ಕರ್ನಾಟಕ

ಟೀಂ ಇಂಡಿಯಾ ಆಟಗಾರರ ತಾಳ್ಮೆಯುತ ಬ್ಯಾಟಿಂಗ್ : ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ

Pinterest LinkedIn Tumblr

ಸಿಡ್ನಿ: ಟೀಂ ಇಂಡಿಯಾಕ್ಕೆ ಸೋಲಿನ ಭಯ ಹಾಗೂ ಆಸೀಸ್ ಗೆ ಗೆಲುವಿನ ನಿರೀಕ್ಷೆ ಮೂಡಿಸಿದ ಬಾರ್ಡರ್- ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದಾಟ ಡ್ರಾನಲ್ಲಿ ಮುಕ್ತಾಯ ಕಾಣುವ ಮೂಲಕ ‘ರಿಯಲ್ ಟೆಸ್ಟ್ ಕ್ರಿಕೆಟ್’ ಗೆ ಸಾಕ್ಷಿಯಾಯಿತು.

ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗಿಗಳು ನಿಧಾನಗತಿಯ ಬ್ಯಾಟಿಂಗ್ ಮಾಡಿದ ಪಂದ್ಯವನ್ನು ಡ್ರಾ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸೀಸ್ ನೀಡಿದ 407 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 131 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿತು. ಇದರೊಂದಿಗೆ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.

ನಿನ್ನೆ ದಿನದಾಟದ ಅಂತ್ಯಕ್ಕೆ ಭಾರತ 98/2 ಗಳಿಸಿತ್ತು. ಇಂದು ಅಂತಿಮ ದಿನದ ಆರಂಭದಲ್ಲೇ ಭಾರತ ಆಘಾತ ಎದುರಿಸಿತು. ಕೇವಲ 4 ರನ್ ಗಳಿಸಿದ್ದ ರಹಾನೆ ಅವರನ್ನು ಲೈಯಾನ್ ಟ್ ಮಾಡಿದರು. ಈ ವೇಳೆ ಪೂಜಾರ ಜೊತೆಗೂಡಿದ ಪಂತ್ ಸಮಯೋಚಿತ ಬ್ಯಾಟಿಂಗ್ ಮೂಲಕ ಭಾರತಕ್ಕೆ ಆಸರೆಯಾದರು. ಈ ಜೋಡಿ ಭೋಜನ ವಿರಾಮದ ವೇಳೆ 104 ರನ್ ಗಳ ಶತಕದ ಜೊತೆಯಾಟವಾಡಿತು.

ನಂತರ ರಿಷಬ್ ಪಂತ್ ಶತಕದ ಅಂಚಿನಲ್ಲಿ ಎಡವಿದ್ದು 97 ರನ್ ಗಳಿಗೆ ಔಟ್ ಆದರು. ಪೂಜಾರ ಸಹ 77 ರನ್ ಗಳಿಗೆ ಔಟಾಗಿದ್ದು ಇದಾದ ಬಳಿಕ ತಂಡದ ಗೆಲುವಿನ ಕನಸು ಕ್ಷೀಣಿಸಿತು.

ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಹನುಮ ವಿಹಾರಿ ಅತ್ಯಂತ ತಾಳ್ಮೆಯುತ ಬ್ಯಾಟಿಂಗ್ ನಡೆಸಿದರು. ಆರಂಭದಲ್ಲಿ ಸ್ನಾಯುರಜ್ಜು ಸೆಳೆತಕ್ಕೆ ಒಳಗಾದ ವಿಹಾರಿ ನೋವಿನ ನಡುವೆಯೂ ಬ್ಯಾಟಿಂಗ್ ನಡೆಸಿದರು. 161 ಎಸೆತ ಎದುರಿಸಿದ ವಿಹಾರಿ ಗಳಿಸಿದ್ದು ಕೇವಲ 23 ರನ್ ಆದರೂ ತನ್ನ ಸಾರ್ವಕಾಲಿಕ ಶ್ರೇಷ್ಠ ಇನ್ನಿಂಗ್ಸ್ ಆಡಿದರು.. ಗಾಯಗೊಂಡಿದ್ದರೂ ಕೊನೆಯ ತನಕ ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ಹನುಮ ವಿಹಾರಿ ಪಂದ್ಯ ಡ್ರಾ ಆಗುವಂತೆ ನೋಡಿಕೊಂಡರು.

ವಿಹಾರಿಗೆ ಉತ್ತಮ ಸಾಥ್ ನೀಡಿದ ಅಶ್ವಿನ್ 128 ಎಸೆತಗಳಲ್ಲಿ 39ರನ್ ಗಳಿಸಿದರು. ಕಾಂಗರೂಗಳ ನಿಖರ ದಾಳಿ, ಚಕ್ರವ್ಯೂಹದಂತಹ ಫೀಲ್ಡಿಂಗ್ ನಡುವೆಯೂ ಅತ್ಯಂತ ತಾಳ್ಮೆಯಿಂದ ಆಡಿದರು. ಕಡಿಮೆ ಓವರ್ ಗಳಲ್ಲಿ ಹೆಚ್ಚು ರನ್ ಪಡೆಯಬೇಕಿದ್ದರಿಂದ ಹನುಮ ವಿಹಾರಿ ಮತ್ತು ಆರ್ ಅಶ್ವಿನ್ ತಾಳ್ಮೆಯ ಆಟವಾಡಿ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಿದರು.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯ ನಡೆದಿದ್ದು, ಉಭಯ ತಂಡಗಳು ತಲಾ 1 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸಮಬಲ ಸಾಧಿಸಿದ್ದಾರೆ. ಇನ್ನು ಜನವರಿ 15ರಿಂದ ಆರಂಭಗೊಳ್ಳುವ ನಾಲ್ಕನೇ ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಅವರು ಟ್ರೋಫಿ ಎತ್ತಲಿದ್ದಾರೆ.

Comments are closed.