ತಿರುವನಂತಪುರ, ಅಕ್ಟೋಬರ್. 14 : ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಬಂದ್ ಮಾಡಲಾಗಿದ್ದ ಶಬರಿಮಲೆ ಅಯ್ಯಪ್ಪ ದೇಗುಲ ಅಕ್ಟೋಬರ್.16ರಿಂದ ತೆರೆಯಲಿದ್ದು, ಐದು ದಿನಗಳ ಕಾಲ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಐದು ದಿನ ನಡೆಯುವ ಪೂಜಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಸೇರಿದಂತೆ ಅಗತ್ಯ ಇರುವ ಎಲ್ಲಾ ಸಿದ್ದತೆಗಳನ್ನು ಪೂರ್ತಿಗೊಳಿಸಲಾಗಿದೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಒಂದು ಬಾರಿ 250 ಮಂದಿ ಭಕ್ತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.
ಕೇರಳ ಸಶಸ್ತ್ರ ಪೊಲೀಸ್ ಪಡೆ (ಕೆಎಪಿ)ಯ ಐದನೇ ಬೆಟಾಲಿಯನ್ ಕಮಾಂಡೆಂಟ್ ಕೆ. ರಾಧಾಕೃಷ್ಣನ್ ಅವರು ಇತ್ತೀಚಿಗೆ ದೇಗುಲಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ. ವಡಶ್ಶೇರಿಕ್ಕರ ಮತ್ತು ಎರುಮಲೆ ಮಾರ್ಗಗಳನ್ನು ಹೊರತುಪಡಿಸಿ ಇತರ ಎಲ್ಲಾ ಸಂಪರ್ಕಗಳನ್ನು ರದ್ದುಗೊಳಿಸಲಾಗಿದೆ.
ಇನ್ನು ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳು ನೀಲಕ್ಕಲ್ ಕ್ಯಾಂಪ್ ನಲ್ಲಿ ರ್ಯಾಪಿಡ್ ಕೋವಿಡ್ ಟೆಸ್ಟ್ ಗೆ ಒಳಗಾಗಬೇಕು. ಅಲ್ಲಿ ನೆಗೆಟಿವ್ ವರದಿಯಾದರೆ ಮಾತ್ರ ಮಲೆಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಪಂಪಾ ನದಿಯಲ್ಲಿ ಸ್ನಾನಕ್ಕೆ ಈ ಬಾರಿ ಅವಕಾಶ ಕಲ್ಪಿಸಲಾಗಿಲ್ಲ.
Comments are closed.