ಮಂಗಳೂರು: ‘ವಿಜಯನಗರ ಅರಸರ ಕಾಲದಿಂದಲೂ ದಸರಾ ಸಾಹಿತ್ಯ – ಸಾಂಸ್ಕೃತಿಕ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ಈ ಪರಂಪರೆಯನ್ನು ಮೈಸೂರಿನ ಒಡೆಯರು ಮುಂದುವರಿಸಿದ್ದು, ಈಗಲೂ ಸರಕಾರದ ಆಶ್ರಯದಲ್ಲಿ ಹಾಗೆಯೇ ನಡೆಯುತ್ತಿದೆ.
ಮೈಸೂರಿನಲ್ಲಿ ರಾಜ್ಯಮಟ್ಟದ ದಸರಾ ಕವಿಗೋಷ್ಠಿ ವಿವಿಧ ಭಾಷೆಗಳಲ್ಲಿ ನಡೆಯುವಂತೆ ಸ್ಥಳೀಯ ವಾಗಿಯೂ ನಮ್ಮ ಕರಾವಳಿಯ ಭಾಷೆಗಳಲ್ಲಿ ಸಾಹಿತ್ಯದ ಕಾರ್ಯಕ್ರಮಗಳನ್ನು ಸಾಂಸ್ಕೃತಿಕ ವೈಭವದಷ್ಟೇ ಆದ್ಯತೆಯೊಂದಿಗೆ ಆಯೋಜಿಸಬೇಕಾಗಿದೆ.
ಅಕಾಡೆಮಿಗಳು ಮತ್ತು ಸಾಹಿತ್ಯಿಕ ಸಂಘಟನೆಗಳು ಈ ಬಗ್ಗೆ ಯೋಚಿಸಬೇಕು’ ಎಂದು ಕವಿ – ಕಲಾವಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ನಗರದ ನಮ್ಮ ಕುಡ್ಲ ಸಂಸ್ಥೆಯವರು ‘ಮಂಗಳೂರು ದಸರಾ ಸಂಭ್ರಮ’ ದ ಅಂಗವಾಗಿ ನಡೆಸಿದ ‘ಕರಾವಳಿ ಕಾವ್ಯ: ದಸರಾ ಕವಿಮೇಳ – 2020’ ಇದರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಜರಗಿದ ಕವಿ ಮೇಳದಲ್ಲಿ ಎಂಟು ಜನ ಕವಿಗಳು ಸ್ವರಚಿತ ಕವಿತೆಗಳನ್ನು ವಾಚಿಸಿದರು. ಡಾ.ಎಸ್.ಎಂ.ಶಿವಪ್ರಕಾಶ್ ( ಸಮೃದ್ಧ ಭಾರತ, ಮೀನು ಮಾರುಕಟ್ಟೆ ), ನಾರಾಯಣ ರೈ ಕುಕ್ಕುವಳ್ಳಿ (ಅಂದು – ಇಂದು, ದಾಯೆಗಿಂಚಾಂಡ್), ಕಾ.ವಿ. ಕೃಷ್ಣದಾಸ್ (ಬಿನ್ನಹ , ಮಾತಾ ನಮಡನೆ), ಡಾ.ಕಾತ್ಯಾಯಿನಿ ಕುಂಜಿಬೆಟ್ಟು ( ಉರಿಯುತ್ತಿದ್ದೇನೆ ಅಯ್ಯೋ , ಅನ್ನ – ಪರಮಾನ್ನ), ಅಕ್ಷಯ ಆರ್. ಶೆಟ್ಟಿ (ಪೋಜು, ಅಶೋಕವನದ ಸಂಪಾಯಿದ ಅಡಿಟ್),ಅಕ್ಷತಾ ರಾಜ್ ಪೆರ್ಲ ( ಬಳಿಯುತ್ತಿದ್ದಾನೆ ಬಣ್ಣ, ಬಾನದೂರುಗೊಂಜಿ ಓಲೆ ), ವಿದ್ಯಾ ಶ್ರೀ ಎಸ್. ಶೆಟ್ಟಿ ಉಳ್ಳಾಲ (ತುಳುವ ತಾಯಿ, ಸುಗಿಪು) ಮತ್ತು ಭಾಸ್ಕರ ರೈ ಕುಕ್ಕುವಳ್ಳಿ (ಕನ್ನಡದ ನುಡಿ ತೇರು ಸಾಗುತ್ತಿಹುದು, ಏತೊಂಜಿ ಮೋನೆಲು ಎಂಚೆಂಚಿ ಸುರ್ಪೊಲು) ಕವನಗಳನ್ನು ಪ್ರಸ್ತುತಪಡಿಸಿದರು.ನಮ್ಮ ಕುಡ್ಲದ ನಿರ್ದೇಶಕ ಲೀಲಾ ಕ್ಷ ಕರ್ಕೇರ ಅತಿಥಿಗಳನ್ನು ಗೌರವಿಸಿದರು.