ಮಂಗಳೂರು, ಜನವರಿ.12: ಪಣಂಬೂರು ರಸಗೊಬ್ಬರ ತಯಾರಿಕಾ ಕಂಪನಿಯು ಸಾಮಾಜಿಕ ಬದ್ದತಾ ಕಾರ್ಯದಡಿ ತನ್ನ ಅನುದಾನವನ್ನು ಮಾನವೀಯ ನೆಲೆಯಲ್ಲಿ ಜನರ ಬಾಳಿನಲ್ಲಿ ಧೈರ್ಯ ತುಂಬುವಂತಹ ಕೆಲಸ ಮಾಡುತ್ತಿದ್ದು ದೇವರು ಮೆಚ್ಚುವ ಕೆಲಸವಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.
ಪಣಂಬೂರು ಎಂಸಿಎಫ್ನಲ್ಲಿ ಮಂಗಳವಾರ ಕೃತಕ ಅಂಗಾಂಗ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕರು ಹಲವಾರು ಅಭಿವೃದ್ಧಿ ಕೆಲಸಗಳಿಗಾಗಿ ಬೇಡಿಕೆ ಸಲ್ಲಿಸುತ್ತಲೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಕ್ಷೇತ್ರ ಪ್ರವಾಸದ ವೇಳೆ ಅಥವಾ ಕಚೇರಿಗೆ ಬಂದು ದಿವ್ಯಾಂಗರು ಕೃತಕ ಅಂಗಾಗ ನೀಡುವಂತೆ ಮನವಿ ಸಲ್ಲಿಸುತ್ತಿದ್ದಾಗ ಗುಣಮಟ್ಟದ ಸಲಕರಣೆ ವಿತರಿಸಲು ಎಂಸಿಎಫ್ಗೆ ಮನವಿ ಮಾಡಿದ ಮೇರೆಗೆ ಕಳೆದ ಮೂರು ವರ್ಷಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ನೀಡುತ್ತಿದ್ದಾರೆ.
ಇದರ ಜತೆಗೆ ಶಿಕ್ಷಣ, ಆರೋಗ್ಯ, ಉಚಿತ ವೈದ್ಯಕೀಯ ಶಿಬಿರಗಳನ್ನು ಮಾಡುತ್ತಾ ಬರುತ್ತಿದ್ದಾರೆ.ಕಂಪನಿಗಳು ಲಾಭಂಶದ ಒಂದು ಅಂಶವನ್ನು ಇಂತಹ ಕಾರ್ಯಕ್ರಮಗಳಿಗೆ ಬಳಸಿದಾಗ ಸಾರ್ಥಕವಾಗುತ್ತದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ದಿವ್ಯಾಂಗರಿಗೂ ಇತರರಂತೆ ಬದುಕಬೇಕೆಂಬ ಆಸೆಯಿರುತ್ತದೆ.
ಅವರ ಕೆಲಸಗಳನ್ನು ಮಾಡಿಕೊಳ್ಳಲು ನಾವು ಅನುವು ಮಾಡಿಕೊಟ್ಟಾಗ ಅವರಲ್ಲಿ ಧೈರ್ಯ ತುಂಬಲು ಸಾಧ್ಯ . ಇಂತಹ ಕೆಲಸವನ್ನು ಎಂಸಿಎಫ್ ಮಾಡುತ್ತಿದೆ ಎಂದು ಶ್ಲಾಘಿಸಿದರು.
ತನ್ನ ಕ್ಷೇತ್ರದ ಅಂಗನವಾಡಿ ದುರಸ್ತಿಗೆ ಸಿಎಸ್ಆರ್ ನಿಧಿಯಿಂದ ಅನುದಾನ ನೀಡಿದ ಸಂಸ್ಥೆಯನ್ನು ಶಾಸಕ ವೇದವ್ಯಾಸ ಕಾಮತ್ ಶ್ಲಾಘಿಸಿದರು.
ಎಂಸಿಎಫ್ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಭಾಕರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಚಟುವಟಿಕೆಯ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸುಮಾರು ಎಂಟು ಮಂದಿ ದಿವ್ಯಾಂಗರಿಗೆ ಕೃತಕ ಕಾಲು, ಕೈ ವಿತರಣೆ, ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಐದು ಟ್ರಾಲಿ,ಎರಡು ವೀಲ್ ಚೇಯರ್, ಸ್ಯಾನಿಟೈಸರ್, ಮಾಸ್ಕ್ ವಿತರಣೆ, ಮಂಗಳೂರಿನ ಅಂಗನವಾಡಿ ಪುನರ್ನವೀಕರಣಕ್ಕೆ 5 ಲಕ್ಷ ರೂ.ಬಿಡುಗಡೆಯ ಪತ್ರ ವಿತರಿಸಲಾಯಿತು.
ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರಾಮಚಂದ್ರ ಬಾಯಾರಿ, ಮನಪಾ ಸದಸ್ಯರಾದ ಜಗದೀಶ್ ಶೆಟ್ಟಿ, ರಾಜೇಶ್ ಸಾಲ್ಯಾನ್, ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಆಧೀಕ್ಷಕ ಡಾ. ದುರ್ಗಾ ಪ್ರಸಾದ್, ಡಾ.ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಡಾ.ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.