ಕರಾವಳಿ

ಪಬ್ ಜಿ ಆಟದಲ್ಲಿ ಸೋಲು – ಬಾಲಕನ ಕೊಲೆಗೆ ಕಾರಣ : ಬಂಧಿತನಿಂದ ಆಘಾತಕಾರಿ ಮಾಹಿತಿ ಬಹಿರಂಗ

Pinterest LinkedIn Tumblr

ಮಂಗಳೂರು/ ಉಳ್ಳಾಲ : ಉಳ್ಳಾಲ ತಲಪಾಡಿ ಸಮೀಪದ ಕೆ.ಸಿ.ರೋಡ್ ನಲ್ಲಿ ರವಿವಾರ ಪತ್ತೆಯಾದ ಬಾಲಕನ ಮೃತದೇಹದ ತನಿಖೆ ಮುಂದುವರಿದಿದ್ದು, 17 ವರ್ಷದ ಯುವಕ ಈ ಬಾಲಕನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಕೆ.ಸಿ. ರೋಡ್‌ ಬಳಿ 12 ವರ್ಷದ ಬಾಲಕನ ಶವವು ಕೊಲೆಯಾದ ಸ್ಥಿತಿಯಲ್ಲಿ ನಿನ್ನೆ ಮುಂಜಾನೆ ಮೈದಾನದಲ್ಲಿ ಪತ್ತೆಯಾಗಿತ್ತು. ಮೃತ ಬಾಲಕನನ್ನು ಕೆ.ಸಿ ರೋಡ್ ನಿವಾಸಿ ಹನೀಫ್ ಎಂಬವರ ಪುತ್ರ ಆಕೀಫ್ (12) ಎಂದು ಗುರುತಿಸಲಾಗಿದ್ದು, ಈತ ಫನಾಹ್ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ.

ಶನಿವಾರ ರಾತ್ರಿ 9ರ ವೇಳೆಗೆ ಮನೆಯಿಂದ ತೆರಳಿದ್ದ ಆಕಿಫ್ ಮತ್ತೆ ಹಿಂತಿರುಗಿ ಬಂದಿರಲಿಲ್ಲ. ಮನೆಯವರು ರಾತ್ರಿಯೇ ಆಕಿಫ್ ಗಾಗಿ ಶೋಧ ನಡೆಸುತ್ತಿದ್ದರು. ಅನುಮಾನದ ಮೇರೆಗೆ ಆಕಿಫ್ ಜೊತೆಗೆ ಪಬ್ ಜಿ ಆಡುತ್ತಿದ್ದ ಸ್ಥಳೀಯ ಯುವಕ, ಉತ್ತರ ಪ್ರದೇಶ ಮೂಲದ ದೀಪಕ್ ಎಂಬಾತನ ಮನೆಗೆ ತೆರಳಿ ವಿಚಾರಿಸಿದ್ದಾರೆ. ಈ ವೇಳೆ ಆತ ಎಲ್ಲರನ್ನೂ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದ. ಆಕಿಫ್ ನಾಪತ್ತೆ ಕುರಿತು ರಾತ್ರಿಯೇ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಇದೀಗ 17 ವರ್ಷದ ದೀಪಕ್ ನ ಬಂಧನದೊಂದಿಗೆ ಬಾಲಕನ ಸಾವಿಗೆ ಪಬ್ ಜಿ ಆಟದಲ್ಲಿ ದ್ವೇಷ, ಕಲಹವೇ ಕಾರಣ ಎನ್ನುವ ಆಘಾತಕಾರಿ ಅಂಶ ಹೊರಬಿದ್ದಿದೆ. ಪಬ್ ಜಿ ಆನ್ಲೈನ್ ಆಟದಲ್ಲಿ ತನ್ನನ್ನು ನಿರಂತರ ಸೋಲಿಸುತ್ತಿದ್ದ ಎಂಬ ದ್ವೇಷಕ್ಕೆ ಓರ್ವ ಅಮಾಯಕ ಬಾಲಕನನ್ನು ಹತ್ಯೆಗೈಯಲಾಗಿದೆ.

ಘಟನೆ ನಡೆದ ಬಳಿಕ ಸ್ವತಃ ಪೊಲೀಸ್ ಕಮಿಷನರ್ ಸ್ಥಳಕ್ಕೆ ತೆರಳಿ, ವಿಚಾರಣೆ ನಡೆಸಿದ್ದು, ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ದೀಪಕ್ ಆನ್ ಲೈನ್ ನಲ್ಲಿ ಆಕಿಫ್ ಜೊತೆ ಪಬ್ ಜಿ ಆಟ ಆಡುತ್ತಿದ್ದು, ಆಟದಲ್ಲಿ ಆಕಿಫ್ ದೀಪಕ್ ನನ್ನು ನಿರಂತರವಾಗಿ ಸೋಲಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರದಲ್ಲಿ ದೀಪಕ್ ಗೆ ಆಕಿಫ್ ನೊಂದಿಗೆ ದ್ವೇಷ ಬೆಳೆದಿದ್ದು, ನೀನು ಬೇರೆ ಯಾರದೋ ಕೈಯಲ್ಲಿ ಮೊಬೈಲ್ ನೀಡಿ ನನ್ನನ್ನು ಸೋಲಿಸುತ್ತಿದ್ದೀಯಾ.. ಹಾಗಾಗಿ ನೀನು ನನ್ನ ಜೊತೆ ನೇರವಾಗಿ ಆಟಕ್ಕೆ ಬಾ ಎಂದು ನಿನ್ನೆ ರಾತ್ರಿ 9 ಗಂಟೆಗೆ ಆಕಿಫ್ ನನ್ನು ಕರೆದಿದ್ದ.

ಸವಾಲು ಸ್ವೀಕರಿಸಿದ್ದ ಆಕಿಫ್, ದೀಪಕ್ ಜೊತೆ ಸಮೀಪದ ಫಲಾಹ್ ಸ್ಕೂಲ್ ಬಳಿಗೆ ತೆರಳಿದ್ದ. ಅಲ್ಲಿ ಇಬ್ಬರೂ ಆಟವಾಡಿದ್ದು, ಈ ವೇಳೆ ಆಕಿಫ್ ಸೋತಿದ್ದ ಎಂದು ದೀಪಕ್ ವಿವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಕಿಫ್ ಆಟದಲ್ಲಿ ಸೋತಿದ್ದನ್ನು ದೀಪಕ್ ಹೀಯಾಳಿಸಿದ್ದು, ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು ತಳ್ಳಾಟ ನಡೆದಿದೆ. ಆರೋಪಿ ದೀಪಕ್ ಬಾಲಕನನ್ನು ತಳ್ಳಿ ಕಲ್ಲು ಎಸೆದಿದ್ದು, ಇದರಿಂದ ತಲೆ, ಮುಖಕ್ಕೆ ಗಂಭೀರ ಗಾಯವಾಗಿ ಆಕಿಫ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.

ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದನ್ನು ಗಮನಿಸಿ, ಕಾಂಪೌಂಡ್ ಗೋಡೆಯ ಬದಿಗೆ ಒಯ್ದು ಮಲಗಿಸಿ ಏನೂ ಆಗಿಲ್ಲವೆಂಬಂತೆ ಮನೆಗೆ ಹಿಂತಿರುಗಿದ್ದ ಎಂದು ದೀಪಕ್ ನನ್ನು ತನಿಖೆ ನಡೆಸಿದ ಪೊಲೀಸರು ಮಾಹಿತಿ ನೀಡಿದ್ದಾರೆ.

Comments are closed.