ಕರಾವಳಿ

ಜನರ ಮುಂದೆ ಯಾವ ಅಹಂಕಾರ ಕೂಡ ಕೆಲಸ ಮಾಡುವುದಿಲ್ಲ : ಅದಕ್ಕೆ ಬಂಡೆ, ಹುಲಿಯಾ ಸೋತಿವೆ

Pinterest LinkedIn Tumblr

ಮಂಗಳೂರು, ನವೆಂಬರ್.10: ಜನರ ಮುಂದೆ ಗೂಂಡಾಗಿರಿ ನಡೆಯುವುದಿಲ್ಲ.ಜೊತೆಗೆ ಯಾವ ಅಹಂಕಾರ ಕೂಡ ಕೆಲಸ ಮಾಡುವುದಿಲ್ಲ ಎನ್ನುವುದನ್ನು ಉಪಚುನಾವಣೆ ಫಲಿತಾಂಶ ಸಾಬೀತು ಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಪಕ್ಷದ ಕಚೇರಿ ಮುಂಭಾಗ ನಡೆದ ಬಿಜೆಪಿ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ದೇಶದಲ್ಲಿ ಪರಿವರ್ತನೆಯ ಗಾಳಿಯನ್ನು ಕಾಣಬಹುದು. ಎಲ್ಲೆಡೆ ನಿರೀಕ್ಷೆ ಮೀರಿ ಬಿಜೆಪಿಗೆ ಜಯ ಲಭಿಸಿದೆ. ಎಲ್ಲೆಡೆ ಬಿಜೆಪಿ ಸಾಮೂಹಿಕ ನಾಯಕತ್ವ ಕ್ಕೆ ಜಯ ಸಿಗುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಹಾಗೂ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರಕ್ಕೆ ಜನ ಆಶೀರ್ವಾದ ಮಾಡಿದ್ದಾರೆ ಎಂದು ಅವರು ಹೇಳಿದರು.

ಶಿರಾದಲ್ಲಿ ಪಂಚಪಾಂಡವರು ಹಾಗೂ ರಾಜರಾಜೇಶ್ವರಿ ನಗರದಲ್ಲಿ ಅಶೋಕ್ ಹಾಗೂ ಲಿಂಬಾವಳಿ ಅವರು ಜೋಡೆತ್ತು ರೀತಿಯಲ್ಲಿ ದುಡಿದು ಪಕ್ಷವನ್ನು ಗೆಲ್ಲಿಸಿದ್ದಾರೆ. ಉಪಚುನಾವಣೆ ಫಲಿತಾಂಶವು ಕಾರ್ಯಕರ್ತರು, ಮುಖಂಡರ ಒಗ್ಗಟ್ಟಿನ ಶ್ರಮದಿಂದ ಸಿಕ್ಕ ಗೆಲುವು.

ಜನ ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಿಗೆ ಜನ ಆಶೀರ್ವದಿಸಿದ್ದಾರೆ. ಕಾಂಗ್ರೆಸ್ ನ ನಾಯಕರು ಅವರೇ ಹೇಳಿಕೊಂಡಂತಹ ಬಂಡೆ, ಹುಲಿಗಳು ಸೋತಿವೆ. ಬಂಡೆ, ಹುಲಿಯಾ ಎಲ್ಲವನ್ನೂ ಜನರು ತಿರಸ್ಕರಿಸಿದ್ದು, ಅವರು ಎಲ್ಲೆಲ್ಲಿ ಇದ್ದಾರೆ ಎಂದು ಹುಡುಕ ಬೇಕು ಎಂದು ನಳಿನ್ ಕುಮಾರ್ ಹೇಳಿದರು.

ಈ ಸಂದರ್ಭ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್, ರವಿಶಂಕರ್ ಮಿಜಾರ್, ಮುಖಂಡರಾದ ಸುಧೀರ್ ಕಣ್ಣೂರು, ಪ್ರೇಮನಾಥ ಶೆಟ್ಟಿ, ಸಂತೋಷ್ ಶೆಟ್ಟಿ ಗೋಳಿಯಾರ್, ಸಂಜಯ್ ಪ್ರಭು, ಗುರುಚರಣ್ ಹಾಗೂ ಮಹಿಳಾ ಮುಖಂಡರು ಉಪಸ್ಥಿತರಿದ್ದರು.

Comments are closed.