ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಡೆದಿದ್ದಾರೆ.
(ಸಾಂದರ್ಭಿಕ ಚಿತ್ರ)
ತ್ರಾಸಿ ಸಮಿಪದ ಕಲ್ಯಾಣಮಂಟಪದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹ ಇದಾಗಿತ್ತು. ತಲ್ಲೂರು ಸಮೀಪದ 17 ವರ್ಷದ ಬಾಲಕಿಗೆ 28 ವರ್ಷದ ಯುವಕನೊಂದಿಗೆ ಮದುವೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡು 200 ಕ್ಕೂ ಹೆಚ್ಚು ಮಂದಿ ಮದುವೆ ಮಂಟಪದಲ್ಲಿ ಸೇರಿರುವ ಮಾಹಿತಿ ಬಂದ ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುಂದಾಪುರ, ಪೊಲೀಸ್ ಇಲಾಖೆ ಗಂಗೊಳ್ಳಿ ಹಾಗೂ ತ್ರಾಸಿ ಗ್ರಾಮ ಪಂಚಾಯತ್ ಅಧಿಕಾರಿಗಳ ತಂಡ ಹಠಾತ್ ಭೇಟಿ ನೀಡಿ ಬಾಲ್ಯವಿವಾಹವನ್ನು ತಡೆದಿದ್ದಾರೆ. ಕುಟುಂಬದ ಎರಡೂ ಕಡೆಯವರಿಗೂ ಬಾಲ್ಯವಿಹಾಹ ನಿಷೇದ ಮತ್ತು ತಡೆಗಟ್ಟುವಿಕೆ ಕಾಯ್ದೆ ಬಗ್ಗೆ ಅರಿವು ಮೂಡಿಸಿದ್ದಲ್ಲದೆ ಕುಟುಂಬಿಕರಿಂದ ಮತ್ತು ಕಲ್ಯಾಣ ಮಂಟಪದ ಮಾಲಿಕರು ಮತ್ತು ಪುರೋಹಿತರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಯಿತು. ಮದುವೆಗೆ ಬಂದವರೆನ್ನೆಲ್ಲಾ ವಾಪಸು ಕಳುಹಿಸಿ ಕೊಡಲಾಯಿತು.
ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕುಂದಾಪುರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಶೆಟ್ಟಿ, ಅಂಗನವಾಡಿ ಮೇಲ್ವಿಚಾರಕಿ ಪ್ರಭಾವತಿ, ರಕ್ಷಣಾಧಿಕಾರಿ ಕಪಿಲ, ಸಮಾಜ ಕಾರ್ಯಕರ್ತೆ ಸುರಕ್ಷಾ, ಗಂಗೊಳ್ಳಿ ಸಹಾಯಕ ಉಪನಿರೀಕ್ಷಕ ರಘುರಾಮ, ಹೆಡ್ ಕಾನ್ಸ್ಟೇಬಲ್ ಮೋಹನ್ ಪೂಜಾರಿ, ಮಹಿಳಾ ಪೊಲೀಸ್ ಸಿಬ್ಬಂದಿ ರೂಪ, ತ್ರಾಸಿ ಗ್ರಾ.ಪಂ ಪಿಡಿಒ ಶೋಭಾ, ಸಿಬ್ಬಂದಿಗಳಾದ ಶಿವಾನಂದ, ಸಂದೀಪ್, ಅಂಗನವಾಡಿ ಕಾರ್ಯಕರ್ತೆ ಜಯಮಾಲಾ ಮೊದಲಾದವರಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.