ಕರಾವಳಿ

ಪ್ರವಾದಿಗಳಿಗೆ ಕೋಪ ಬಂದರೆ ತಲೆ ದೇಹದಿಂದ ಬೇರ್ಪಡುವುದು : ಮಂಗಳೂರಿನಲ್ಲಿ ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಪತ್ತೆ

Pinterest LinkedIn Tumblr

ಮಂಗಳೂರು, ನವೆಂಬರ್ 29: ‘ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು’ ಇದು ಮಂಗಳೂರಿನಲ್ಲಿ ಮತ್ತೆ ಕಾಣ ಸಿಕ್ಕಿದ ವಿವಾದಾತ್ಮಕ ಗೋಡೆ ಬರಹ.

ಕೆಲವೇ ದಿನಗಳ ಹಿಂದೆ ಬಿಜೈ ಬಟ್ಟಗುಡೆ ಸಮೀಪದ ಅಪಾರ್ಟ್‌ಮೆಂಟ್‌‌‌ ಒಂದರ ಕೌಂಪೌಂಡ್‌‌‌ನ ಮೇಲೆ ಲಷ್ಕರ್ ಉಗ್ರರನ್ನು ಬೆಂಬಲಿಸಿ ಗೋಡೆ ಬರಹ ಬರೆಯಲಾಗಿತ್ತು. ಇದರ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೊಂದು ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಕಂಡು ಬಂದಿದೆ.

ನಗರದ ಕೋರ್ಟ್ ರೋಡ್‌ನಲ್ಲಿ ಕೋರ್ಟ್‌ಗೆ ಸಮೀಪವಾಗಿರುವ ಕೋರ್ಟ್ ಪ್ರಿಮಿಸಸ್‌ನ ಹಳೇ ಪೊಲೀಸ್ ಔಟ್ ಪೋಸ್ಟ್‌ನ ಗೋಡೆಯ ಮೇಲೆ ಕಿಡಿಗೇಡಿಗಳು ಉರ್ದು ಭಾಷೆಯಲ್ಲಿ ‘Gustuk e Rasool ek hi saza sar tan say juda’ ಅಂದರೆ, “ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ಅದು ತಲೆ ದೇಹದಿಂದ ಬೇರ್ಪಡುವುದು” ಎಂಬ ವಿವಾದಾತ್ಮಕ ಬರಹವನ್ನು ಬರೆದಿದ್ದಾರೆ. ಕಪ್ಪು ಬಣ್ಣದ ಪೈಂಟ್ ಬಳಸಿ ರಾತ್ರಿ ವೇಳೆ ಬರೆಯಲಾಗಿದ್ದು, ರವಿವಾರ ಬೆಳಗ್ಗೆ ವಿಷಯ ಬೆಳಕಿಗೆ ಬಂದಿದೆ.

ಕೆಲವೇ ದಿನಗಳ ಹಿಂದೆ ಮಂಗಳೂರಿನ ಸರ್ಕ್ಯೂಟ್‌‌ ಹೌಸ್‌‌ನ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌‌ ಒಂದರ ಕೌಂಪೌಂಡ್‌ನ ಮೇಲೆ ಲಷ್ಕರ್‌-ಎ-ತಯ್ಯಬಾ ಮತ್ತು ತಾಲಿಬಾನಿ ಉಗ್ರ ಸಂಘಟನೆಗಳನ್ನು ಬೆಂಬಲಿಸಿದ ಬೆದರಿಕೆ ಬರಹವೊಂದನ್ನು ಬರೆಯಲಾಗಿತ್ತು.

“Do not force us to invite Lashkar-e-Toiba and Taliban to Deal with Sanghis and Manvedis” ಎಂದು ಉಗ್ರರ ಪರವಾಗಿ ಕಿಡಿಗೇಡಿಗಳು ಬರೆದಿದ್ದರು. ಅಷ್ಟೇ ಅಲ್ಲದೇ ಹ್ಯಾಷ್ ಟ್ಯಾಗ್ ಹಾಕಿ, “ಲಷ್ಕರ್‌‌ ಜಿಂದಾಬಾದ್”‌‌‌‌‌ ಎಂದು ಬರೆಯಲಾಗಿತ್ತು. ಬಳಿಕ ಕದ್ರಿ ಪೊಲೀಸರು ವಿವಾದಿತ ಬರಹದ ಮೇಲೆ ಪೈಂಟ್‌ ಬಳಿದು ಅದನ್ನು ಅಳಿಸಿ ಹಾಕಿದ್ದಾರೆ.

ಈ ಪ್ರಕರಣದ ಬಗ್ಗೆ ಮೂರು ಪ್ರತ್ಯೇಕ ಪೊಲೀಸ್‌ ತಂಡಗಳು ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿರುವ ಸಂದರ್ಭದಲ್ಲೇ ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಕಾಣಿಸಿಕೊಂಡಿದೆ. ಬಂದರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡಿದ್ದಾರೆ.

Comments are closed.