ರಹಿತ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಿಗೆ 5 ಸಾವಿರ ಪರಿಹಾರ. ನ್ಯಾಯವಾದಿಗಳ ಕಲ್ಯಾಣ ನಿಧಿಗೆ 5 ಕೋಟಿ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ತುರ್ತು ಸುದ್ಧಿಗೋಷ್ಠಿ ಕರೆದ ಸಿಎಂ : ಲಾಕ್‌ಡೌನ್ ಮತ್ತೆ ವಿಸ್ತರಣೆ! ಇಂದು ಸಂಜೆ ನಿರ್ಧಾರ

Comments are closed.