ಕರಾವಳಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ತಲೆಮಾರಿನ ಸೈಬರ್ ಅಪರಾಧಗಳ ಕುರಿತು ಕಾರ್ಯಾಗಾರ

Pinterest LinkedIn Tumblr

ಮಂಗಳೂರು : ಹೊಸ ತಲೆಮಾರಿನ ಸೈಬರ್ ಅಪರಾಧಗಳ ಕುರಿತು ಮಂಗಳೂರಿನ ಹಳೆಯ ವಿಮಾನ ನಿಲ್ದಾಣದ ಸಭಾಂಗಣದಲ್ಲಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಮಂಗಳೂರಿನ ಸಿ‌ಐ‌ಎಸ್‌ಎಫ್ ಅಧಿಕಾರಿಗಳಿಗಾಗಿ ವಿಮಾನ ನಿಲ್ದಾಣಗಳಲ್ಲಿ ಹೊಸ ತಲೆಮಾರಿನ ಸೈಬರ್ ಅಪರಾಧಗಳ ಕುರಿತು ನಡೆಸಿದ ಕಾರ್ಯಾಗಾರವು ಈ ಕ್ಷೇತ್ರದಲ್ಲಿನ ಪ್ರಥಮ ಕಾರ್ಯಾಗಾರವಾಗಿದೆ.

ಸಹ್ಯಾದಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿದ್ದು, ಕಾನೂನು ಪಾಲನೆಯ ಜವಾಬ್ದಾರಿ ಹೊಂದಿರುವ ಸಂಸ್ಥೆಗಳ ಸೈಬರ್ ಕಾನೂನು ಹಾಗೂ ಸುರಕ್ಷತಾ ತರಬೇತುದಾರರಾಗಿಯೂ ಸೇವೆ ಸಲ್ಲಿಸುತ್ತಿರುವ ಡಾ| ಅನಂತ ಪ್ರಭು ಜಿ. ಅವರು ಕಾರ್ಯಗಾರವನ್ನು ನಡೆಸಿಕೊಟ್ಟರು.

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು ನಮ್ಮ ದೇಶದ ವಿಮಾನ ನಿಲ್ದಾಣಗಳಿಗೆ ಭದ್ರತೆ ಒದಗಿಸುತ್ತಿದ್ದು, ಇದರ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೋವಿಡ್ ಸೇನಾನಿಗಳಾಗಿಯೂ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸೈಬರ್ ದಾಳಿಗಳು ವಾಯುಯಾನ ಕ್ಷೇತ್ರಕ್ಕೆ ಅತಿ ದೊಡ್ಡ ಅಪಾಯಗಳಲ್ಲಿ ಒಂದೆಂದು ಗುರುತಿಸಿಕೊಂಡಿವೆ. ನಿರ್ವಹಣಾ ವ್ಯವಸ್ಥೆಗೆ ಗಂಭೀರವಾದ ಹಾನಿಯನ್ನು ಉಂಟುಮಾಡಿ ಲಕ್ಷಾಂತರ ರೂಪಾಯಿಗಳನ್ನು ದೋಚುವುದಲ್ಲದೆ, ಉಗ್ರ ಸಂಘಟನೆಗಳು ಒಂದು ವಿಮಾನವನ್ನು ಏರುವ ಅಗತ್ಯವೂ ಇಲ್ಲದೆ ತಮ್ಮ ಗುರಿ ಸಾಧಿಸಲು ಈ ಸೈಬರ್ ದಾಳಿಗಳು ಬಳಕೆಯಾಗುತ್ತವೆ. ಕೆಲವು ವರ್ಷಗಳಿಂದೀಚೆಗೆ ಸೈಬರ್ ದಾಳಿಗಳ ಪ್ರಮಾಣ ಜಾಗತಿಕವಾಗಿ ಗರಿಷ್ಟ ಏರಿಕೆಯನ್ನು ಕಂಡಿರುವುದು ಚಿಂತೆಯ ವಿಚಾರ ಎಂದವರು ವಿಷಯ ಮಂಡಿಸಿದರು.

ಮಂಗಳೂರನ್ನು ಜಗತ್ತಿನ ಅತ್ಯಂತ ಸುರಕ್ಷಿತ ವಿಮಾನ ನಿಲ್ದಾಣಗಳಲ್ಲಿ ಒಂದಾಗಿಸುವ ಗುರಿ ಹಾಗೂ ಉದ್ದೇಶಗಳೊಂದಿಗೆ ಡಾ| ಅನಂತ ಪ್ರಭು ಅವರು ಕಾರ್ಯಾಗಾರದಲ್ಲಿ ಈ ಕೆಳಗಿನ ವಿಚಾರಗಳನ್ನು ಪ್ರಮುಖವಾಗಿ ಚರ್ಚಿಸಿದರು:

ಎ) ವಾಣಿಜ್ಯ ಉದ್ದೇಶದ ವಿಮಾನ ನಿಲ್ದಾಣಗಳಲ್ಲಿ ಸೈಬರ್ ಸುರಕ್ಷತಾ ಕ್ರಮಗಳ ಅನುಷ್ಠಾನ ಪ್ರಮಾಣ
ಬಿ) IoT ಮತ್ತು ಸ್ಮಾರ್ಟ್ ಸಾಧನಗಳ ಸ್ಥಾಪನೆ ಹಾಗೂ ಬಳಕೆಯಿಂದ ಒದಗುವ ದುರುದ್ದೇಶಪೂರಿತ ಬೆದರಿಕೆಗಳು
ಸಿ) ದುರುದ್ದೇಶಪೂರಿತ ದಾಳಿಗಳಿಂದ ಆಗಬಹುದಾದ ಅಪಾಯಗಳ ವಿಶ್ಲೇಷಣೆ ಮತ್ತು ಅಪಾಯ ತಗ್ಗಿಸುವ ಕ್ರಮಗಳು
ಡಿ) ಕಾರ್ಯಾಚರಣೆ ಅಭ್ಯಾಸಗಳು ಮತ್ತು ಅತ್ಯಾಧುನಿಕ ವಿಮಾನ ನಿಲ್ದಾಣಗಳಲ್ಲಿ ಬಲಿಷ್ಟ ಸೈಬರ್ ಸುರಕ್ಷತೆ ಆಡಳಿತವನ್ನು ಅಭಿವೃದ್ಧಿಪಡಿಸುವ ತಂತ್ರಗಳು.
ಇ) ವಿಮಾನ ನಿಲ್ದಾಣದ ಸಮುದಾಯವು ಅಪಾಯಗಳನ್ನು ಗ್ರಹಿಸುವ ವಿಧಾನ, ತ್ವರಿತ ಕಾರ್ಯಾಚರಣೆ ಮೂಲಕ ಸೈಬರ್ ಸೆಕ್ಯೂರಿಟಿ ವಿಧಾನಗಳನ್ನು ಬಲಪಡಿಸಿ, ಸೈಬರ್ ದಾಳಿಯ ಅಪಾಯಗಳನ್ನು ನಿವಾರಿಸುವ ಕ್ರಮಗಳು.

ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಈ ಕಾರ್ಯಾಗಾರದಲ್ಲಿ ವಿವಿಧ ಹಂತಗಳ ಸುಮಾರು 150 ಅಧಿಕಾರಿಗಳು ಭಾಗವಹಿಸಿದ್ದರು. ಸಿ‌ಐ‌ಎಸ್‌ಎಫ್/ಸಿ‌ಎ‌ಎಸ್‌ಒ ಡೆಪ್ಯೂಟಿ ಕಮಾಂಡೆಂಟ್ ಶ್ರೀ ಕೃಷ್ಣ ಪ್ರಕಾಶ್, ಸಿ‌ಐ‌ಎಸ್‌ಎಸ್ ಸಹಾಯಕ ಕಮಾಂಡೆಂಟ್ ಶ್ರೀ ಸಮರ್ಥ ರಂಗಿ ನೀಲಕಂಠ್, ಸಂಪರ್ಕ ಅಧಿಕಾರಿ ಗೋಪಾಲಕೃಷ್ಣ. ಛಾಯಾಗ್ರಾಹಕ ಕೀರ್ತನ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Comments are closed.