ಮಂಗಳೂರು / ಉಳ್ಳಾಲ, ಮಾರ್ಚ್.10: ಫೋಟೋ ಶೂಟ್ಗಾಗಿ ಇಂದು ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಯುವತಿಯ ಶವ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಉಳ್ಳಾಲ ಸಮೀಪದ ಕುಂಪಲ ಆಶ್ರಯಕಾಲನಿ ನಿವಾಸಿ ಚಿತ್ತಪ್ರಸಾದ್ ಎಂಬವರ ಪುತ್ರಿ ಪ್ರೇಕ್ಷಾ(17) ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು, ಇಂದು ಮನೆಗೆ ಬಂದಿದ್ದ ಮೂವರ ಮೇಲೆ ಅನುಮಾನ ವ್ಯಕ್ತವಾಗಿದೆ.
ನಗರದ ನಂತೂರು ಬಳಿಯ ನಿಟ್ಟೆ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಈಕೆ ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಇಂದು ರಜೆ ಪಡೆದುಕೊಂಡು ಮನೆಯಲ್ಲೇ ಉಳಿದಿದ್ದಳು.
ತಾಯಿ ಅಂಗನವಾಡಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಮನೆಗೆ ಮೂವರು ಬಂದು ಹೋಗಿದ್ದರು ಎನ್ನಲಾಗಿದೆ. ಮಧ್ಯಾಹ್ನ ವೇಳೆ ಊಟಕ್ಕೆಂದು ಮನೆಗೆ ಬಂದ ಸಂದರ್ಭ ಕೋಣೆಯೊಳಗೆ ಪ್ರೇಕ್ಷಾಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ಇದೊಂದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರೇಕ್ಷಾ ಮಾಡೆಲಿಂಗ್ ನಲ್ಲಿ ಆಸಕ್ತಿ ಹೊಂದಿದ್ದು ಇಂದು ಫೋಟೋ ಶೂಟ್ ಗಾಗಿ ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸಿದ್ದಳು ಎನ್ನಲಾಗಿದೆ. ಆ ಕಾರಣಕ್ಕಾಗಿಯೇ ಕಾಲೇಜಿಗೆ ರಜೆ ಪಡೆದುಕೊಂಡಿದ್ದಳು ಎನ್ನಲಾಗಿದೆ . ಆದರೆ ಆಕೆಯ ಶವ ಪತ್ತೆಯಾಗಿರುವುದರಿಂದ ಮನೆಗೆ ಬಂದಿದ್ದ ಮೂವರ ಮೇಲೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ನೀಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
Comments are closed.