ಕರಾವಳಿ

ನಾನು ದಿವಾಳಿಯಾಗಿಲ್ಲ, ಭಾರತದ ಆಸ್ತಿ ಸುರಕ್ಷಿತವಾಗಿದೆ; ‘ಐ ವಿಲ್ ಕಮ್ ಬ್ಯಾಕ್ ಅಗೈನ್’- ಉದ್ಯಮಿ‌ ಬಿ.ಆರ್. ಶೆಟ್ಟಿ

Pinterest LinkedIn Tumblr

ಉಡುಪಿ: ನನ್ನ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಸೇರಿದ ಒಬ್ಬನನ್ನು ಸಿ.ಎಫ್.ಓ ಆಗಿ ಮಾಡಿದೆ ಆದರೆ ಅವನೇ ನನ್ನ ಬೆನ್ನಿಗೆ ಚೂರಿ ಹಾಕಿದ. ನನಗೆ ತಿಳಿಯದ ಹಾಗೆ ಬೆನ್ನ ಹಿಂದೆ ಆರ್ಥಿಕ ವಂಚನೆ ಮಾಡಿದ್ದಾರೆ. ಆರೋಪ ಸಾಭೀತಾಗದ ಹಿನ್ನೆಲೆ ಆ ವ್ಯಕ್ತಿಯನ್ನು ಆರೋಪಿ ಎಂದು ನಾನು ಹೇಳಲಾರೆ. ಪ್ರಕರಣ ನ್ಯಾಯಾಲಯದಲ್ಲಿದೆ ಹಾಗಾಗಿ ಹೆಚ್ಚೇನು ಹೇಳಲಾರೆ. ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ. ಪಟ್ಟಭದ್ರ ಹಿತಾಸಕ್ತಿಗಳು ಸೇರಿ ನನಗೆ ವಂಚನೆ ಮಾಡಿದ್ದು ಜನಸೇವೆಯೇ ಜನಾರ್ದನ ಸೇವೆ ಎಂದು ನಂಬಿದ ನಾನು ಜನರ ಆಶಿರ್ವಾದದಿಂದ ಈ ಎಲ್ಲಾ ಸಮಸ್ಯೆಗಳಿಂದ ಹೊರ ಬರುತ್ತೇನೆ ಎಂದು ಅನಿವಾಸಿ ಭಾರತೀಯ, ಉದ್ಯಮಿ ಬಿ.ಆರ್. ಶೆಟ್ಟಿ ಉಡುಪಿಯಲ್ಲಿ ಸೋಮವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಒಂದಾನೊಂದು ಕಾಲದಲ್ಲಿ ಟ್ರಂಪ್ ಅವರಿಗೆ ಕ್ರೆಡಿಟ್ ಕಾರ್ಡ್ ಕೂಡ ಕೊಡಲು ಅಮೆರಿಕದ ಬ್ಯಾಂಕುಗಳು ಹಿಂದೆ ಮುಂದೆ ನೋಡುತ್ತಿದ್ದವು. ಅಂತಹ ದಿವಾಳಿ ಆಗಿದ್ದ ಮನುಷ್ಯ ಬಳಿಕ ಅಮೆರಿಕದ ಅಧ್ಯಕ್ಷ ಆಗಲಿಲ್ಲವೇ?. ನಾನು ಯಾರಿಗೂ ವಂಚನೆ ಮಾಡಿಲ್ಲ ಎಂಬ ಆತ್ಮವಿಶ್ವಾಸವಿದೆ‌. ನಾನು ಉಡುಪಿಯಲ್ಲಿದ್ದಾಗ ನನ್ನ ಕಿಸೆಯಲ್ಲಿ ಒಂದು ರೂಪಾಯಿ ದುಡ್ಡು ಇರುತ್ತಿರಲಿಲ್ಲ. ಅಂದು ಸಾಲಮಾಡಿ ಬೈಕಿಗೆ ಪೆಟ್ರೋಲ್ ಹಾಕಿ ಓಡಾಡುತ್ತಿದ್ದೆ. ಇಲ್ಲಿ ಯಾರಿಂದ ಸಾಲ ಪಡೆದಿದ್ದೇನೆ ಎಲ್ಲವನ್ನೂ ವಾಪಾಸು ಮಾಡಿದ್ದೇನೆ. ಅಲ್ಲದೆ ನಾನು ಕಷ್ಟಪಟ್ಟು ದುಡಿದ ಹಣವನ್ನು ಮರು ಗಳಿಸುತ್ತೇನೆ. ಐ ವಿಲ್ ಕಮ್ ಬ್ಯಾಕ್ ಅಗೈನ್ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾಜ ಸೇವೆ ಮುಂದುವರಿಯುತ್ತದೆ….
ನನ್ನ ಟ್ರಸ್ಟ್ ಮೂಲಕ ನಡೆಯುತ್ತಿರುವ ಎಲ್ಲಾ ಉಚಿತ ಸಮಾಜ ಸೇವೆಗಳನ್ನು ಮುಂದುವರಿಸುತ್ತೇನೆ.ನನ್ನ ಆಸ್ತಿಯ ಅರ್ಧಭಾಗವನ್ನು ಪಾರ್ಕಿನ್ಸನ್ ಅಮ್ನೇಶಿಯಾ ಮೊದಲಾದ ಕಾಯಿಲೆಗಳ ಬಗ್ಗೆ ಅಧ್ಯಯನ ಮಾಡುವ ಮಿಲಿಂದಾ ಗೇಟ್ ಫೌಂಡೇಶನ್ ಗೆ ದಾನ ಮಾಡಿದ್ದೇನೆ. ಸಮಯ ಸರಿಯಿಲ್ಲ. ಗ್ರಹಚಾರಕ್ಕೆ ಏನು ಮಾಡಲು ಸಾಧ್ಯವಿಲ್ಲ ಎಂದರು.

ಅಬುದಾಬಿಯಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೆ ನನ್ನನ್ನು ಅಧ್ಯಕ್ಷನಾಗಿ ಮಾಡಿದ್ದಾರೆ. ಅಲ್ಲಿಯ ದೊರೆಯೇ ಆ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಅತಿ ದೊಡ್ಡದಾದ ದೇವಸ್ಥಾನವನ್ನು ಅಲ್ಲಿ ಕಟ್ಟಲಿದ್ದೇವೆ. ಈಗಾಗಲೇ ವಾರಣಾಸಿಯಲ್ಲಿ ಆಸ್ಪತ್ರೆ ಮಾಡಲು 5 ಎಕರೆಯಷ್ಟು ಜಾಗ ನೀಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಅಲ್ಲಿ ಶಿಲಾನ್ಯಾಸವನ್ನು ನಡೆಸಿದ್ದೇವೆ. ಅಲ್ಲದೆ ಅಯೋಧ್ಯೆಯಲ್ಲೂ ಆಸ್ಪತ್ರೆ ಮಾಡುವ ಚಿಂತನೆ ಇದೆ ಎಂದರು.

ನಾನು ಆರ್ಥಿಕವಾಗಿ ಸದೃಢವಾಗಿರುವೆ…
ಬಿಆರ್ ಶೆಟ್ಟಿ ಸಾಮ್ರಾಜ್ಯ ಮುಳುಗಿಹೋಯಿತು ಎಂಬ ಸುದ್ದಿಗಳನ್ನು ನೋಡಿ ಬೇಸತ್ತು ಹೋಗಿದ್ದೇನೆ. ದೇವರ ದಯೆಯಿಂದ ನನ್ನ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ. ನೀವು ಯಾರು ಊಹಿಸಿರದಷ್ಟು ಬಿ ಆರ್ ಶೆಟ್ಟಿ ಆರ್ಥಿಕವಾಗಿ ಸಕ್ಷಮವಾಗಿದ್ದಾರೆ. ಹೊರದೇಶದಲ್ಲಿರುವ ನನ್ನ ಸಾಮ್ರಾಜ್ಯ ಹೋಗಿರಬಹುದು. ಆದರೆ ಭಾರತದ ಆಸ್ತಿ ಸುರಕ್ಷಿತವಾಗಿದೆ. ಯಾರಾದರೂ ಮೇಲೆ ಹೋಗುತ್ತಾರೆ ಎನ್ನುವಾಗ ಮತ್ಸರ ಪಡುವ ಜನರು ಇರುವುದು ಸಹಜ. ನನ್ನ ಮೂರು ಹೆಣ್ಣು ಓರ್ವ ಗಂಡು ಮಗ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ನನ್ನ ಆಸ್ತಿ ಕೇವಲ 36 ಸಾವಿರ ಕೋಟಿ ಆಗಿರಲಿಲ್ಲ. 2012ರಲ್ಲಿ ನನಗೆ 12.8 ಬಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪಿಟಲ್
ಇತ್ತು. 2017ರಿಂದ ನಾನು ನ್ಯೂ ಮೆಡಿಕಲ್ ಸಂಸ್ಥೆಯಿಂದ ಹೊರ ಬಂದೆ. 2019ರಲ್ಲಿ ನನ್ನ ಎಲ್ಲಾ ಸಾಮ್ರಾಜ್ಯ ಕುಸಿದು ಹೋಯಿತು.ಲಕ್ಷ್ಮೀ ಚಂಚಲೆ ಏನೂ ಮಾಡಲು ಸಾಧ್ಯವಿಲ್ಲ ಸರಸ್ವತಿ ಮಾತ್ರ ಸ್ಥಿರವಾಗಿ ಇರುತ್ತಾಳೆ ಎಂದರು.

ಯಾರಿಂದ ‌ನೆರವು ಯಾಚಿಸಿಲ್ಲ…
ಪ್ರಧಾನಿ ಮೋದಿ ನನಗೆ ಆತ್ಮೀಯರು ನಿಜ. ಆದರೆ ಅವರಿಂದ ನೆರವು ಯಾಚಿಸಿಲ್ಲ. ನಾನು ಪ್ರಧಾನಿ ಅವರ ಜೊತೆ ಮಾತನಾಡಲು ಹೋದರೆ ರಾಹುಲ್ ಗಾಂಧಿಗೆ ಮಾತನಾಡಲು ವಿಷಯ ಸಿಗುತ್ತದೆ. ನೀರವ್ ಮೋದಿ ವಿಜಯ್ ಮಲ್ಯ ಆಯ್ತು ಈಗ ಬಿಆರ್ ಶೆಟ್ಟಿಯೂ ದಿವಾಳಿ ಎಂದು ಠೀಕಿಸುತ್ತಾರೆ. ಅದಕ್ಕಾಗಿಯೇ ಯಾವ ಬಿಜೆಪಿಯ ಮುಖಂಡರನ್ನು ನಾನು ಮಾತನಾಡಿಸಲು ಹೋಗಿಲ್ಲ.

ಮೋದಿ ಏನು ಅಂದುಕೊಳ್ಳುತ್ತಾರೆ…?
ನಾನು ಯಾವತ್ತೋ ಆನಂದಬಾಷ್ಪ ಸುರಿಸಿದ ಚಿತ್ರವನ್ನು ಮಾಧ್ಯಮಗಳು ಕಣ್ಣೀರು ಎಂದು ಬಿಂಬಿಸಿದವು. ಅಬುದಾಬಿಯಲ್ಲಿ ಅಲ್ಲಿಯ ದೊರೆ ಅರಮನೆ ಕಟ್ಟಿದಾಗ ಪ್ರಧಾನಿ ನರೇಂದ್ರ ಮೋದಿ ವಿಶೇಷ ಅತಿಥಿಯಾಗಿ ಬಂದಿದ್ದರು. ಆಗ ಮೋದಿ ಸಮ್ಮುಖದಲ್ಲಿ ಅಲ್ಲಿನ ಉದ್ಯಮಿಗಳ ಸಭೆ ನಡೆದಿತ್ತು. ಆಗ ನಾನು ನನ್ನನ್ನು ಶೆಟ್ಟಿ ಎಂದು ಅವರಿಗೆ ಪರಿಚಯಿಸಿಕೊಂಡೆ. ಆಗ ಅವರಿಗೆ ನಿಮ್ಮ 5 ಟ್ರಿಲ್ಲಿಯನ್ ಎಕಾನಮಿ ಗೆ ನನ್ನ 5 ಮಿಲಿಯನ್ ಡಾಲರ್ ಕೊಡುಗೆ ಇದೆ ಎಂದು ಹೇಳಿದ್ದು ಆಗ ಅವರು ಶೆಟ್ಟಿ ಪ್ರತಿಯೊಂದು ಮಾತಿನ ಮೇಲೆ ನನಗೆ ಭರವಸೆ ಇದೆ ಎಂದಿದ್ದರು. ಈಗ ಮಾಧ್ಯಮಗಳು ಮಾಡುತ್ತಿರುವ ವರದಿಯನ್ನು ಕಂಡರೆ ಅವರು ಏನೆಂದುಕೊಂಡಾರು?. ನಾನು ಅಳುವ ಚಿತ್ರವನ್ನು ಅವರು ನೋಡಿದರೆ ಅವರಿಗೆ ನನ್ನ ಮೇಲೆ ಭರವಸೆ ಉಳಿಯಲ್ಲ. ಶೆಟ್ಟಿಯ ಸಾಮ್ರಾಜ್ಯ ಉರುಳಿಬಿದ್ದಿದೆ ಎಂದು ಅವರು ಕೂಡ ಪತ್ರಿಕೆಗಳಲ್ಲಿ ಓದಿರುತ್ತಾರೆ. ನನ್ನ ಮುಂದೆ ಎಂಬತ್ತನಾಲ್ಕು ಬ್ಯಾಂಕುಗಳು ಸಾಲ ಕೊಡಲು ಕ್ಯೂ ನಿಂತಿದ್ದವು. ಈಗ ಏನೇನೋ ಮಾತನಾಡುತ್ತಿದ್ದಾರೆ. ಆದರೂ ನಾನು ಧೃತಿಗೆಡುವುದಿಲ್ಲ ಮತ್ತೆ ಎದ್ದು ಬರುತ್ತೇನೆ ಎಂದು ಆತ್ಮ ವಿಶ್ವಾಸದಿಂದ ನುಡಿದರು.

(ವರದಿ- ಯೋಗೀಶ್ ಕುಂಭಾಸಿ)

 

Comments are closed.