ಕರಾವಳಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಫಲಾನುಭವಿಗಳಿಗೆ 15 ಲಕ್ಷ ರೂ ಆರ್ಥಿಕ ನೆರವು ವಿತರಣೆ

Pinterest LinkedIn Tumblr

ಮಂಗಳೂರು : ಬಂಟ ಸಮಾಜದಲ್ಲಿ ಅಸಹಾಯಕರಾಗಿರುವ ಸಮಾಜದವರನ್ನು ಗುರುತಿಸಿ ಆರ್ಥಿಕ ಸಹಾಯ, ವಸತಿ ನಿರ್ಮಾಣ, ವೈದ್ಯಕೀಯ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹೆಣ್ಣು ಮಕ್ಕಳ ವಿವಾಹ ನೆರವು ಇತ್ಯಾದಿ ಸಹಾಯವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರ ನೀಡುತ್ತಾ ಬಂದಿದೆ ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ನಗರದ ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಅಮೃತೋತ್ಸವ ಕಟ್ಟಡದಲ್ಲಿ ಸುಮಾರು 15 ಲಕ್ಷ ರೂ ವರೆಗಿನ ಆರ್ಥಿಕ ನೆರವನ್ನು ಸಮಾಜ ಕಲ್ಯಾಣ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.

ಕೊರೊನಾದಂತಹ ಸಂಕಷ್ಟದ ಸಮಯದಲ್ಲೂ ದಾನಿಗಳಿಂದ ನೆರವನ್ನು ಪಡೆದು ಸಮಾಜ ಮುಖಿ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗಿದೆ.

ಮುಖ್ಯವಾಗಿ ಕರಾವಳಿ ಜಿಲ್ಲೆಯಾದ್ಯಂತ ಇರುವ ಬಡವರನ್ನು ಸರ್ವೇ ಮೂಲಕ ಗುರುತಿಸಲಾಗುತ್ತಿದೆ. ಮುಳಿ ಹುಲ್ಲಿನ ಮನೆ, ಪ್ಲಾಸ್ಟಿಕ್‌ಗಳನ್ನು ಹೊದಿಕೆಯನ್ನಾಗಿಸಿ ಗುಡಿಸಲಲ್ಲಿ ವಾಸಿಸುತ್ತಿರುವವರನ್ನು ಗುರುತಿಸಿ ಸಮಾಜ ಬಾಂಧವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಾಡುತ್ತಿದೆ. ಸಮಾಜದ ಕಣ್ಣೊರೆಸುವ ಪ್ರಮಾಣಿಕ ಪ್ರಯತ್ನಕ್ಕೆ ದಾನಿಗಳು ಕೈ ಜೋಡಿಸಿ ನೆರವು ನೀಡುತ್ತಿದ್ದಾರೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮದ ಕುರಿತು ಮುಖ್ಯ ಅತಿಥಿಗಳಾಗಿದ್ದ ಒಕ್ಕೂಟದ ಪೋಷಕ ಸದಸ್ಯ ಹಾಗೂ ಸಾಯಿ ರಾಧಾ ಸಮೂಹ ಸಂಸ್ಥೆಗಳ ಅಧ್ಯಕ್ಷ ರವಿ ಶೆಟ್ಟಿ ಮತ್ತು ಉದ್ಯಮಿ ಗಜಾನನ ಪೂಂಜ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಮಾರಂಭದಲ್ಲಿ ಅವರನ್ನು ಗೌರವಿಸಲಾಯಿತು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಬಳಿಕ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಒಕ್ಕೂಟಕ್ಕೊಂದು ಹೊಸ ಕಾಯಕಲ್ಪ ನೀಡಿದರು. ಈ ವರೆಗೆ ನಾಲ್ಕು ಕೋಟಿ ರೂಪಾಯಿಗೂ ಮಿಕ್ಕಿದ ಆರ್ಥಿಕ ಸಹಾಯವನ್ನು ಫಲಾನುಭವಿಗಳಿಗೆ ವಿತರಿಸುವ ಕೆಲಸ ಮಾಡಿದ್ದಾರೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ 24 ಮಂದಿ ವೈದ್ಯಕೀಯಕ್ಕೆ 13 ಮಂದಿ ಮನೆ ನಿರ್ಮಾಣಕ್ಕೆ 17 ಮಂದಿ ಮದುವೆಗೆ ಫಲಾನುಭವಿಗಳು ನೆರವು ಪಡೆದರು.

ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್ ಕಾರ್ಯಕ್ರಮ ನಿರ್ವಹಿಸಿದರು. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು.

ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ಜೀವನ್ ಶೆಟ್ಟಿ ಮುಲ್ಕಿ, ದೇವಪ್ಪ ಶೇಖ, ಲೋಕಯ ಶೆಟ್ಟಿ ಮುಂಚೂರು, ಪ್ರಕಾಶ್ ಶೆಟ್ಟಿ ಪಡುಬಿದ್ರೆ, ಸುದರ್ಶನ್ ಶೆಟ್ಟಿ ಪೆರ್ಮಂಕಿ, ಪ್ರದೀಪ್ ರೈ, ಈಶ್ವರ್ ಶೆಟ್ಟಿ ಚಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

Comments are closed.