ಕರಾವಳಿ

ಪೌಷ್ಟಿಕಾಂಶದ ಕೊರತೆಯಿಂದಾಗುವ ಪರಿಣಾಮಗಳ ಬಗ್ಗೆ ಗರ್ಭಿಣಿ ಸ್ತ್ರೀಯರು ಅರಿವು ಹೊಂದಬೇಕು : ವೈದ್ಯಾಧಿಕಾರಿ ಡಾ.ದುರ್ಗಾ ಪ್ರಸಾದ್

Pinterest LinkedIn Tumblr

ಮಂಗಳೂರು : ಪೌಷ್ಟಿಕಾಂಶದ ಕೊರತೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಗರ್ಭಿಣಿ ಸ್ತ್ರೀಯರು ಅರಿತುಕೊಂಡು ಎಚ್ಚೆತ್ತುಕೊಳ್ಳಬೇಕು. ಪೋಷಕಾಂಶ ಭರಿತ ಆಹಾರ ಸೇವಿಸುವುದರ ಮೂಲಕ ಸಮಸ್ಯೆಯನ್ನು ತಡೆಯಬಹುದು ಎಂದು ಸಂಪನ್ಮೂಲ ಅಧಿಕಾರಿ ಜಿಲ್ಲಾ ಸರ್ಕಾರಿ ಲೇಡಿಘೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್ ಹೇಳಿದರು.

ಅವರು ನಗರದ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ತ್ರೀಶಕ್ತಿ ಹಾಗೂ ಮಹಿಳಾ ಒಕ್ಕೂಟ ದ.ಕ ಇವರ ಸಹಯೋಗದಲ್ಲಿ ನಡೆದ ಪೋಷನ್ ಪಕ್ವಾಡ-2021 ರ ಫೊಷಣ ಅಭಿಯಾನದ ಪಂಚಸೂತ್ರಗಳ ಕುರಿತು ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡುವ ಹಾಗೂ ಗರ್ಭಿಣಿ ಹಾಗೂ ಬಾಣಂತಿಯರಲ್ಲಿ ಕಂಡುಬರುವ ರಕ್ತಹೀನತೆ ಹೋಗಲಾಡಿಸಿ ತಾಯಂದಿರ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.

ಮಗುವಿನ ಜನನದ ಮೊದಲೇ ಪ್ರಾಣ ಹೋಗಿರುತ್ತದೆ ಎಂದಾದರೆ ಅದಕ್ಕೆ ಮುಖ್ಯ ಕಾರಣ ತಾಯಿಯ ಅಪೌಷ್ಟಿಕತೆ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಅರಿವಿಲ್ಲದಿರುವುದು ಎಂದ ಅವರು ಪೌಷ್ಠಿಕಾಂಶವುಳ್ಳ ಆಹಾರದ ಸೇವನೆಯನ್ನು ಪ್ರತೀ ತಾಯಿಯು ಗರ್ಭಾವಸ್ಥೆಯಲ್ಲಿ ಮಾಡುವುದರಿಂದ ಮಗುವಿಗೆ ಉತ್ತಮ ಆರೋಗ್ಯ ದೊರೆಯುವುದರೊಂದಿಗೆ ಮಗುವಿನ ಪ್ರಾಣ ಉಳಿಸಬಹುದು ಎಂದರು.

ಗರ್ಭಿಣಿಯರಿಗೆ 3 ತಿಂಗಳ ಮೊದಲೇ ಫೋಲಿಕ್ ಆಸಿಡ್ ಮಾತ್ರೆಗಳನ್ನು ನೀಡುವಂತೆ ಅಂಗನವಾಡಿ ಕಾರ್ಯಕರ್ತರಿಗೆ ತಿಳಿಸಿದರು. ಇದರಿಂದ ಒಂದು ಮಗುವಿನ ಉತ್ತಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.

ಅಪೌಷ್ಟಿಕತೆಯಿಂದಾಗಿ ನವಮಾಸ ಗರ್ಭದಲ್ಲೇ ಇದ್ದು ಹುಟ್ಟಬೇಕಾದ ಮಗು ಇತ್ತೀಚಿನ ದಿನಗಳಲ್ಲಿ ನವಮಾಸಕ್ಕಿಂತ ಮೊದಲೇ ಹುಟ್ಟುವ ಸಂಖ್ಯೆ ಅಧಿಕವಾಗುತ್ತಿದೆ. ಅಲ್ಲದೇ ಪೌಷ್ಟಿಕಾಂಶದ ಕೊರತೆಯನ್ನು ಅನುಭವಿಸುವ ಮಕ್ಕಳು ಗಂಭೀರ ಸಮಸ್ಯೆಗಳನ್ನು ಎದುರಿಸುವ ಮೂಲಕ ಅಸುನೀಗುವರು ಎಂದರು.

ಭ್ರೂಣಾವಸ್ಥೆಯಲ್ಲಿರುವ ಮಗುವಿನ ಬೆಳವಣಿಗೆ ಸರಿಯಾದ ರೀತಿಯಲ್ಲಿ ಆಗದಿದ್ದರೆ ತಾಯಿಯ ಥೈರಾಯಿಡ್ ಹಾರ್ಮೋನಿನ ಕೊರತೆ ಕೂಡ ಕಾರಣ ಎಂದ ಅವರು ಈ ಸಮಸ್ಯೆ ಕುರಿತಂತೆ ವೈಜ್ಞಾನಿಕ ಸಲಹೆಯನ್ನು ಪ್ರತಿ ತಾಯಂದಿರು ಪಡೆಯಬೇಕು ಹಾಗೂ ಪೋಷಣ ಅಭಿಯಾನದ ಪಂಚ ಸೂತ್ರಗಳಾದ ಗುಣಮಟ್ಟ , ರಕ್ತಹೀನತೆ, ಅತಿಸಾರ, ನೈರ್ಮಲ್ಯ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಗರ್ಭಿಣಿಯರು ಹೆಚ್ಚು ಗಮನಹರಿಸಬೇಕು ಎಂದರು.

ಮಗು ಮತ್ತು ತಾಯಿ ಮಾನಸಿಕವಾಗಿ ದೈಹಿಕವಾಗಿ ಸದೃಢವಾಗಿರಬೇಕೆಂದರೆ ಪೌಷ್ಠಿಕ ಆಹಾರ ಬಹಳ ಮುಖ್ಯ ಈ ನಿಟ್ಟಿನಲ್ಲಿ ಸರ್ಕಾರ ತಾಯಿ ಹಾಗೂ ಮಗುವಿನ ಪೌಷ್ಟಿಕತೆ ಹೆಚ್ಚಿಸಲು ಅಂಗನವಾಡಿಗಳ ಮೂಲಕ ದೊರಕುವ ಪೌಷ್ಟಿಕ ಆಹಾರವನ್ನು ಪಡೆದು ಸೇವಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಉಂಟಾಗುವ ರಕ್ತಹೀನತೆಯ ತೊಂದರೆಯನ್ನು ತಡೆಯಲು ತಜ್ಞ ವೈದ್ಯರಿಂದ ಸೂಕ್ತ ಸಲಹೆಯನ್ನು ಪಡೆಯುವುದರ ಜೊತೆಗೆ ಪ್ರತಿಯೊಬ್ಬ ಮಹಿಳೆಯ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚುವಂತೆ ನೋಡಿಕೊಳ್ಳಬೇಕು ಎಂದರು.

ತಾಯಿ ಮತ್ತು ನವಜಾತ ಶಿಶುವಿನ ಮರಣ ತಡೆಯಲು ಎಲ್ಲಾ ಅಂಗನವಾಡಿ ಕಾರ್ಯಕರ್ತರು ಸಹಕಾರ ನೀಡುವುದರೊಂದಿಗೆ ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡಲು ಜಾಗೃತಿ ಹಾಗೂ ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷ್ಮೀ, ಜಿಲ್ಲಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಹಾಗೂ ಜಿಲ್ಲಾ ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಚಂಚಲ ತೇಜೋಮಯಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಶ್ಯಾಮಲ, ಅಂಗನವಾಡಿ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತರು, ಸ್ರೀ ಶಕ್ತಿ ಸಂಘದ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.