ಕರಾವಳಿ

ಅನೈತಿಕ ಚಟುವಟಿಕೆ ಆರೋಪ: ಪ್ರೇಮಿಗಳ ದಿನ ಆಚರಿಸದಂತೆ ಎಚ್ಚರಿಕೆ ನೀಡಿದ ಬಜರಂಗದಳ

Pinterest LinkedIn Tumblr

ಮಂಗಳೂರು, ಫೆಬ್ರವರಿ,10: ಹಿಂದೂ ಸಂಸ್ಕೃತಿ, ಆಚರಣೆಗಳ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಹಾಗು ಅನೈತಿಕ ಚಟುವಟಿಕೆಗಳಿಗೆ ಪ್ರಚೋದಿಸುವಂತಹ ಪ್ರೇಮಿಗಳ ದಿನಾಚರಣೆಯನ್ನು ಬಜರಂಗದಳ ವಿರೋಧಿಸುತ್ತದೆ. ಅದೇ ರೀತಿ ಪ್ರೇಮಿಗಳ ದಿನಾಚರಣೆಯ ಹೆಸರಿನಲ್ಲಿ ಅಸಭ್ಯ ವರ್ತನೆ ತೋರಿದರೆ ಬಜರಂಗದಳ ಸಹಿಸುವುದಿಲ್ಲ ಎಂದು ಬಜರಂಗದಳ ಜಿಲ್ಲಾ ಸಂಚಾಲಕರಾದ ಪುನೀತ್ ಅತ್ತಾವರ ಎಚ್ಚರಿಕೆ ನೀಡಿದ್ದಾರೆ.

ಭಾರತ ದೇಶವು ಪುಣ್ಯ ಭೂಮಿ ವೈಶಿಷ್ಟ್ಯವಾದ ಸಂಸ್ಕೃತಿ ಸಂಸ್ಕಾರವನ್ನು ನಮ್ಮ ದೇಶ ಹೊಂದಿದೆ ಅಲ್ಲದೆ ನಮ್ಮ ಸಂಸ್ಕೃತಿ ಆಚರಣೆಗಳಿಗೆ ಅದರದೇ ಆದ ಮಹತ್ವವಿದ್ದು ಶತಮಾನಗಳ ಇತಿಹಾಸವನ್ನು ಹೊಂದಿದೆ. ಆದಾಗಿಯೂ ಭಾರತೀಯ ಸಂಸ್ಕೃತಿಗೆ ಸಡ್ಡು ಹೊಡೆಯುತ್ತಾ ಪಾಶ್ಚಿಮಾತ್ಯ ಸಂಸ್ಕೃತಿಗಳು ದಾಳಿ ಮಾಡುತ್ತಿವೆ. ಯುವ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿವೆ.

ನಮ್ಮ ಅಮೂಲ್ಯವಾದ ಸಂಸ್ಕೃತಿ ಆಚರಣೆ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಇದಕ್ಕೆ ಸ್ಪಷ್ಟ ಉದಾಹರಣೆ ಪ್ರೇಮಿಗಳ ದಿನ ಹಾಗಾಗಿ ಬಜರಂಗದಳ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುತ್ತದೆ ಮತ್ತು ಪ್ರೇಮಿಗಳ ದಿನಾಚರಣೆಗೆ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು ಇದನ್ನು ಬಜರಂಗದಳ ತೀವ್ರವಾಗಿ ವಿರೋಧಿಸುತ್ತದೆ.

ಭಾರತೀಯ ಪರಂಪರೆಯಲ್ಲಿ ಪ್ರೇಮಿಗಳ ದಿನಾಚರಣೆ ಸರಿಯಲ್ಲ ಆದುದರಿಂದ ಪ್ರೇಮಿಗಳ ದಿನಾಚರಣೆ ಆಚರಿಸಬಾರದು. ನಗರದ ಎಲ್ಲಾ ಹೂ ಅಂಗಡಿ ಮತ್ತು ಗಿಫ್ಟ್ ಸೆಂಟರ್ ಗಳು ಪ್ರೇಮಿಗಳ ದಿನಾಚರಣೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು ಮತ್ತು ಈ ಆಚರಣೆಗೆ ಬೆಂಬಲ ಸೂಚಿಸಬಾರದು ಎಂದು ವಿನಂತಿಸುತ್ತೇವೆ ಎಂದು ಪುನೀತ್ ಅತ್ತಾವರ ತಿಳಿಸಿದ್ದಾರೆ.

Comments are closed.