ಕರಾವಳಿ

ಮಂಗಳೂರಿನ ಪೆಟ್ರೋಲಿಯಂ ತೈಲ ಘಟಕದಲ್ಲಿ ಆಕಸ್ಮಿಕ ಬೆಂಕಿ ಅವಘಡ : ಯಶಸ್ವಿ ಕಾರ್ಯಾಚರಣೆ

Pinterest LinkedIn Tumblr

ಮಂಗಳೂರು: ರಫ್ತಾರ್ ಟರ್ಮಿನಲ್ ಪ್ರವೇಟ್ ಲಿಮಿಟೆಡ್‌ನ ಪೆಟ್ರೋಲಿಯಂ ತೈಲ ಘಟಕದಲ್ಲಿ ಆಕಸ್ಮಿಕ ಬೆಂಕಿ ಅಪಘಾತವುಂಟಾಗಿದ್ದು, ಕೂಡಲೇ ರಕ್ಷಣಾ ಪಡೆಯ ಸಿಬ್ಬಂದಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ರಾಸಾಯನಿಕ ಮಿಶ್ರಿತ ನೀರನ್ನು ಸಿಂಪಡಿಸುವುದರೊಂದಿಗೆ ಬೆಂಕಿಯನ್ನು ನಂದಿಸಿದ್ದಾರೆ.

ಇದು ನಿಜವಾಗಿ ನಡೆದ್ದಲ್ಲ. ಬದಲಾಗಿ ತೈಲ ಘಟಕದಲ್ಲಿ ಡೀಸೆಲ್‌ಗೆ ಬೆಂಕಿ ಬಿದ್ದಂತಹ ಸಂದರ್ಭದಲ್ಲಿ ತುರ್ತು ನಿರ್ವಹಣಾ ಕಾರ್ಯಾಚರಣೆ ಹೇಗಿರುತ್ತದೆ ಎಂಬ ಅಣುಕು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಮಂಗಳೂರಿನ ನಗರದ ಹೊರವಲಯದ ಪಣಂಬೂರಿನ ಬೀಚಿನಲ್ಲಿ ಕೆ.ಐ.ಎ.ಡಿ.ಬಿಯಲ್ಲಿ ಕೈಗಾರಿಕಾ ರಾಸಾಯನಿಕ ತುರ್ತು ನಿವಾರಣಾ ಮಾಹೆಯ ಅಂಗವಾಗಿ ಪಣಂಬೂರು ಬೀಚಿನ ರಫ್ತರ್ ಟರ್ಮಿನಲ್ ಪ್ರವೇಟ್ ಲಿಮಿಟೆಡ್‌ನ ಪೆಟ್ರೋಲಿಯಂ ತೈಲ ಘಟಕದಲ್ಲಿ ಡೀಸೆಲ್‌ಗೆ ಬೆಂಕಿ ಬಿದ್ದಂತಹ ಸಂದರ್ಭದಲ್ಲಿ ತುರ್ತು ನಿರ್ವಹಣಾ ಅಣುಕು ಕಾರ್ಯಾಚರಣೆಯನ್ನು ಕೈಗೊಂಡು ಬೆಂಕಿ ನಂದಿಸಲಾಯಿತು.

ತೈಲವನ್ನು ಲಾರಿಗಳಿಗೆ ತುಂಬುವ ನಿಲ್ದಾಣದಲ್ಲಿ ಲಾರಿಯ ಟ್ಯಾಂಕಿನ ಕ್ಯಾಪ್‌ನ್ನು ತಿರುಗಿಸಿ ತೆರೆಯುವ ಸಂದರ್ಭದಲ್ಲಿ ಲಾರಿಯ ಒಳಗಿದ್ದ ಡೀಸೆಲ್ ಕ್ಯಾಪ್‌ನ ಘರ್ಷಣೆಯಿಂದಾಗಿ ಬೆಂಕಿ ಕಾಣಿಸಿಕೊಂಡಿತು.

ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ವಿನಯ್ ಕೂಡಲೇ ಸೇಫ್ಟಿ ಮ್ಯಾನೆಜರ್‌ಗೆ ವಿಷಯ ತಿಳಿಸಿದರು. ಅಲ್ಲಿನ ರಕ್ಷಣಾ ಪಡೆಯ ಸಿಬ್ಬಂದಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ರಾಸಾಯನಿಕ ಮಿಶ್ರಿತ ನೀರನ್ನು ಸಿಂಪಡಿಸುವುದರೊಂದಿಗೆ ಬೆಂಕಿಯನ್ನು ನಂದಿಸಿದರು.

ಬೆಂಕಿಯ ತಾಪಕ್ಕೊಳಗಾದ ಸಿಬ್ಬಂದಿಯನ್ನು ಇತರ ಸಿಬ್ಬಂದಿಗಳು ಅವರನ್ನು ಸುಕ್ಷಿತ ಸ್ಥಳಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದರು.

ತುರ್ತು ಅಣುಕು ಚಟುವಟಿಕೆಯನ್ನು ವೀಕ್ಷಿಸಿದ ಕಾರ್ಖಾನೆಗಳ ಉಪ ನಿರ್ದೇಶಕ ರಾಜೇಶ್ ಸಿ. ಮಿಶ್ರಕೋಟಿ ಅವರು ನಂತರ ಸಿಬ್ಬಂದಿ ವರ್ಗದವರಿಗೆ ವಿವಿಧ ತಾಂತ್ರಿಕ ಮತ್ತು ಸುರಕ್ಷಿತ ಅಂಶಗಳ ಬಗ್ಗೆ ಸವಿಸ್ತಾರವಾಗಿ ವಿವರಿಸುವುದರೊಂದಿಗೆ ತುರ್ತು ಪರಿಸ್ಥಿತಿ ನಿರ್ವಹಣೆ ಬಗ್ಗೆ ತಿಳಿಸಿದರು.

ತುರ್ತು ಸಂದರ್ಭದಲ್ಲಿ ಅಗ್ನಿ ನಿಯಂತ್ರಣಕ್ಕೆ ಅಗತ್ಯವಿರುವ ತುರ್ತು ಕರೆಗಳ ಫೋನ್ ಸಂಖ್ಯೆಯನ್ನು ಘಟಕದಲ್ಲಿ ಪ್ರದರ್ಶಿಸಬೇಕು. ಚಿಕಿತ್ಸೆಗಾಗಿ ಆಂಬುಲೆನ್ಸ್ಗೆ ಕರೆ ಮಾಡಬೇಕು. ಸಿಬ್ಬಂದಿಗಳು ಸಮನ್ವಯದೊಂದಿಗೆ ಕಾರ್ಯ ಚಟುವಟಿಕೆಗಳನ್ನು ಕೈಗೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಇದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ಕಾರ್ಯಾಚರಣೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ವಿಜಯ ಕುಮಾರ್, ಅಗ್ನಿ ಶಾಮಕ ಅಧಿಕಾರಿ ಭರತ್ ಕುಮಾರ್, ಟರ್ಮಿನಲ್ ಮ್ಯಾನೆಜರ್ ಮನು ಮೋಹನ್ ಪ್ರಭು, ಸೇಫ್ಟಿ ಮ್ಯಾನೆಜರ್ ನಾರಾಯಣ ದತ್ತ್ ವೈ.ಎಸ್ ಮತ್ತಿತರರು ಉಪಸ್ಥಿತರಿದ್ದರು.

Comments are closed.