ಮಂಗಳೂರು, ಡಿಸೆಂಬರ್ 16 : ದುಷ್ಕರ್ಮಿಯೋರ್ವ ಹಾಡುಹಗಲೇ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೇಲೆ ತಲವಾರು ಬೀಸಿ ಗಾಯಗೊಳಿಸಿದ ಘಟನೆ ಬುಧವಾರ ಅಪರಾಹ್ನ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ರಥಬೀದಿ ಸಮೀಪದ ನ್ಯೂಚಿತ್ರ ಮಂದಿರದ ಬಳಿ ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೇಲೆ ದುಷ್ಕರ್ಮಿಯೊಬ್ಬ ಏಕಏಕಿ ಕತ್ತಿಯೊಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ತಲವಾರು ದಾಳಿಗೊಳಗಾದವರನ್ನು ಬಂದರ್ ಠಾಣೆಯ ಹೆಡ್ಕಾನ್ಸ್ಟೇಬಲ್ ಗಣೇಶ ಕಾಮತ್ ಎಂದು ಹೆಸರಿಸಲಾಗಿದೆ.
ಹೆಡ್ಕಾನ್ಸ್ಟೇಬಲ್ ಗಣೇಶ ಕಾಮತ್ ಇಬ್ಬರು ಸಿಬ್ಬಂದಿ ಜೊತೆ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಬೈಕನ್ನು ಸ್ವಲ್ಪ ದೂರ ನಿಲ್ಲಿಸಿ ಬೈಕಿನಲ್ಲಿದ್ದ ಓರ್ವ ದುಷ್ಕರ್ಮಿ ಮುಖ್ಯ ಪೇದೆ ಗಣೇಶ ಕಾಮತ್ ರಿಗೆ ತಲವಾರಿನಿಂದ ಹಲ್ಲೆಗೈದು ಪರಾರಿಯಾಗಿದ್ದಾನೆ.
ಹೆಡ್ಕಾನ್ಸ್ಟೇಬಲ್ ಗಣೇಶ ಕಾಮತ್ ಅವರ ಕೈಗೆ ಬಲವಾದ ಏಟು ಬಿದ್ದಿದ್ದು, ಕೂಡಲೇ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗಣೇಶ ಕಾಮಾತ್ ನೀಡಿದ ದೂರಿನಂತೆ ಮಂಗಳೂರು ಉತ್ತರ (ಬಂದರ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Comments are closed.