ಮಡಿಕೇರಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿನ 1,500 ಪೊಲೀಸರಿಗೆ ಈವರೆಗೂ ಕೊರೊನಾ ಸೋಂಕು ತಗುಲಿದ್ದು, ಈ ಪೈಕಿ 73 ಮಂದಿ ಸಾವಿಗೀಡಾಗಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾಹಿತಿ ನೀಡಿದರು. ಕೊರೊನಾ ಸೋಂಕಿತ ಪೊಲೀಸರಿಗೆ ಮಾನಸಿಕ ಸ್ಥೈರ್ಯ ನೀಡಲು ರಾಜ್ಯವ್ಯಾಪಿ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು.
ಕೊಡಗು ಜಿಲ್ಲೆ ಪೊಲೀಸ್ ವರಿಷ್ಟಾಧಿಕಾರಿ ಕಛೆರಿ ಸೇರಿದಂತೆ ಪೊಲೀಸ್ ಇಲಾಖೆಗಳ ವಿವಿಧ ಕಚೇರಿಗಳ ಅಧಿಕಾರಿಗಳ ಭೇಟಿಗೆ ಶನಿವಾರ ಆಗಮಿಸಿದ ವೇಳೆ ಅವರು ಮಾಧ್ಯಮದ ಜೊತೆ ಮಾತನಾಡಿದರು.
ಪ್ರಸ್ತುತ ಬೆಂಗಳೂರಿಗಿಂತಲೂ ಮೈಸೂರು, ಕಲ್ಬುರ್ಗಿ, ಕೋಲಾರ, ಬೆಳಗಾಂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರಗ್ಸ್ ಸಂಬಂಧಿತ ಪ್ರಕರನಗಳು ಹೆಚ್ಚೆಚ್ಚು ದಾಖಲಾಗಿದೆ. ಡ್ರಗ್ಸ್ ಸೇವಿಸುವವರು, ಫೆಡ್ಲರ್ಸ್ ಹಾಗೂ ಈ ಕಾನೂನು ಬಾಹಿರ ಚಟುವಟಿಕೆಯಲ್ಲಿ ಶಾಮೀಲಾಗಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಕ್ಷಮಾ ಮಿಶ್ರ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಮೊದಲು ಪ್ರವೀಣ್ ಸೂದ್ ಅವರು ಕೊಡಗು ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ದಕ್ಷಿಣ ವಲಯ ಐ.ಜಿ.ಪಿ ವಿಪುಲ್ ಕುಮಾರ್ ಜಿಲ್ಲೆಯ ಎಲ್ಲಾ ಡಿವೈ.ಎಸ್.ಪಿ., ಸಿ.ಪಿ.ಐ ಮತ್ತು ಪಿ.ಐ ರವರು ಪಾಲ್ಗೊಂಡಿದ್ದರು. ನಂತರ ಜಿಲ್ಲಾ ನಿಸ್ತಂತು (ವಯರ್ಲೆಸ್) ಕೇಂದ್ರಕ್ಕೆ ಭೇಟಿ ನೀಡಿ ತುರ್ತು ಸ್ಪಂದನ ಸಹಾಯ ವ್ಯವಸ್ಥೆ (112) ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಿ ಅಧಿಕಾರಿ ಸಿಬ್ಬಂದಿಯವರಿಗೆ ಸಲಹೆ ಸೂಚನೆ ನೀಡಿದರು. ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ರಚನೆಗೊಂಡಿರುವ ಮಹಿಳಾ ಪೊಲೀಸರ ‘ಕಾವೇರಿ ಪಡೆ’, ಶ್ವಾನ ದಳ, ಕ್ಯೂ.ಆರ್.ಟಿ. ತಂಡ ಹಾಗೂ ವಿಪತ್ತು ನಿರ್ವಹಣಾ ತಂಡಗಳೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು
Comments are closed.