ಕರಾವಳಿ

ಕುಂದಾಪುರ ತಾಲೂಕಿನಲ್ಲಿ ಗ್ರಾಮಪಂಚಾಯತ್ ಚುನಾವಣೆ: ಬೆಳಿಗ್ಗೆನಿಂದ ಬಿರುಸಿನ ಮತದಾನ

Pinterest LinkedIn Tumblr

ಕುಂದಾಪುರ: ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಕುಂದಾಪುರ ತಾಲೂಕಿನಲ್ಲಿ ಭಾನುವಾರ ಬೆಳಿಗ್ಗಿನಿಂದ ಆರಂಭವಾಗಿದ್ದು ಮೊದಲ ಹಂತದ ಮತದಾನಕ್ಕೆ ಹೋಲಿಸಿದರೆ ಭಾನುವಾರದ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ.

ತಾಲೂಕಿನ 43 ಗ್ರಾಮ ಪಂಚಾಯತ್ ಗಳಿಗೆ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮಧ್ಯಾಹ್ನ 11 ಗಂಟೆಯ ಸಮಯದವರೆಗೂ ಅಮಾಸೆಬೈಲು, ಮಚ್ಚಟ್ಟು, ಸಿದ್ದಾಪುರ, ಕಟ್ ಬೆಲ್ತೂರು ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಉತ್ತಮ ಮತದಾನ ನಡೆಯುತ್ತಿದೆ‌‌‌.

ಹಾಲಾಡಿ ಸರಕಾರಿ ಶಾಲೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೆಳ್ಳಾಲ ಮೂಡುಮುಂದ ಶಾಲೆಯಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಮತ ಚಲಾಯಿಸಿದ್ದು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕನ್ಯಾನ ಶಾಲೆಯಲ್ಲಿ ಮತದಾನ ಮಾಡಿದರು. ಅನಿವಾಸಿ ಭಾರತೀಯ ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಪತ್ನಿ ಜೊತೆ ಆಗಮಿಸಿ ವಕ್ವಾಡಿ ಸರಕಾರಿ ಶಾಲೆಯಲ್ಲಿ ಮತ ಚಲಾಯಿಸಿದರು.

ತಾಲೂಕಿನ 43 ಗ್ರಾಮ ಪಂಚಾಯತ್ ಗಳ 530 ಸ್ಥಾನಗಳಿಗಾಗಿ 1,262 ಅಭ್ಯರ್ಥಿಗಳು ಕಣದಲ್ಲಿ ಇದ್ದು, 24 ಕಡೆಗಳಲ್ಲಿ ಅವಿರೋಧ ಆಯ್ಕೆಯಾಗಿದೆ. 1,86,685 ಮತದಾರರು ಮತ ಚಲಾಯಿಸುವ ಅವಕಾಶ ಪಡೆದುಕೊಂಡಿದ್ದಾರೆ. 1,150 ಅಧಿಕಾರಿಗಳು ಚುನಾವಣಾ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನ ಒಟ್ಟು 271 ಮತ ಗಟ್ಟೆಗಳ ಪೈಕಿ 5 ಮತಗಟ್ಟೆಗಳಲ್ಲಿ ಅವಿರೋಧ ಆಯ್ಕೆ ನಡೆದಿರುವುದ ರಿಂದ, 266 ಮತಗಟ್ಟೆಗಳಲ್ಲಿ ಮಾತ್ರ ಮತದಾನ ನಡೆಯುತ್ತಿದೆ. ಓರ್ವ ಡಿವೈಎಸ್ಪಿ, ನಾಲ್ವರು ಸಿಪಿಐ, ವಿವಿಧ ಠಾಣೆಗಳ ಒಟ್ಟು ಹನ್ನೆರಡು ಮಂದಿ ಪಿಎಸ್ಐ, 32 ಎಎಸ್ಐ, 300 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು, ಒಂದು ಕೆಎಸ್ಆರ್ಪಿ, ಒಂದು ಡಿಎಆರ್ ಚುನಾವಣಾ ಕರ್ತವ್ಯದಲ್ಲಿದ್ದಾರೆ.

ಕೊರೋನಾ ಹಿನ್ನೆಲೆ ಮತದಾನ ದಿನದಂದು ಎಲ್ಲಾ 266 ಮತಗಟ್ಟೆಯಲ್ಲಿ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಿಕೊಂಡು ಸ್ಯಾನಿಟೈಸಿಂಗ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಿ ಮತದನಾದಕ್ಕೆ ಅವಕಾಶ ಮಾಡಿಕೊಡಲಾಗಿದೆ.

266 ಮತಗಟ್ಟೆಗಳ ಪೈಕಿ ಎಪ್ಪತ್ತು ಸೂಕ್ಷ್ಮ ಹಾಗೂ ಇಪ್ಪತ್ತು ನಕ್ಸಲ್ ಪೀಡಿತ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ. ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಶಸಸ್ತ್ರಮೀಸಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

Comments are closed.