ಕರಾವಳಿ

ಅಯೋಧ್ಯೆ ಮಸೀದಿಗೆ ಕುಂದಾಪುರ ಕೋಡಿ ಬದ್ರಿಯಾ ಮಸೀದಿ ಸ್ಫೂರ್ತಿ..!

Pinterest LinkedIn Tumblr

ಹೊಸದಿಲ್ಲಿ/ ಕುಂದಾಪುರ: ಅಯೋಧ್ಯೆಯಿಂದ 25 ಕಿ.ಮೀ. ದೂರದ ಧನ್ನಿಪುರ್‌ದಲ್ಲಿ ನಿರ್ಮಾಣವಾಗಲಿರುವ ನೂತನ ಮಸೀದಿ ಅತ್ಯಾಧುನಿಕವಾಗಿ ಮತ್ತು ಪರಿಸರ ಸ್ನೇಹಿಯೂ ಆಗಿ ಮೂಡಿಬರಲಿದ್ದು ಇದಕ್ಕೆ ಪ್ರೇರಣೆಯಾಗಿರುವುದು ಕುಂದಾಪುರದ ಕೋಡಿಯ ಬದ್ರಿಯಾ ಜುಮ್ಮಾ ಮಸೀದಿ.

ಉದ್ದೇಶಿತ ಮಸೀದಿಯ ವಿನ್ಯಾಸ ರೂಪಿಸುತ್ತಿರುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಕೂಲ್‌ ಆಫ್ ಆರ್ಕಿಟೆಕ್ಚರ್‌ನ ಸ್ಥಾಪಕ ಸಿಬಂದಿ ಎಸ್‌.ಎಂ. ಅಖ್ತರ್‌ ಈ ಸುಳಿವು ನೀಡಿದ್ದಾರೆ. ಹಳೆಯದನ್ನು ಅನುಕರಿದೇ ಆಧುನಿಕ ಮಾದರಿಯನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಖ್ತರ್‌ ಹೇಳಿದ್ದು ಸಾಮಾನ್ಯವಾಗಿ ಇರುವ ಮಸೀದಿಗಳ ರೀತಿಯಲ್ಲಿ ಇದು ನಿರ್ಮಾಣವಾಗುವುದಿಲ್ಲ. ಗುಮ್ಮಟ ಅಥವಾ ಕಮಾನು ಇರುವುದಿಲ್ಲ ಎಂದಿದ್ದಾರೆ. ಹೀಗಾಗಿ ಅವರಿಗೆ ಕುಂದಾಪುರ ಮತ್ತು ಕತಾರ್‌ನ ಮಸೀದಿಗಳು ಮಾದರಿಯಾಗಿದೆ ಎನ್ನಲಾಗಿದೆ.

(ಕೋಡಿ ಬದ್ರಿಯಾ ಮಸೀದಿ)

ಕೋಡಿ ಮಸೀದಿಯ ವಿಶೇಷತೆ….
ನಾಲ್ಕು ವರ್ಷದ ಹಿಂದೆ ಕುಂದಾಪುರದ ಕೋಡಿಯಲ್ಲಿ ನಿರ್ಮಾಣಗೊಂಡಿರುವ ಬದ್ರಿಯಾ ಜುಮಾ ಮಸೀದಿಯು ಜಗತ್ತಿನ ಪ್ರಥಮ ’ಶೂನ್ಯ ವಿದ್ಯುತ್’ (ಜೀರೋ ಎನರ್ಜಿ)ನ ಪರಿಸರ ಸ್ನೇಹಿ ಹಸಿರು ಮಸೀದಿಯಾಗಿದೆ. ಪರಿಸರ ಸ್ನೇಹಿ ಎಂಬ ಕಾರಣದಿಂದ ಮತ್ತು ಹಚ್ಚಹಸಿರ ವನಸಿರಿಯ ನಡುವೆ ಮೈದಳೆದಿರುವುದರಿಂದ ಈ ಮಸೀದಿಗೆ ’ಹಸಿರು ಮಸೀದಿ’ ಶುಭ್ರ ಶ್ವೇತ ವರ್ಣದಲ್ಲಿ ಕಂಗೊಳಿಸುತ್ತಾ ಆಕರ್ಷಣೀಯವಾಗಿದೆ. ಮಸೀದಿ ಆವರಣದಲ್ಲಿ ಹಿರಿಯರು ನೆಟ್ಟ ಮಾವು, ಹೊನ್ನೆ, ತೆಂಗಿನ ಮರಗಳನ್ನು ಹಾಗೆಯೇ ಉಳಿಸಿಕೊಂಡು ಹಚ್ಚಹಸಿರಿನ ಲಾನ್ ನಿರ್ಮಿಸಲಾಗಿದೆ. ನಡುವೆ ಚೆನ್ನೈಯಿಂದ ತರಿಸಿ ನೆಟ್ಟ ಖರ್ಜೂರದ ಮರಗಳು ಅಂದ ಹೆಚ್ಚಿಸಿವೆ. ವಿದೇಶದಲ್ಲಿ ಅಭ್ಯಸಿಸಿ ಬಂದ ಅಂತರ್‌ರಾಷ್ಟ್ರೀಯ ಖ್ಯಾತಿಯ ಕಲಾಕಾರ ಮುಕ್ತಾರ್ ಅಹಮದ್ ಮಸೀದಿಯ ಒಳಾಂಗಣದಲ್ಲಿ ಕುರಾನಿನ ಸಾಲುಗಳನ್ನು ಆಕರ್ಷಕವಾಗಿ ಕೆತ್ತಿದ್ದಾರೆ.

ಮಸೀದಿಯ ವೈಶಿಷ್ಟ್ಯತೆಗಳು: ಸುಸ್ಥಿರ ಅಭಿವೃದ್ಧಿಯ ಬಗ್ಗೆ ಮುತುವರ್ಜಿ ವಹಿಸುತ್ತಿರುವ ಬ್ಯಾರೀಸ್ ಗ್ರೂಪ್ ಈ ವಿನೂತನ ಮಸೀದಿ ನಿರ್ಮಾಣದ ಕಲ್ಪನೆಯನ್ನು ಸಾಕಾರಗೊಳಿಸಿದೆ. ಸುಸ್ಥಿರ ತಂತ್ರಜ್ಞಾನಗಳ ಮೂಲಕ ನಿರ್ಮಾಣವಾಗಿರುವ ಮಸೀದಿಯ ವಿನ್ಯಾಸವು ಇಸ್ಲಾಮಿಕ್ ವಾಸ್ತುಶಿಲ್ಪದಲ್ಲೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ. ನವೀಕರಿಸಬಹುದಾದ ಇಂಧನವಾದ ಪವನ ಮತ್ತು ಸೌರ (ವಿಂಡ, ಸೋಲಾರ್) ಶಕ್ತಿಯನ್ನು ಉಪಯೋಗಿಸಿಕೊಂಡು ಕಟ್ಟಡಕ್ಕೆ ಅಗತ್ಯವಿರುವ ವಿದ್ಯುತ್‌ನ್ನು ಪೂರೈಸುತ್ತಿರುವುದು ಈ ಹಸಿರು ವಿಸ್ಮಯದ ಪ್ರಮುಖ ವಿಶೇಷತೆ. ಮಸೀದಿಯೊಳಗೆ ತಾಪಮಾನ ಏರಿಕೆ ಕನಿಷ್ಟ ಮಟ್ಟದಲ್ಲಿರುವಂತೆ ಸುತ್ತಮುತ್ತಲೂ ಹಸಿರು ಮರಗಿಡಗಳು, ನೀರಿನ ಟ್ಯಾಂಕ್‌ಗಳಿವೆ. ’ಎಲ್’ ಆಕಾರದ ಕಟ್ಟಡದ ಯೋಜನೆ ಮತ್ತು ಎತ್ತರಿಸಿದ ಮಸೀದಿಯ ಸಭಾಂಗಣಗಳನ್ನು ನೈಸರ್ಗಿಕವಾಗಿ ತಂಪಾಗಿರುವಂತೆ ನಿರ್ಮಿಸಲಾಗಿದೆ.

ಸೌರತಾಪ ತಾಗದಂತೆ ನೋಡಿಕೊಳ್ಳುವ ಬಿಳಿ ಚೀನಾ ಟೈಲ್ಸ್‌ಗಳನ್ನು ಹಾಕಿ ವಿಶೇಷ ಟರ್ಬೊ ದ್ವಾರಗಳನ್ನು ಅಳವಡಿಸುವ ತಾರಸಿ ಇಡೀ ಮಸೀದಿಯನ್ನು ತಂಪಾಗಿಡುವುದು ಮಾತ್ರವಲ್ಲದೆ ಅಕ್ಕಪಕ್ಕದಲ್ಲೂ ಬಿಸಿಲಿನ ತಾಪವನ್ನು ಕಡಿಮೆಗೊಳಿಸುತ್ತದೆ. ಮಸೀದಿಯು ಮುಕ್ತ ಹೊದಿಕೆಯಿಂದ ಕೂಡಿದೆ. ಕಟ್ಟಡದ ನಿರ್ಮಾಣಕ್ಕೆ ಆವಾಹಕ ಗ್ಲಾಸ್ ರಿ‌ಇನ್‌ಫೋರ್ಸ್‌ಡ್ ಕಾಂಕ್ರೀಟ್ (ಜಿ‌ಆರ್‌ಸಿ) ಬಳಸಿ ಸ್ವಾಭಾವಿಕ ಗಾಳಿ-ಬೆಳಕು ಧಾರಾಳ ಸಿಗುವಂತೆ ರೂಪಿಸಲಾಗಿದೆ. ಇದರಿಂದ ಮಸೀದಿಯೊಳಗೆ ಬಿಸಿಲಿನ ಧಗೆ ಮತ್ತಷ್ಟು ಕಡಿಮೆಯಾಗಲಿದೆ.

ಈ ಮಸೀದಿಯ ಮಿನಾದ ಕೇವಲ ಪ್ರಾರ್ಥನೆಗೆ ಕರೆ ನೀಡಲು ಹಾಗೂ ಸೌಂದರ್ಯ ಹೆಚ್ಚಿಸಲು ಮಾತ್ರ ಸೀಮಿತವಾಗಿಲ್ಲ. ಈ 70ಅಡಿ ಎತ್ತರದ ಬಹೂಪಯೋಗಿ ಮಿನಾರದಿಂದ ಒಳ ಬರುವ ತಂಗಾಳಿ ಪ್ರಾರ್ಥನಾ ಸಭಾಂಗಣವನ್ನು ತಣ್ಣಗಾಗಿಸುತ್ತದೆ. ಈ ಮಿನಾರದ ಮೇಲೆಯೇ ಗಾಳಿಯನ್ನು ಬಳಸಿ ವಿದ್ಯುತ್ ಉತ್ಪಾದಿಸುವ ವಿಂಡ್ ಟರ್ಬೈನ್‌ಅನ್ನು ಅಳವಡಿಸಲಾಗಿದೆ.

ಸೌರ ಮತ್ತು ಪವನ ಶಕ್ತಿಯಂತಹ ನವೀಕರಿಸಬಹುದಾದ ಇಂಧನಗಳ ಬಳಕೆಯಿಂದ ಮಸೀದಿಯ ಬಳಕೆಗಿಂತ ಅಧಿಕ ವಿದ್ಯುತ್ ಉತ್ಪಾದನೆಯಾಗಲಿದೆ. ಈ ಹೆಚ್ಚುವರಿ ವಿದ್ಯುತ್ ಸರಕಾರದ ಗ್ರಿಡ್‌ಗೆ ರವಾನೆಯಾಗಲಿದ್ದು ಮುಂದಿನ 25 ವರ್ಷಗಳಿಗೆ ಮಸೀದಿಗೆ ’ಸಿ‌ಇ‌ಆರ್ (ಸರ್ಟಿಫೈಡ್ ಎಮಿಶನ್ ರಿಡಕ್ಷನ್) ಕ್ರೆಡಿಟ್’ ಕೂಡ ಲಭಿಸಿದೆ. ‘ಕಡಿಮೆ-ಮರುಬಳಕೆ-ಪುನರ್ಬಳಕೆ-ಮರು ಉತ್ಪಾದನೆ’ ಎಂಬ ತತ್ವಗಳ ಆಧಾರದಲ್ಲಿ ಮಸೀದಿಯು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡಿದೆ ಮತ್ತು ಅಮೂಲ್ಯವಾದ ಜೀವಜಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ’ಪ್ರೆಸ್‌ಮ್ಯಾಟಿಕ್ ಟೋಟೋ’ ನೀರಿನ ಜೋಡಣೆಗಳನ್ನು ಅಳವಡಿಸಿದೆ.

ಹೆಚ್ಚುಹೆಚ್ಚು ಪರಿಸರ ಸ್ನೇಹಿ ಕಟ್ಟಡಗಳು ನಿರ್ಮಾಣವಾದಾಗ ವಾತಾವರಣ ಮನುಷ್ಯನಿಗೂ ಪೂರಕವಾಗಿರುತ್ತದೆ. ಮಸೀದಿ, ದೇವಾಲಯ, ಚರ್ಚ್‌, ಬಸದಿಗಳು ಪರಿಸರ ಸ್ನೇಹಿಯಾಗಿ ನಿರ್ಮಾಣವಾದರೆ ಅವುಗಳಿಗೆ ಬರುವ ಜನರು ಕೂಡ ಅದೇ ಮಾರ್ಗದರ್ಶನದಲ್ಲಿ ಅವರ ಮನೆ, ಕಟ್ಟಡಗಳನ್ನು ಪರಿಸರ ಸ್ನೇಹಿಯಾಗಿ ನಿರ್ಮಿಸಿದರೆ ಜಗತ್ತಿಗೆ ಅದೊಂದು ಕೊಡುಗೆ.
– ಸೈಯದ್‌ ಅಹಮದ್‌ ಬ್ಯಾರಿ ರಾಜ್ಯಾಧ್ಯಕ್ಷರು, ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌, ಬೆಂಗಳೂರು

Comments are closed.