ಕರಾವಳಿ

ಇಂದಿನಿಂದ ದತ್ತಮಾಲಾ ಅಭಿಯಾನ ಆರಂಭ : ದತ್ತಪೀಠವನ್ನು ಇಸ್ಲಾಮೀಕರಣದಿಂದ ಮುಕ್ತಗೊಳಿಸಲು ಆಗ್ರಹ

Pinterest LinkedIn Tumblr

ಮಂಗಳೂರು, ಡಿಸೆಂಬರ್.19 : ಹಿಂದೂಗಳ ಶ್ರದ್ಧಾ ಕೇಂದ್ರವಾದ ಚಿಕ್ಕಮಗಳೂರಿನ ದತ್ತಪೀಠದಲ್ಲಿ ದತ್ತ ಜಯಂತಿಯ ಅಂಗವಾಗಿ ದತ್ತಮಾಲಾ ಅಭಿಯಾನವು ಡಿಸೆಂಬರ್ 19ರಿಂದ 29ರ ವರೆಗೆ ನಡೆಯಲಿದ್ದು, ಡಿಸೆಂಬರ್ 29 ದತ್ತಜಯಂತಿಯಂದು ದತ್ತಪೀಠಕ್ಕೆ ತೆರಳಿ ದತ್ತಪೀಠ, ದತ್ತಪಾದುಕೆ ದರುಶನದ ಮೂಲಕ ಈ ಅಭಿಯಾನ ಕೊನೆಗೊಳ್ಳಲಿದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಸುನಿಲ್ ಕೆ ಆರ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡಿಸೆಂಬರ್ 28 ರಂದು ದತ್ತಪೀಠದಲ್ಲಿ ಶ್ರೀ ಅನುಸೂಯ ದೇವಿ ಪೂಜೆ, ಶ್ರೀ ಗಣಪತಿ ಹೋಮ ಮತ್ತು ದುರ್ಗಾಹೋಮ ನಡೆಯಲಿದೆ. ಡಿಸೆಂಬರ್ 29 ದತ್ತಜಯಂತಿಯಂದು ಗಣಪತಿಹೋಮ, ದತ್ತಹೋಮ ಹಾಗು ದತ್ತಪೀಠ, ದತ್ತಪಾದುಕೆ ದರ್ಶನ ನಡೆಯಲಿದೆ. ರಾಜ್ಯದಿಂದ ಸಾವಿರಾರು ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಲ್ಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ದತ್ತಮಾಲೆಯನ್ನು ಧರಿಸಿ ದತ್ತಮಾಲಾಧಾರಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅತ್ರಿ ಮಹರ್ಷಿ ಮತ್ತು ಸತಿ ಅನುಸೂಯ ದೇವಿಯವರಿಗೆ ಜನಿಸಿದ ಬ್ರಹ್ಮ, ವಿಷ್ಣು, ಮಹೇಶ್ವರರ ಏಕೀಭಾವದ ಅವತಾರವೇ ಶ್ರೀ ಗುರು ದತ್ತಾತ್ರೇಯ. ಹಿಂದೂಗಳ ಶೃದ್ಧಾಕೇಂದ್ರವಾಗಿರುವ ದತ್ತಪೀಠವನ್ನು ಇಸ್ಲಾಮೀಕರಣದಿಂದ ಮುಕ್ತಗೊಳಿಸಿ ಹಿಂದೂ ವೈದಿಕ ವಿಧಿವಿಧಾನದ ಮೂಲಕ ನಿತ್ಯ ತ್ರಿಕಾಲಪೂಜೆಗೆ ಅವಕಾಶ ಕೊಡಬೇಕೆಂದು ಆಗ್ರಹಿಸಿ ಈ ವರ್ಷವೂ ಈ ಅಭಿಯಾನದಲ್ಲಿ ಮಂಗಳೂರು ಮಹಾನಗರದದಿಂದ 5,000 ದತ್ತಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಡಿಸೆಂಬರ್ 19ರಂದು ದತ್ತಮಾಲಾ ಅಭಿಯಾನಕ್ಕೆ ಚಾಲನೆ:

ಶ್ರೀ ದತ್ತಮಾಲಾ ಅಭಿಯಾನವು ಡಿಸೆಂಬರ್ 19ಕ್ಕೆ ನೂರಾರು ಕಾರ್ಯಕರ್ತರು ಮಾಲಾಧಾರಣೆ ಮಾಡುವ ಮೂಲಕ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮಂಗಳೂರಿನರು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ದತ್ತಮಾಲಾ ಧಾರಣೆ ಮಾಡುವ ಮೂಲಕ ನೂರಾರು ಕಾರ್ಯಕರ್ತರು, ದತ್ತಭಕ್ತರು ಮಾಲಾಧಾರಣೆ ಮಾಡಲಿದ್ದಾರೆ ಎಂದು ಸುನಿಲ್ ಕೆ ಆರ್ ತಿಳಿಸಿದರು.

ದತ್ತಮಾಲಾ ಅಭಿಯಾನ ಮುಖಾಂತರ ಸರಕಾರಕ್ಕೆ ಈ ಕೆಳಗಿನ ಬೇಡಿಕೆಗಳಿಗೆ ಆಗ್ರಹ :

1. ದತ್ತಪೀಠದ ಗುಹಾಂತರ ದೇವಾಲಯದಲ್ಲಿ ಹಿಂದೂ ಅರ್ಚಕರ ನೇಮಕವಾಗಿ ತ್ರಿಕಾಲ ಪೂಜೆ ನಡೆಯಬೇಕು,

2. ದತ್ತಪೀಠಕ್ಕೆ ಓರ್ವ ಶಾಶ್ವತ ಹಿಂದೂ ಕಾರ್ಯನಿರ್ವಹಣಾಧಿಕಾರಿ ನೇಮಿಸಬೇಕು.

3. ದತ್ತಪೀಠದಲ್ಲಿ ಯಾವುದೇ ಇಸ್ಲಾಂನ ಚಟುವಟಿಕೆಗೆ ಅವಕಾಶ ನೀಡಬಾರದು.

4. ಇಸ್ಲಾಂ ವಿಧಾನಗಳು ಮತ್ತು ಗೋರಿಗಳನ್ನು ನಾಗೇನಹಳ್ಳಿಯಲ್ಲಿರುವ ಮೂಲ ಬಾಬಾಬುಡನ್ ದರ್ಗಾಕ್ಕೆ ವರ್ಗಾಹಿಸಬೇಕು.

5. ಶ್ರೀಗುರು ದತ್ತಾತ್ರೇಯ ಪೀಠ ಮತ್ತು ಪರಿಸರವನ್ನು ಹಿಂದೂಗಳ ಪುಣ್ಯಕ್ಷೇತ್ರವೆಂದು ಘೋಷಿಷಬೇಕು, ಅದರ ಸಂಪೂರ್ಣ ರಕ್ಷಣೆ ಆಗಬೇಕು.

6. ದತ್ತಪೀಠದಲಿದ್ದ ಅಮೂಲ್ಯ ವಿಗ್ರಹಗಳ ಅತಿಕ್ರಮಣ, ಕಾಣೆಯಾಗಿರುವ ಕಾಣಿಕೆ ವಸ್ತುಗಳು ಮತ್ತು ಆಸ್ತಿಪಾಸ್ತಿ ಅಕ್ರಮ ಹಸ್ತಾಂತರ ಹಾಗು ಮಾರಾಟವಾಗಿದ್ದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಅವುಗಳ ಪುನರ್ ಪ್ರತಿಷ್ಠಾಪಿಸಬೇಕು.

7. ದತ್ತಪೀಠಕ್ಕೆ ಬರುವ ಹಿಂದೂ ಭಕ್ತಾಧಿಗಳಿಗೆ, ಸ್ವಾಮೀಜಿಗಳಿಗೆ ಪೂಜೆಗೆ ಸೂಕ್ತ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂಬ ಬೇಡಿಕೆಗಳನ್ನು ದತ್ತಮಾಲಾ ಅಭಿಯಾನ ಮುಖಾಂತರ ಸರಕಾರಕ್ಕೆ ಆಗ್ರಹ ಮಾಡಲಾಗುವುದು ಎಂದು ಸುನಿಲ್ ಕೆ ಆರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಉಪಸ್ಥಿತರಿದ್ದರು.

Comments are closed.