ಕರಾವಳಿ

ಮನೆ ಕೆಲಸಕ್ಕೆಂದು ಬಂದು ಲವ್..ಸೆಕ್ಸ್…ದೋಖಾ- ಅಪರಾಧಿಗೆ 10 ವರ್ಷ ಕಠಿಣ ಸಜೆ, 60 ಸಾವಿರ ದಂಡ

Pinterest LinkedIn Tumblr

ಕುಂದಾಪುರ: 2005ನೇ ಇಸವಿಯಲ್ಲಿ ಹೊಸ ಮನೆಯ ಗಾರೆ ಕೆಲಸಕ್ಕೆಂದು ಬಂದು ಆ ಮನೆಯ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ಬಳಿಕ ಮದುವೆಗೆ ನಿರಾಕರಿಸಿದ ಆರೋಪಿ ದೋಷಿಯೆಂದು ಕುಂದಾಪುರದಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನರಹರಿ ಪ್ರಭಾಕರ್ ಮರಾಠೆ ಗುರುವಾರದಂದು ತೀರ್ಪು ನೀಡಿದ್ದು ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.

ಆರ್ಡಿ ಸಮೀಪದ ಕೊಂಜಾಡಿ ನಿವಾಸಿ ಪ್ರದೀಪ್ ನಾಯ್ಕ್ (36) ಅಪರಾಧಿಯಾಗಿದ್ದಾನೆ. ಅತ್ಯಾಚಾರ ಪ್ರಕರಣ ಐಪಿಸಿ ಕಲಂ 376 ಗೆ 10 ವರ್ಷ ಕಠಿಣ ಜೈಲು ಮತ್ತು 50 ಸಾವಿರ ದಂಡ, ಮನೆಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ 448 ಹಾಗೂ ಮೋಸ (ಐಪಿಸಿ ಕಲಂ 417) ಕ್ಕೆ ತಲಾ 1 ವರ್ಷ ಸಜೆ ಮತ್ತು ತಲಾ 5 ಸಾವಿರ ದಂಡ ವಿಧಿಸಲಾಗಿದೆ. ಏಕಕಾಲಕ್ಕೆ ಶಿಕ್ಷೆ ಅನುಭವಿಸಬೇಕಿದೆ. ದಂಡದ ಒಟ್ಟು 60 ಸಾವಿರ ಹಣದಲ್ಲಿ 50 ಸಾವಿರ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ‌.

ಘಟನೆ ಹಿನ್ನೆಲೆ….
ದೂರುದಾರ ಸಂತ್ರಸ್ತ ಯುವತಿ ಮನೆ ಕೆಲಸಕ್ಕೆಂದು ಬಂದಿದ್ದ ಪ್ರದೀಪ ಯುವತಿಯೊಂದಿಗೆ ಸ್ನೇಹ ಸಂಪಾದಿಸಿದ್ದ‌.ಯುವತಿ ಮನೆಯಲ್ಲಿ ಒಬ್ಬಳೇ ಇದ್ದು ಆಕೆಯ ತಂದೆ ತಾಯಿ ಕೂಲಿ ಕೆಲಸಕ್ಕೆಂದು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಪ್ರದೀಪ ಆಕೆಯೊಂದಿಗೆ ಸಲುಗೆಯಿಂದ ಮಾತನಾಡಿದ್ದು ಪ್ರೇಮ ನಿವೇಧನೆ ಮಾಡಿದ್ದ. ಬಳಿಕ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆ ಇಚ್ಚೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ನಡೆಸಿದ್ದ. ಅಲ್ಲದೆ ಪ್ರದೀಪ ಆಕೆಯನ್ನು ತನ್ನ ಬೈಕಿನಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ ಹಾಗೂ ಮುರ್ಡೇಶ್ವರಕ್ಕೂ ಮೊದಲಾದೆಡೆ ಸುತ್ತಾಡಿಸಿದ್ದ. ಇದಾದ ನಂತರ ಯುವತಿ ಮದುವೆಯ ವಿಚಾರ ಪ್ರಸ್ತಾಪ ಮಾಡಿದಾಗ ತಂಗಿಯ ಮದುವೆಯ ನಂತರ ಮದುವೆಯಾಗುವುದಾಗಿ ನಂಬಿಸಿದ್ದು, ನಂತರ ವಂಚಿಸಿದ್ದ. ಕೊನೆಗೂ ಈತ ಮೋಸಗಾರ ಎಂದು ತಿಳಿದಾಗ 2015ರಲ್ಲಿ ಯುವತಿ ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು‌ನೀಡಿದ್ದು ಆತನ ವಿರುದ್ಧ ಪ್ರಕರಣ ದಾಖಲಾಗಿ ಬಂಧನವೂ ಆಗಿತ್ತು. ಅಂದಿನ ಕುಂದಾಪುರ ಸಿಪಿಐ ದಿವಾಕರ ಪಿಎಂ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತ ಯುವತಿ ಹಾಗೂ ಆಕೆ ತಂದೆ-ತಾಯಿ ಸೇರಿ ಒಟ್ಟು 9 ಮಂದಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು. ಸಂತ್ರಸ್ತೆ ನುಡಿದ ಸಾಕ್ಷ್ಯ ಹಾಗೂ ವೈದ್ಯಕೀಯ ವರದಿ ಸೇರಿದಂತೆ ಸುಧೀರ್ಘ ವಾದ ವಿವಾದ ಆಲಿಸಿದ ನ್ಯಾಯಾಲಯವು ಅಪರಾಧಿ ಎಂದು ತೀರ್ಪು ನೀಡಿದ್ದು ಶಿಕ್ಷೆ ಪ್ರಕಟಿಸಿದೆ.

ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದಿಸಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.