ಕರಾವಳಿ

ತನ್ನ ಮನೆಯೆದುರೆ ಯುವಕನೊಬ್ಬನ ತಲೆ ಒಡೆದವನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆ ಸಾಲಿಗ್ರಾಮ ಸಮೀಪದ ಪಾರಂಪಳ್ಳಿ ಪಡುಕೆರೆಯ ತನ್ನದೆ ಊರಿನವನಾದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಇದೀಗಾ ಕೊಲೆ ಯತ್ನ ಪ್ರಕರಣವಾಗಿ ದಾಖಲಾಗಿದ್ದು ಆರೋಪಿ ಯುವಕ ಪರಾರಿಯಾಗಿದ್ದಾನೆ.

ಪಾರಂಪಳ್ಳಿ ಪಡುಕೆರೆ ನಿವಾಸಿ ಶಂಭು ಪೂಜಾರಿ ಎನ್ನುವಾತನ ಮಗ ಗಗನ್ ಪೂಜಾರಿ (25) ಆರೋಪಿ. ಇದೇ ಗ್ರಾಮದ ಅಕ್ಷಯ್ ಮೊಗವೀರ (23) ಎಂಬಾತನ ಮೇಲೆ ಗಗನ್ ಕೊಲೆ ಯತ್ನ ನಡೆಸಿದ ಪರಿಣಾಮ ಅಕ್ಷಯ್ ಮಾರಣಾಂತಿಕ ಹಲ್ಲೆಗೊಳಗಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದಾನೆ.

ಊಟ ಮುಗಿಸಿ ಸ್ನೇಹಿತ ಚೇತನ್ ಜೊತೆ ತೆರಳುತ್ತಿದ್ದಾಗ ಮೊದಲೇ ನಡೆದ ಮೊಬೈಲ್ ಮೂಲಕದ ಜಗಳಕ್ಕೆ ಸಂಬಂಧಿಸಿದಂತೆ ಮನೆ ಎದುರು ಅಡ್ಡಗಟ್ಟಿದ ಗಗನ್ ಏಕಾಏಕಿ ಅಕ್ಷಯ್ ಮೇಲೆ ಹಲ್ಲೆ ನಡೆಸಿ, ಅವ್ಯಾಚವಾಗಿ ನಿಂದಿಸಿದ್ದ. ಅಷ್ಟೆ ಅಲ್ಲದೆ ಹಿಂದಿನಿಂದ ಬಂದು ಅಕ್ಷಯ್ ತಲೆ ಹಿಂಭಾಗಕ್ಕೆ ಕಬ್ಬಿಣದ ರಾಡ್ ಮೂಲಕ ಹಲ್ಲೆ ನಡೆಸಿದ್ದ. ಗಂಭೀರ ಗಾಯಗೊಂಡ ಅಕ್ಷಯನನ್ನು ಮೊದಲಿಗೆ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು‌.

ಮೊದಲಿಗೆ ಆರೋಪಿ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಮತ್ತೋರ್ವ ವ್ಯಕ್ತಿಗೆ ತೀವೃ ತರವಾದ ಹಲ್ಲೆ ನಡೆಸುವ ಪ್ರಕರಣದಡಿ (ಐಪಿಸಿ ಕಲಂ 326) ಸಹಿತ ಇನ್ನು ಮೂರು ಪ್ರಕರಣ ದಾಖಲಾಗಿತ್ತು.‌ ಜೀವನ್ಮರಣ ಸ್ಥಿತಿಯಲ್ಲಿರುವ ಅಕ್ಷಯ್ ವೈದ್ಯಕೀಯ ವರದಿಯ ಹಿನ್ನೆಲೆ ಆರೋಪಿ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಆರೋಪಿ ಗಗನ್ ಪರಾರಿಯಾಗಿದ್ದು ಕೋಟ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ‌ ಚುರುಕುಗೊಳಿಸಿದ್ದಲ್ಲದೆ ಆತನ ಬಂಧನಕ್ಕೆ ಬಲೆಬೀಸಿದ್ದಾರೆ‌. ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣೆ ಸಂಬಂಧಿತ ರಾಜಕೀಯ ಕಲಹ ಘಟನೆಗೆ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿದೆಯಾದರೂ ಪೊಲೀಸರ ನಿಷ್ಪಕ್ಷಪಾತ ತನಿಖೆಯಿಂದ ಪ್ರಕರಣದ ನೈಜಾಂಶ ಹೊರಬೀಳಬೇಕಿದೆ.

Comments are closed.