ಕರಾವಳಿ

ಭ್ರಷ್ಟಾಚಾರ ನಿರ್ಮೂಲನಕ್ಕೆ ಜಿಲ್ಲೆ ಸಜ್ಜು : ಸರ್ಕಾರಿ ಕಛೇರಿಗಳಲ್ಲಿ ಲಂಚ ಕೇಳಿದರೆ ಇಲ್ಲಿಗೆ ಕರೆ ಮಾಡಿ

Pinterest LinkedIn Tumblr

ಮಂಗಳೂರು ಅಕ್ಟೋಬರ್ 30 : ಸರ್ಕಾರದ ಎಲ್ಲಾ ಯೋಜನೆಗಳು ಸಮಾಜದ ಎಲ್ಲಾ ಜನರಿಗೂ ಸಮಾನವಾಗಿ ತಲುಪಬೇಕು, ಈ ನಿಟ್ಟಿನಲ್ಲಿ ಸರ್ಕಾರಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು, ಭ್ರಷ್ಟಾಚಾರ ರಹಿತವಾಗಿ, ಪ್ರಾಮಾಣಿಕವಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜಾಗೃತಿ ಅರಿವು ಸಪ್ತಾಹ – 2020 ನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 27 ರಿಂದ ನವೆಂಬರ್ 2 ರವರೆಗೆ ಆಚರಿಸಲಾಗುವ ಜಾಗೃತಿ ಅರಿವು ಸಪ್ತಾಹದ ಈ ವರ್ಷದ ವಿಷಯ “ಜಾಗರೂಕ ಭಾರತ, ಸಮೃದ್ಧ ಭಾರತ” ಶೀರ್ಷಿಕೆಯಡಿ ಸಾರ್ವಜನಿಕರಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಎಲ್ಲಾ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ನೆರವು ನೀಡುವ ಮಾಹಿತಿ ಕೈಪಿಡಿಯನ್ನು ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಕಚೇರಿಗಳಲ್ಲಿ ಹಣದ ಅಪೇಕ್ಷೆ ಮಾಡಿದರೆ ಜೊತೆಗೆ ಇನ್ನಿತರ ಸಮಸ್ಯೆ ಎದುರಾದರೆ ಸಾರ್ವಜನಿಕರು ಈ ಮಾಹಿತಿ ಕೈಪಿಡಿಯ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ಪ್ರಾಮಾಣಿಕತೆಯೊಂದಿಗೆ ಜೀವನ ನಡೆಸುವಂತೆ ಯವ ಪೀಳಿಗೆಗೆ ಸ್ಫೂರ್ತಿ ತುಂಬುವುದರ ಮೂಲಕ ಬಹಳಷ್ಟು ಪ್ರಗತಿಯನ್ನು ನಮ್ಮ ಸಮಾಜ ಪಡೆಯಬಹುದು. ಅಧಿಕಾರಿಗಳು ಹಾಗೂ ಸಹದ್ಯೋಗಿಗಳು ಆಮಿಷಕ್ಕೆ ಒಳಗಾಗದೆ ಸಾರ್ವಜನಿಕರ ಹಿತಾಸಕ್ತಿಗನುಗುಣವಾಗಿ ನಿಸ್ವಾರ್ಥ ಸೇವೆ ನೀಡಿ ಆತ್ಮವಿಶ್ವಾಸ ಮೂಡಿಸುವಂತೆ ಕೆಲಸ ಮಾಡಬೇಕು. ಇದರಲ್ಲಿ ಲೋಪವಾದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ದ.ಕ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶಿಲ್ಪ ಎಜಿ, ಮಾತನಾಡಿ, ಪ್ರತಿಯೊಬ್ಬ ಸರ್ಕಾರಿ ನೌಕರ ಕಾನೂನು ಪಾಲನೆ ಜೊತೆಗೆ, ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು.

ಯಾವುದೇ ಸಾರ್ವಜನಿಕ ನೌಕರರು ನ್ಯಾಯಯುತವಾಗಿ ನಿರ್ವಹಿಸಬೇಕಾದ ಕೆಲಸಕ್ಕೆ ಲಂಚಕ್ಕೆ ಒತ್ತಾಯಿಸುವುದು, ಲಂಚ ಪಡೆಯುವುದು, ಲಂಚದ ರೂಪದಲ್ಲಿ ಬೇರೆ ಪ್ರತಿಫಲ ಪಡೆಯುವುದು, ಸಾರ್ವಜನಿಕ ಹುದ್ದೆಯನ್ನು ಬಳಸಿಕೊಂಡು ಇನ್ನಿತರ ಅವ್ಯವಹಾರಗಳನ್ನು ನಡೆಸುವುದು ಕಂಡು ಬಂದರೆ 1988ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯನ್ವಯ ಅಪರಾಧವಾಗುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ದೂರು ಇದ್ದಲ್ಲಿ ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ದೂ.ಸಂ. 0824-2483000, ಪೊಲೀಸ್ ಅಧೀಕ್ಷಕರು ದೂ. ಸಂ. 9480806231, ಪೊಲೀಸ್ ಇನ್ಸ್‍ಪೆಕ್ಟರ್ ದೂ. ಸಂ. 9480806291 ನ್ನು ಸಂಪರ್ಕಿಸಿಬಹುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪ, ಐ.ಎ.ಎಸ್. ಪ್ರೊಬೆಷನರಿ ಅಧಿಕಾರಿ ಮೋನಾ ರೋತ್ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.