ಬೆಂಗಳೂರು : ಕನ್ನಡ ನಾಡಿನ ವರನಟ , ರಸಿಕರ ರಾಜ , ಗಾನ ಗಂಧರ್ವ , ಅಭಿಮಾನಿಗಳ ದೇವರು, ಬಂಗಾರದ ಮನುಷ್ಯ ವರನಟ ಡಾ.ರಾಜ್ಕುಮಾರ್ ಅವರ ನೆನಪಲ್ಲಿ ಬಿಡುಗಡೆ ಮಾಡಲಾಗಿರುವ ಬಂಗಾರದ ನಾಣ್ಯ ಇದೀಗ ಸಾಮಾಜಿಕ ಜಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವರನಟ ಡಾ.ರಾಜ್ ಕುಮಾರ್ ಸಿನಿಮಾ ನಟ ನಟಿಯರಿಗೆ ಮಾತ್ರವಲ್ಲ, ರಾಜಕಾರಣಿಗಳು, ಉದ್ಯಮಿಗಳು, ಜನ ಸಾಮಾನ್ಯರಿಗೂ ಮಾದರಿಯಾಗಿದ್ದಾರೆ. ಸಿನಿ ಕ್ಷೇತ್ರದಲ್ಲಿನ ಅಪಾರ ಕೊಡುಗೆಗಾಗಿ ಅಣ್ಣಾವ್ರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಪಾಲ್ಕೆ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ರಾಜ್ಯದ ಉದ್ದಗಲಕ್ಕೂ ರಾಜ್ ಪುತ್ಥಳಿ, ರಾಜ್ಕುಮಾರ್ ರಸ್ತೆ, ಡಾ.ರಾಜ್ ಸರ್ಕಲ್ಗಳಿವೆ. ಅಂತಹ ಮಹಾನ್ ವ್ಯಕ್ತಿ ಡಾ.ರಾಜ್ಕುಮಾರ್.
ತಮ್ಮ ಚಿತ್ರಗಳ ಮೂಲಕ ಬಹಳಷ್ಟು ಜನಸಾಮಾನ್ಯರ ಬದುಕನ್ನು ಬದಲಿಸಿದ ಬಂಗಾರದ ಮನುಷ್ಯ, ನೇತ್ರದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾದ ಮಹಾನ್ ಪುರುಷ. ಇವರ ಸೇವೆ ಅಪಾರವಾದದ್ದು, ಈ ಮೇರು ನಟರನ್ನು ಎಷ್ಟು ಹೊಗಳಿದರೂ ಕಮ್ಮಿ. ಇವರ ಸೇವೆಯನ್ನು ಗಮನಿಸಿ ರಾಜ್ಯ , ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಮನ್ನಣೆ ದೊರಕಿದೆ. ಪದ್ಮಭೂಷಣ,ಕರ್ನಾಟಕ ರತ್ನ, ದಾದಾ ಸಾಹೇಬ್ ಪಾಲ್ಕೆ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಡಾ.ರಾಜ್ ಭಾಜನರಾಗಿದ್ದಾರೆ.
ಮೇರು ನಟ ಡಾ. ರಾಜ್ಕುಮಾರ್ ಅವರ ಸ್ಮರಣಾರ್ಥ ನಾನಾ ಸಂಸ್ಥೆಗಳು, ಜನರು ನಾನಾ ಬಗೆಯಲ್ಲಿ ಗೌರವ ಸಲ್ಲಿಸುವುದು ನೋಡಿದ್ದೇವೆ. ಅದೇ ರೀತಿ ಇಲ್ಲಿ ಒಂದು ಖಾಸಗಿ ಸಂಸ್ಥೆ ವರನಟನ ನೆನಪಿನಲ್ಲಿ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಬಿಡುಗಡೆ ಮಾಡಿದೆ.
ಡಾ. ರಾಜ್ ಕುಮಾರ್ ಅವರ ಅಪರಿಮಿತ ಸೇವೆಗೆ ಕಲೆಕ್ಟಿಬಲ್ ಮಿಂಟ್ ಹೆಸರಿನ ಸಂಸ್ಥೆ ನಟ ಡಾ. ರಾಜ್ಕುಮಾರ್ ಚಿತ್ರವಿರುವ ಚಿನ್ನದ ನಾಣ್ಯವನ್ನು ಹೊರತಂದಿದೆ, ರಾಜ್ ಕುಟುಂಬದ ಅನುಮತಿ ಪಡೆದು ಸಂಸ್ಥೆ ಅಣ್ಣಾವ್ರ ಚಿತ್ರವಿರುವ 22 ಕ್ಯಾರೆಟ್ ಚಿನ್ನದ ನಾಣ್ಯ ಮತ್ತು ಬೆಳ್ಳಿಯ ನಾಣ್ಯವನ್ನು ಬಿಡುಗಡೆ ಮಾಡಿದೆ.
24 ಕ್ಯಾರೆಟ್ ಅಪ್ಪಟ ಬಂಗಾರ ಡಾ. ರಾಜ್ಕುಮಾರ್ಗೆ ಇದೀಗ 22ಕ್ಯಾರೆಟ್ ಚಿನ್ನದಲ್ಲಿ ನಾಣ್ಯ ಗೌರವ ನೀಡಲಾಗಿದೆ. 15 ಹಾಗೂ 25ಗ್ರಾಂ ಗಳಲ್ಲಿ ರಾಜ್ ಕುಮಾರ್ ನಾಣ್ಯ ಸಿದ್ದವಾಗಿದೆ. ಒಂದು ಕಡೆ ಅಣ್ಣಾವ್ರ ಮುಖವಿದ್ದರೆ , ಮತ್ತೊಂದೆಡೆ ರಾಜ್ಯದ ಲಾಂಛನ ಗಂಡಭೇರುಂಡ ಇದೆ. ಕಸ್ತೂರಿ ನಿವಾಸ ಹಾಗೂ ಶ್ರೀನಿವಾಸ ಕಲ್ಯಾಣದ ಅಣ್ಣಾವ್ರ ಚಿತ್ರವಿರುವ ಚಿನ್ನದ ನಾಣ್ಯದ ಮೇಲೆ ಕನ್ನಡದಲ್ಲಿ ಹಾಗೂ ಇಂಗ್ಲೀಷ್ನಲ್ಲಿ ಡಾ. ರಾಜ್ ಕುಮಾರ್ ಎಂದು ಬರೆಯಲಾಗಿದೆ.
ಈ ಮೂಲಕ ಬಂಗಾರದ ಮನುಷ್ಯನಿಗೆ ಚಿನ್ನದ ನಾಣ್ಯದ ಗೌರವ ನೀಡಲಾಗಿದೆ. ಅತ್ಯಾಕರ್ಷವಾಗಿರುವ ಈ ಚಿನ್ನದ ನಾಣ್ಯ ಇದೀಗ ಎಲ್ಲರ ಗಮನ ಸೆಳೆದಿದೆ. ಸೋಶಿಯಲ್ ಮಿಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಡಾ.ರಾಜ್ ಕುಮಾರ್ ಅವರ ಈ ಗೋಲ್ಟ್ ಕಾಯಿನ್ ಭಾರಿ ಸದ್ದು ಮಾಡುತ್ತಿದೆ.
ಈಗಾಗಲೇ ಹಲವು ಸಂಸ್ಥೆಗಳು ರಾಜ್ ಹೆಸರಿನಲ್ಲಿ ಸೇವೆ ಮಾಡುತ್ತಾ ಬರುತ್ತಿದೆ. ಇದೀಗ ಡಾ.ರಾಜ್ ಕುಮಾರ್ಗೆ ಚಿನ್ನದ ನಾಣ್ಯದ ಗೌರವ ನೀಡಿ ಅಣ್ಣಾವ್ರ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಿಸಿದ್ದಾರೆ. ಅಭಿಮಾನಿಗಳನ್ನು ದೇವರು ಎಂದೇ ಕರೆಯುತ್ತಿದ್ದ , ಈ ದೇವತಾ ಮನುಷ್ಯನಿಗೆ ಒಂದು ದೊಡ್ಡ ಅಭಿಮಾನದ ಕಾಣಿಕೆಯನ್ನು ನೀಡಿದಂತಾಗಿದೆ.
Comments are closed.