ಕರಾವಳಿ

ಬೆಂಗಳೂರಿನಲ್ಲಿ 8ರ ಬಾಲೆಯ ಮೇಲೆ ಅತ್ಯಾಚಾರ : ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಪ್ರಕರಣದ ಶೀಘ್ರ ವಿಲೇವಾರಿಗೆ ನ್ಯಾಶನಲ್ ವಿಮೆನ್ಸ್ ಫ್ರಂಟ್ ಆಗ್ರಹ

Pinterest LinkedIn Tumblr

ಬೆಂಗಳೂರು: ಬೆಂಗಳೂರಿನ ದೇವನಹಳ್ಳಿಯಲ್ಲಿ 8 ರ ಹರೆಯದ ಮುಸ್ಲಿಂ ಬಾಲಕಿಯನ್ನು ದೇವಸ್ಥಾನ ವೊಂದರ ಅರ್ಚಕನೋರ್ವ ನಡೆಸಿದ ಅತ್ಯಾಚಾರವನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ ತೀವ್ರವಾಗಿ ಖಂಡಿಸುತ್ತದೆ ಎಂದು ನ್ಯಾಶನಲ್ ವಿಮೆನ್ಸ್ ಫ್ರಂಟ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ತಬಸ್ಸುಮ್ ಅರಾ ತಿಳಿಸಿದ್ದಾರೆ.

ಘಟನೆಯು ಕಥುವಾದ ಆಸಿಫಾ ಪ್ರಕರಣವನ್ನು ನೆನಪಿಸುತ್ತಿದ್ದು, ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ದೇವಸ್ಥಾನದ ಅಂಗಳದಲ್ಲಿ ಆಟವಾಡುತ್ತಿದ್ದ 8ರ ಬಾಲೆಯನ್ನು ಅರ್ಚಕ ಅತ್ಯಾಚಾರ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ.

ಯುಪಿಯ ಹಥ್ರಾಸ್, ಬಹ್ರಾನ್ ಪುರ್, ಬಿಹಾರದ ಗುಲ್ನಾಝ್ ಮೇಲೆ ನಡೆದಂತಹ ಘಟನೆಗಳು ಈಗ ರಾಜ್ಯ ರಾಜಧಾನಿಯಲ್ಲೂ ನಡೆಯುತ್ತಿರುವುದು ದುರದೃಷ್ಟಕರ. ಈ ಬಗ್ಗೆ ಪೊಲೀಸರು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು.

ಮತ್ತೆ ಮತ್ತೆ ಇಂತಹ ಪ್ರಕರಣಗಳು ಮರುಕಳಿಸಲು ಯಾರು ಕಾರಣ? ಸರಕಾರ ಆರೋಪಿಯ ಪರ ವಹಿಸದೇ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೆಣ್ಮಕ್ಕಳನ್ನು ರಕ್ಷಿಸುವವರು ಯಾರು? ಈ ವಿಷಯದಲ್ಲಿ ಸರಕಾರದ ಮೌನ ಯಾಕಾಗಿ? ಎಂದು ನ್ಯಾಶನಲ್ ವಿಮೆನ್ಸ್ ಫ್ರಂಟ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ತಬಸ್ಸುಮ್ ಅರಾ ಅವರು ಪ್ರಶ್ನಿಸಿದ್ದಾರೆ.

ಕೋವಿಡ್ ಸಮಯದಲ್ಲೂ ಅನಗತ್ಯವಾಗಿದ್ದ ಹಲವಾರು ವಿಷಯಗಳಲ್ಲಿ ಸುಗ್ರೀವಾಜ್ಞೆಗಳ ಮೂಲಕ ಕಾನೂನು ಜಾರಿಗೆ ತರುವ ಕೇಂದ್ರ ಸರಕಾರ ಅತ್ಯಾಚಾರಿಗಳ ವಿರುದ್ಧ ಕಠಿಣ ಶಿಕ್ಷೆ ಜಾರಿಗೆ ತರುವುದರ ಕುರಿತು ಯೋಚಿಸದೇ ಇರುವುದು ಕಳವಳಕಾರಿ ಎಂದು ಅವರು ಹೇಳಿದ್ದಾರೆ.

ದೇವನಹಳ್ಳಿಯ ಈ ಪ್ರಕರಣವನ್ನು ಈ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕಾಗಿದೆ, ಮಾತ್ರವಲ್ಲ ಪ್ರಕರಣದ ಶೀಘ್ರ ವಿಲೇವಾರಿಗಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ ಗೆ ಈ ಪ್ರಕರಣವನ್ನು ವರ್ಗಾಯಿಸಿ, ಆರೋಪಿಗೆ ಕಠಿಣ ಶಿಕ್ಷೆ ದೊರೆಯುವಂತಾಗಬೇಕೆಂದು ನ್ಯಾಶನಲ್ ವಿಮೆನ್ಸ್ ಫ್ರಂಟ್ ಸರಕಾರವನ್ನು ಆಗ್ರಹಿಸುತ್ತದೆ ಎಂದವರು ತಿಳಿಸಿದ್ದಾರೆ.

Comments are closed.