ಕರಾವಳಿ

ಯುವತಿ ಮೇಲೆ ಬಲಾತ್ಕಾರ: ಅಪರಾಧಿಗೆ 7 ವರ್ಷ ಸಜೆ ವಿಧಿಸಿದ ಕುಂದಾಪುರ ನ್ಯಾಯಾಲಯ

Pinterest LinkedIn Tumblr

ಕುಂದಾಪುರ: ಕಳೆದ ನಾಲ್ಕು ವರ್ಷಗಳ ಹಿಂದೆ ಯುವತಿಯೊಬ್ಬಳು ಮನೆಯಲ್ಲಿದ್ದ ವೇಳೆ ಮನೆಗೆ ಅಕ್ರಮ ಪ್ರವೇಶ ಮಾಡಿ ಆಕೆಯನ್ನು ಕೂಡಿಹಾಕಿ ಅತ್ಯಾಚಾರವೆಸಗಿದ ಆರೋಪ ಸಾಭೀತಾಗಿದ್ದು ಶಂಕರ್ ನಾಯ್ಕ ಎಂಬಾತ ದೋಷಿಯೆಂದು ಕುಂದಾಪುರದಲ್ಲಿನ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನರಹರಿ ಪ್ರಭಾಕರ್ ಮರಾಠೆ ಆದೇಶಿಸಿದ್ದಾರೆ.

2016ರ ಸೆ.18ರಂದು ಅಮಾಸೆಬೈಲು ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಂಗಡಿ ಎಂಬಲ್ಲಿ ಈ ಘಟನೆ ನಡೆದಿತ್ತು. ಅಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯಲ್ಲಿನ ಅಡುಗೆ ಕೋಣೆಯಲ್ಲಿದ್ದ 19 ವರ್ಷದ ಯುವತಿಯ ಮನೆಗೆ ಅಕ್ರಮ ಪ್ರವೇಶ ಮಾಡಿದ ಶಂಕರ ನಾಯ್ಕ ಆಕೆಯನ್ನು ಬಲವಂತವಾಗಿ ಕೂಡಿ ಹಾಕಿ ಅತ್ಯಾಚಾರವೆಸಗಿದ್ದ. ಈ ಬಗ್ಗೆ ಕುಂದಾಪುರದ ಅಂದಿನ ಸಿಪಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ವೈದ್ಯಕೀಯ ವರದಿಗಳು ಮತ್ತು ಸಂತ್ರಸ್ತೆ ನೀಡಿದ ಹೇಳಿಕೆಗಳು ನ್ಯಾಯಾಲಯದಲ್ಲಿ ಪ್ರಾಸಿಕ್ಯೂಶನ್ ಪರ ವಾದವನ್ನು ಬಲಪಡಿಸಿದ್ದು ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗೆ 7 ವರ್ಷ ಸಜೆ, 5 ಸಾವಿರ ದಂಡ, ಮನೆಗೆ ಅಕ್ರಮ ಪ್ರವೇಶ ಮತ್ತು ಯುವತಿಯನ್ನು ಕೂಡಿಹಾಕಿದ ಪ್ರಕರಣಕ್ಕೆ ಆರು ತಿಂಗಳು ಜೈಲು ವಾಸ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.

ಪ್ರಾಸಿಕ್ಯೂಶನ್ ಪರ ಉಡುಪಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದ ಮಂಡಿಸಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.