ಮಂಗಳೂರು, ಅಕ್ಟೋಬರ್ 17: ‘ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದಡಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿರುವ “ಮಂಗಳೂರು ದಸರಾ ಮಹೋತ್ಸವ” ಕ್ಕೆ ಶನಿವಾರ ಕೋವಿಡ್ ವಾರಿಯರ್, ಎನ್ಆರ್ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಎಷ್ಟು ಪ್ರಸಿದ್ಧಿ ಪಡೆದಿದೆ ಎಂದರೆ ಜಗತ್ತಿನ ಮೂಲೆ ಮೂಲೆಗಳಿಂದ ಜನರು ಇಲ್ಲಿದೆ ಆಗಮಿಸುತ್ತಾರೆ. ಶ್ರೀ ಕ್ಷೇತ್ರವು ನವರಾತ್ರಿ ಉತ್ಸವ ಹಾಗೂ ಮಂಗಳೂರು ದಸರಾ ಮಹೋತ್ಸವ”ದ ಮೂಲಕ ಮತ್ತಷ್ಟು ಖ್ಯಾತಿ ಪಡೆದಿದ್ದು, ಜನಾಕರ್ಷಣೆಯ ಕೇಂದ್ರವಾಗಿದೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಶ್ರೀ ಜನಾರ್ದನ ಪೂಜಾರಿ ಅವರ ಆಶಯದಂತೆ ಈ ಬಾರಿ ಮಂಗಳೂರು ದಸರಾ ಮಹೋತ್ಸವವು ಕೊರೋನಾ ಸೋಂಕು ಹಿನ್ನೆಲೆಯಲ್ಲಿ ‘ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದಡಿ ನಡೆಯುತ್ತಿರುವುದರಿಂದ ಜನರ ಸುರಕ್ಷೆಯ ಕಾಳಾಜಿಯನ್ನು ತೋರಿಸುತ್ತಿದೆ.
ಪೂಜಾರಿಯವರ ನೇತ್ರತ್ವದಲ್ಲಿ ಮಹಿಳೆಯರು ಮತ್ತು ವಿಧವೆಯರಿಗೆ ಪ್ರಾಮುಖ್ಯತೆ ನೀಡುವಂತಹ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವ ಹಾಗೂ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಈ ಕ್ಷೇತ್ರದ ದಸರಾ ಮಹೋತ್ಸವ” ವನ್ನು ಉದ್ಘಾಟಿಸುವ ಸುವರ್ಣಾವಕಾಶ ನನ್ನ ಪಾಲಿಗೆ ಒದಗಿ ಬಂದಿರುವುದು ನನ್ನ ಸೌಭಾಗ್ಯವೇ ಸರಿ ಎಂದು ಡಾ. ಆರತಿ ಕೃಷ್ಣ ಹೇಳಿದರು.
ಸಾಂಪ್ರದಾಯಿಕ ಹುಲಿ ನೃತ್ಯ ತಂಡಗಳೊಂದಿಗೆ ಶಾರದಾ ಪ್ರತಿಮೆಯನ್ನು ಭವ್ಯ ಮೆರವಣಿಗೆಯಲ್ಲಿ ಕರೆ ತಂದು ದರ್ಬಾರ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಬೆಳಗ್ಗೆ 9.30ಕ್ಕೆ ಗುರುಪ್ರಾರ್ಥನೆ, 11.30ಕ್ಕೆ ಕಲಶ ಪ್ರತಿಷ್ಠೆ, 12.00 ದಸರಾಕ್ಕೆ ಚಾಲನೆ ನೀಡಲಾಯಿತು. ಬಳಿಕ 12.30ಕ್ಕೆ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠಾಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶ್ರೀ ಕ್ಷೇತ್ರದ ಆಡಳಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಖಜಾಂಚಿ ಪದ್ಮರಾಜ್ ಆರ್ (ಆಡ್ವಕೇಟ್), ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.
ಕಾರ್ಯಕ್ರಮಗಳ ವಿವರ :
ಇಂದು ಸಂಜೆ 7.00ರಿಂದ ಭಜನಾ ಕಾರ್ಯಕ್ರಮ 9.00ರಿಂದ ದೇವಿ ಪುಷ್ಪಾಲಂಕಾರ ಪೂಜೆ ನಡೆಯಲಿದೆ.
ಅ.18ರಂದು ದುರ್ಗಾ ಹೋಮ, ಅ.19ರಂದು ಆರ್ಯ ದುರ್ಗಾ ಹೋಮ, ಅ.20ರಂದು ಭಗವತೀ ದುರ್ಗಾ ಹೋಮ, ಅ.21ರಂದು ಕುಮಾರಿ ದುರ್ಗಾ ಹೋಮ, ಅ.22ರಂದು ಅಂಬಿಕಾ ದುರ್ಗಾ ಹೋಮ, ಅ.23ರಂದು ಮಹಿಷ ಮರ್ದಿನಿ ದುರ್ಗಾ ಹೋಮ, ಅ.24ರಂದು ಚಂಡಿಕಾ ಹೋಮ, ಹಗಲೋತ್ಸವ, ಅ.25ರಂದು ಸರಸ್ವತೀ ದುರ್ಗಾ ಹೋಮ, 11.30ಕ್ಕೆ ಗೋಕರ್ಣನಾಥ ದೇವರಿಗೆ ಶತ ಸೀಯಾಳಾಭಿಷೇಕ, ಅ.26ರಂದು ವಾಗೀಶ್ವರಿ ದುರ್ಗಾ ಹೋಮ, ಅ.27ರಂದು ರಾತ್ರಿ 8.00ಕ್ಕೆ ಗುರುಪೂಜೆ ನಡೆಯಲಿದೆ.
ಪ್ರತಿನಿತ್ಯ ಮಧ್ಯಾಹ್ನ ಅನ್ನಸಂತರ್ಪಣೆ:
ಪ್ರತಿನಿತ್ಯ ಮಧ್ಯಾಹ್ನ 12.30ರಿಂದ 2.30ರತನಕ ದೇವಸ್ಥಾನದ ನಿರ್ಗಮನ ದ್ವಾರದಲ್ಲಿ ಅನ್ನಪ್ರಸಾದ ಪ್ಯಾಕೇಟ್ ನೀಡಲಾಗುವುದು.
ಅ. 26ರಂದು ನವದುರ್ಗೆ, ಶಾರದಾ ವಿಸರ್ಜನೆ:
ಅ.26ರ ಸೋಮವಾರದಂದು ಬೆಳಗ್ಗೆ 10.00ಕ್ಕೆ ವಾಗೀಶ್ವರಿ ದುರ್ಗಾ ಹೋಮ, 1.00ಕ್ಕೆ ಶಿವಪೂಜೆ, 1.15ಕ್ಕೆ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ, ರಾತ್ರಿ 7.30ರಿಂದ ಪುಷ್ಕರಣಿಯಲ್ಲಿ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ, ಶ್ರೀಶಾರದಾ ವಿಸರ್ಜನೆ, ಅವಭೃತ ಸ್ನಾನ ನಡೆಯಲಿದೆ.
ಮಂಗಳೂರು ದಸರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಈ ಕೆಳಗಿನ ಸೂಚನೆಗಳನ್ನು ನೀಡಲಾಗಿದೆ.
ಸೂಚನೆಗಳು:
6 ವರ್ಷದೊಳಗಿನ ಮಕ್ಕಳನ್ನು ಉತ್ಸವದ 10 ದಿನ ದೇವಳಕ್ಕೆ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ, ಕ್ಷೇತ್ರಕ್ಕೆ ಆಗಮಿಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು, ಮಾಸ್ಕ್ ಇಲ್ಲದವರಿಗೆ ಪ್ರವೇಶ ಕಡ್ಡಾಯ ನಿಷೇಧ, ದೇವಸ್ಥಾನ ಪ್ರಾಂಗಣ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ಯಾನ್ಗೊಳಪಡಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ದೇವಸ್ಥಾನದ ವಠಾರ, ದೇವಾಲಯದೊಳಗೆ, ದರ್ಬಾರು ಮಂಟಪದಲ್ಲಿ ಮೊಬೈಲ್ ಬಳಕೆ, ಫೋಟೋ, ಸೆಲ್ಫಿ ಕಡ್ಡಾಯ ನಿಷೇಧ. ಹಿರಿಯ ನಾಗರಿಕರು ಮನೆಯಲ್ಲೇ ದೇವರ ದರ್ಶನಕ್ಕೆ ಅನುಕೂಲವಾಗುವಂತೆ ನೇರ ಪ್ರಸಾರ, ಇವರ ಪರವಾಗಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಗುವುದು ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ (ಆಡ್ವಕೇಟ್) ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ: ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ( 94482 83999) ಅಥವಾ ದೇವಳ ಕಚೇರಿ (0824-2983040)ಯನ್ನು ಸಂಪರ್ಕಿಸಬಹುದು.